ಸಂವಿಧಾನದ ಸಮರ್ಪಕ ಜಾರಿಯ ಮೂಲಕ ಸಮಾನತೆ, ಜಾತಿ ಮುಕ್ತ ಸಮಾಜ ನಿರ್ಮಾಣದ ಕನಸು ಕಂಡವರು ಬಾಬೂಜಿ,ಆದರೆ ಇಂದಿಗೂ ಅವರ ಕನಸು ನನಸಾಗಿಲ್ಲ. ದೇಶದಲ್ಲಿ ಬಿಜೆಪಿ ಆಡಳಿತಕ್ಕೆ ಬಂದ ನಂತರ, ಬಡವರು, ದೀನ ದಲಿತರು, ಅಲ್ಪಸಂಖ್ಯಾತರು, ಶೋಷಿತರ ಪರವಾಗಿದ್ದ ಸಂವಿಧಾನದ ಒಂದೊಂದೇ ಅಂಶಗಳಿಗೆ ತಿದ್ದುಪಡಿ ತರುವ ಮೂಲಕ ಅದರ ಶಕ್ತಿ ಕುಗ್ಗಿಸುವ ಕೆಲಸ ಮಾಡುತ್ತಿದೆ ಎಂದು ಮಾಜಿ ಶಾಸಕ ಷಫೀ ಅಹಮದ್ ಹೇಳಿದರು.
ತುಮಕೂರು ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಭಾರತ ಮಾಜಿ ಉಪಪ್ರಧಾನಿ ಬಾಬು ಜಗಜೀವನ್ ರಾಂ ಅವರ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ತುಮಕೂರು ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಕ್ಬಾಲ್ ಮಾತನಾಡಿ, ನೆಹರು ಸೇರಿದಂತೆ ಹಲವು ಪ್ರಧಾನಿಗಳ ಸಂಪುಟದಲ್ಲಿ 35 ವರ್ಷಗಳಿಗೂ ಹೆಚ್ಚು ಕಾಲ ಕ್ಯಾಬಿನೆಟ್ ಸಚಿವರಾಗಿ ಕೆಲಸ ಮಾಡಿದ್ದ ಬಾಬೂಜಿ, ಅವರ ಅಪಾರ ಅನುಭವವನ್ನು ಧಾರೆ ಎರೆದು ಈ ದೇಶ ಆಹಾರ ಸ್ವಾವಲಂಬನೆ, ರಕ್ಷಣೆಗೆ ತನ್ನದೆ ಆದ ಕೊಡುಗೆ ನೀಡಿದ್ದಾರೆ. ಅವರ ದಾರಿಯಲ್ಲಿ ನಾವು ನಡೆಯುವ ಮೂಲಕ ದೇಶವನ್ನು ಮತ್ತೊಮ್ಮೆ ಸ್ವಾವಲಂಬನೆಯತ್ತ ತೆಗೆದುಕೊಂಡು ಹೋಗಬೇಕಾಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ಸೈಯದ್ ದಾದಾಪೀರ್ ಮಾತನಾಡಿ, ಬಾಬು ಜಗಜೀವನ್ ರಾಂ ಅವರು ಕಾರ್ಮಿಕ ಮಂತ್ರಿಯಾಗಿ ಈ ದೇಶದಲ್ಲಿ ಕನಿಷ್ಠ ವೇತನ ಜಾರಿಗೆ ತಂದು, ಕಾರ್ಮಿಕರು ಘನತೆಯ ಬದುಕಿಗೆ ನಾಂದಿ ಹಾಡಿದರು. ಅಂಬೇಡ್ಕರ್ ಅವರು ಕಾರ್ಮಿಕ ಸಚಿವರಾಗಿ ತಂದ ಹೊಸ ಕಾಯ್ದೆಗಳನ್ನು ತಮ್ಮ ಕಾಲದಲ್ಲಿ ಪರಿಪೂರ್ಣವಾಗಿ ಜಾರಿಗೊಳಿಸುವ ಮೂಲಕ ದೇಶದ ಕೈಗಾರಿಕೆಗಳು ಬೆಳೆಯಲು ನೇರವಾದ ಕೊಡುಗೆ ನೀಡಿದ್ದಾರೆ. ಕಾರ್ಮಿಕ ವಿಭಾಗ ಜಿಲ್ಲೆಯಲ್ಲಿ ಮತ್ತಷ್ಟು ಸಶಕ್ತವಾಗಿ ಕೆಲಸ ಮಾಡಲಿದೆ ಎಂದು ಹೇಳಿದರು.
ಹಿರಿಯ ಮುಖಂಡ ರೇವಣ್ಣ ಸಿದ್ದಯ್ಯ ಮಾತನಾಡಿ,ಬಾಬೂಜಿ ಅವರು ಸಂಪರ್ಕ ಖಾತೆ ಸಚಿವರಾಗಿದ್ದಾಗ ಪೋಸ್ಟ್ ಮೆನ್ಗಳಿಗೆ ಸೈಕಲ್ ನೀಡುವ ವ್ಯವಸ್ಥೆ ಜಾರಿಗೆ ತಂದು ಇಲಾಖೆ ಮತ್ತಷ್ಟು ಚುರುಕಾಗಿ ಕೆಲಸ ಮಾಡುವಂತೆ ಮಾಡಿದರು. ಕನಿಷ್ಟ ವೇತನದ ಜೊತೆಗೆ, ಹರಿಜನ ಕಾಲೋನಿಗಳಿಗೆ ಸ್ವಂತ ಹಣದಲ್ಲಿ ಕೊಳವೆ ಬಾವಿ ಕೊರೆಯಿಸಿ, ಕುಡಿಯುವ ನೀರು ಒದಗಿಸುವ ಮೂಲಕ ಅವರು ಸಹ ಜೀವ ಜಲವನ್ನು ಯಾರ ಹಂಗಿಲ್ಲದಂತೆ ಬಳಸುವ ಘನತೆಯ ಬದುಕು ನೀಡಿದರು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ನಿಂಗರಾಜು ಮಾತನಾಡಿ, ಸ್ವಾತಂತ್ರ ನಂತರದಲ್ಲಿ ಭಾರತದ 33 ಕೋಟಿ ಜನಸಂಖ್ಯೆಗೆ ಆಹಾರ ನೀಡಲು ಪರದಾಡುತ್ತಾ, ಬೇರೆ ದೇಶಗಳ ಮೇಲೆ ಅವಲಂಬಿತರಾಗಿದ್ದ ವೇಳೆ, ತಾವು ಕೃಷಿ ಖಾತೆ ವಹಿಸಿಕೊಂಡ ನಂತರ ವಿದೇಶಗಳಲ್ಲಿ ಅಧ್ಯಯನ ಪ್ರವಾಸ ಮಾಡಿ, ಅಲ್ಲಿನ ಅಧುನಿಕ ತಂತ್ರಜ್ಞಾನ, ರಸಾಯನಿಕ ಕೃಷಿ ಪದ್ದತಿ, ಅಧಿಕ ಇಳುವರಿಯ ತಳಿಗಳನ್ನು ಪರಿಚಯಿಸುವ ಮೂಲಕ ಇಂದು 150 ಕೋಟಿ ಜನರು ತಿಂದು ಮಿಗಿಲುವಷ್ಟು ಆಹಾರ ಉತ್ಪಾಧನೆಗೆ ಬಾಬು ಜಗಜೀವನ್ ರಾಂ ಕಾರಣ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಉಪಾಧ್ಯಕ್ಷ ಸಿದ್ದಾಪುರ ರಂಗಸ್ವಾಮಯ್ಯ, ಜಿಲ್ಲಾ ಕಾಂಗ್ರೆಸ್ ಎಸ್.ಸಿ ಘಟಕದ ಅಧ್ಯಕ್ಷ ನಿಂಗರಾಜು, ವಾಲೆಚಂದ್ರು, ಕಾನೂನು ಘಟಕದ ಅಧ್ಯಕ್ಷ ಸುರೇಶಕುಮಾರ್, ಎಸ್ಟಿ ಘಟಕದ ಕುಮಾರಸ್ವಾಮಿ, ಒಬಿಸಿ ಘಟಕದ ಅನಿಲ್ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಉಪಾಧ್ಯಕ್ಷ ಪಂಚಾಕ್ಷರಯ್ಯ, ಶಿವಾಜಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಮುಖಂಡರಾದ ಸಿಮೆಂಟ್ ಮಂಜುನಾಥ್, ಅಂಬರೀಷ್, ವೈ.ಎನ್.ನಾಗರಾಜು, ನಟರಾಜ ಶೆಟ್ಟಿ, ಕೈದಾಳ ರಮೇಶ್, ಸೇವಾದಳದ ಭೈಲಸ್ವಾಮಿ, ಹರೀಶ್, ಮಂಜುನಾಥ್, ನಯಾಜ್ ಅಹಮದ್ ಇದ್ದರು.


