ಹಿಂದೆ ರಾಜಾಶ್ರಯದಲ್ಲಿ ಸಾಹಿತ್ಯ ರಚನೆ ಆಗುತ್ತಿತ್ತು. ರಾಜಮಹಾರಾಜರು ಸಾಹಿತ್ಯ, ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿದ್ದರು. ಈಗ ಅಂತಹ ಪ್ರೋತ್ಸಾಹ ಸಿಗುತ್ತಿಲ್ಲ. ಸರ್ಕಾರ ಪುಸ್ತಕಗಳನ್ನು ಖರೀದಿಸಿ ನಾಲ್ಕು ವರ್ಷಗಳಾಗಿವೆ. ಯಾವ ಸರ್ಕಾರಗಳೂ ಸಾಹಿತ್ಯವನ್ನು ಪ್ರೋತ್ಸಾಹಿಸುತ್ತಿಲ್ಲ ಈಗಿನ ರಾಜಕಾರಣಿಗಳಿಗೆ ಸಾಹಿತ್ಯ, ಸಂಸ್ಕೃತಿ ಬೇಕಾಗಿಲ್ಲ ಎಂದು ಸಾಹಿತಿ ಡಾ.ಕರೀಗೌಡ ಬೀಚನಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಮಕೂರು ನಗರದ ಕನ್ನಡ ಭವನದಲ್ಲಿ ಮಂಗಳವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಿಂದ ನಡೆದ ಸಂಸ್ಥಾಪನಾ ದಿನಾಚರಣೆ ಹಾಗೂ ವಿವಿಧ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಶಾಲಾ ಕಾಲೇಜು ಮಕ್ಕಳು ಪುಸ್ತಕ ಓದಬೇಕು. ಪುಸ್ತಕಗಳಲ್ಲಿ ಸಿಗುವ ಜ್ಞಾನ ಮೊಬೈಲ್ಗಳಲ್ಲಿ ಸಿಗುವುದಿಲ್ಲ, ಪುಸ್ತಕಗಳಲ್ಲಿ ಬಹುಮುಖಿ ಜ್ಞಾನ ದೊರೆಯುತ್ತದೆ ಎಂದು ಹೇಳಿದರು.
ಕನ್ನಡ ಭಾಷೆ ಸಾಹಿತ್ಯ, ಸಂಸ್ಕೃತಿ ಬೆಳೆಸಲು ಮೈಸೂರು ಮಹಾರಾಜರು 112 ವರ್ಷಗಳ ಹಿಂದೆ ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಲು ಕಾರಣರಾದರು. ಅಂದಿನಿಂದ ಇಂದಿನವರೆಗೆ ಪರಿಷತ್ತು ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ, ಪುಸ್ತಕ ಸಂಸ್ಕೃತಿ ಬೆಳೆಸುವ ಚಟುವಟಿಕೆ ನಡೆಸಿಕೊಂಡು ಬರುತ್ತಿದೆ. ಸರ್ಕಾರ ಹಾಗೂ ದಾನಿಗಳು ಪರಿಷತ್ತಿನ ಕಾರ್ಯಚಟುವಟಿಕೆಗಳಿಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ಧಲಿಂಗಪ್ಪ ಮಾತನಾಡಿ, ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳು ನಿಲ್ಲಬಾರದು, ನಿರಂತರವಾಗಿ ಮುನ್ನಡೆಯಬೇಕು. ಪರಿಷತ್ತಿನ ಚಟುವಟಿಕೆ ನಡೆದು ಬಂದಿರುವುದೇ ರಾಜಾಶ್ರಯದಲ್ಲಿ. ನಂತರ ಸರ್ಕಾರದ ಅನುದಾನದಲ್ಲಿ, ದಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪರಿಷತ್ತಿಗೆ ಸಹಾಯ ಮಾಡುತ್ತಿದ್ದಾರೆ. ಬೇಡುವ ಕೈ ಶುದ್ಧವಾಗಿದ್ದರೆ ಕೊಡುವ ಕೈಗಳಿಗೆ ಕೊರತೆಯಿಲ್ಲ ಎಂದು ಹೇಳಿದರು.
ತುಮಕೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳಿಗೆ ಅನೇಕ ದಾನಿಗಳು ಸಹಾಯಹಸ್ತ ನೀಡುತ್ತಾ ಬಂದಿದ್ದಾರೆ. ಹಲವು ಮಹನೀಯರು ದತ್ತಿನಿಧಿ ಇಟ್ಟು ಪ್ರೋತ್ಸಾಹಿಸುತ್ತಿದ್ದಾರೆ. ಪರಿಷತ್ತಿಗೆ ಸಹಾಯ ಮಾಡುವವರ ಸಂಖ್ಯೆ ಮತ್ತಷ್ಟು ಹೆಚ್ಚಲಿ ಎಂದು ತಿಳಿಸಿದರು.
ದೇವಪ್ರಕಾಶ್ ಮಾತೃಶ್ರೀ ಭಾಗೀರಥಮ್ಮ ದತ್ತಿ ಪ್ರಶಸ್ತಿಯನ್ನು ಸುಶೀಲ ಸದಾಶಿವಯ್ಯ ಅವರಿಗೆ ಪ್ರವಾಸ ಸಾಹಿತ್ಯಕ್ಕಾಗಿ, ಮಕ್ಕಳ ಸಾಹಿತ್ಯದ ಶಾಂಪುರ ಭಾಗೀರಥಮ್ಮ ನೆನಪಿನ ಪ್ರಶಸ್ತಿಯನ್ನು ಪ.ನಾ. ಹಳ್ಳಿ ಹರೀಶ್ಕುಮಾರ್ ಅವರಿಗೆ, ದೇವಪ್ರಕಾಶ್ ಹಾಸ್ಯ ಸಾಹಿತ್ಯ ಪ್ರಶಸ್ತಿಯನ್ನು ತುರುವೇಕೆರೆ ಮಂಜೇಶ್ ಅವರಿಗೆ ಹಾಗೂ ದೇವಪ್ರಕಾಶ್ ಮಾಧ್ಯಮ ಪ್ರಶಸ್ತಿಯನ್ನು ಹಿರಿಯ ಪತ್ರಿಕಾಛಾಯಾ ಗ್ರಾಹಕರಾದ ಟಿ.ಆರ್. ರೇಣುಕಾಪ್ರಸಾದ್ ಹಾಗೂ ಟಿ.ಹೆಚ್. ಸುರೇಶ್ ಅವರಿಗೆ ಪ್ರದಾನ ಮಾಡಲಾಯಿತು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷೆ ಬಾ.ಹ. ರಮಾಕುಮಾರಿ, ಕೈಗಾರಿಕೋದ್ಯಮಿ ಹೆಚ್.ಜಿಚಂದ್ರಶೇಖರ್, ಸರ್ವೋದಯ ಶಿಕ್ಷಣ ಸಂಸ್ಥೆ ಜಂಟಿ ಕಾರ್ಯದರ್ಶಿ ಕೆ.ವಿ. ಸುಬ್ಬರಾವ್, ಇತಿಹಾಸ ಸಂಶೋಧಕ ಡಾ. ಡಿ.ಎನ್. ಯೋಗೀಶ್ವರಪ್ಪ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಕಂಟಲಗೆರೆ ಸಣ್ಣಹೊನ್ನಯ್ಯ, ಕೋಶಾಧ್ಯಕ್ಷ ಎಂ.ಹೆಚ್. ನಾಗರಾಜು ಇದ್ದರು.


