ಪ್ರಸ್ತುತ ಸಮಾಜದಲ್ಲಿ ಜಾತಿ, ಧರ್ಮಗಳನ್ನು ಒಡೆಯುವಂತಹ ದುಷ್ಟಶಕ್ತಿಗಳಿಂದ ಜನರನ್ನು ಒಗ್ಗೂಡಿಸುವ ವಿಶೇಷ ಶಕ್ತಿ ರಂಗಭೂಮಿ ಕಲೆಗೆ ಇದೆ ಎಂದು ನಾಡೋಜ ಡಾ. ಬರಗೂರು ರಾಮಚಂದ್ರಪ್ಪ ತಿಳಿಸಿದರು.
ತುಮಕೂರು ನಗರದ ಡಾ. ಗುಬ್ಬಿ ವೀರಣ್ಣ ಕಲಾ ಕ್ಷೇತ್ರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಜಿಲ್ಲಾ ರಂಗಭೂಮಿ ಕಲಾವಿದರ ಸಂಘ ಹಾಗೂ ಅಖಿಲ ಕರ್ನಾಟಕ ಕೀರ್ತನ ಕಲಾ ಪರಿಷತ್ ಸಂಯುಕ್ತಾಶ್ರಯದಲ್ಲಿ ಕಲಾಶ್ರೀ ಲಕ್ಷ್ಮಣದಾಸ್ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭವನ್ನು ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದ ಅವರು, ಸಮಾಜದಲ್ಲಿ ವೃತ್ತಿ ರಂಗಭೂಮಿ ಭಾವೈಕ್ಯತೆಯನ್ನು ಕಟ್ಟಿಕೊಟ್ಟಿದೆ. ಮೂಲತಃ ರಂಗಭೂಮಿ ಕಲಾವಿದ ಲಕ್ಷ್ಮಣ್ದಾಸ್ ಒಂದು ರೂಪಕವಾಗಿ ಮುಖ್ಯವಾಹಿನಿಗೆ ಬರುವ ಮುಖೇನ ಸವಾಲು ಸ್ವೀಕರಿಸುವ ಅನೇಕ ಪ್ರತಿಭೆಗಳಿಗೆ ಉತ್ತೇಜಕರಾಗಿದ್ದಾರೆ ಎಂದರು.
ಲಕ್ಷ್ಮಣ್ದಾಸ್ ಮೂಲತಃ ರಂಗಭೂಮಿಯಿಂದ ಬಂದವರು. ಅವರೊಳಗೆ ಕಥಾಕೀರ್ತನಕಾರ, ರಂಗಭೂಮಿ, ನಾಟಕಕಾರ ಹಾಗೂ ಒಬ್ಬ ನಟನೂ ಇದ್ದಾನೆ. ಇವೆಲ್ಲದರ ಸಮಾಗಮ ಲಕ್ಷ್ಮಣ್ದಾಸ್ ಅವರು ಎಂದರು. ರಂಗಭೂಮಿ ಸೇವೆಯನ್ನು ರಂಗಭೂಮಿ ಕ್ರಿಯಾಶೀಲತೆ ಎಂದು ಕರೆಯಬಹುದು. ಅನೇಕ ರಂಗಭೂಮಿ ನಾಟಕಗಳಲ್ಲಿ ಲಕ್ಷ÷್ಮಣ್ದಾಸ್ ಅವರು ಅಭಿನಯಿಸಿದ್ದಾರೆ. ಜತೆಗೆ ಅನೇಕ ಸಿನಿಮಾ ಕಲಾವಿದರೊಂದಿಗೆ ಬೇರೆ ಬೇರೆ ನಾಟಕಗಳಲ್ಲೂ ಅಭಿನಯಿಸಿರುವ ಅನುಭವ ಹೊಂದಿದ್ದಾರೆ ಎಂದರು.
ಕಲಾ ಪ್ರಕಾರಗಳು ಸಾಮಾಜಿಕ ವಿಭಜನೆಗೆ ಒಳಪಟ್ಟಿರುವ ಸನ್ನಿವೇಶದಲ್ಲಿ ನಾವಿದ್ದೇವೆ. ಇಂತಹ ಸಮಾಜದ ಒಳಗೆ ಅಲ್ಪಸ್ವಲ್ಪ ಬದಲಾವಣೆ ಆಗಿಲ್ಲ ಎನ್ನುವುದು ಸುಳ್ಳಾಗುತ್ತದೆ. ಶಿಕ್ಷಣ ಬಂದ ಮೇಲೆ ಸಮಾಜದಲ್ಲಿ ಅನೇಕ ರೀತಿಯ ಸ್ಥಿತ್ಯಂತರ ನಡೆದಿರುವುದೂ ಉಂಟು ಎಂದರು.
ಸಾಮಾಜಿಕ ಸೀಮೋಲ್ಲಂಘನೆಯ ಪ್ರತಿಭೆಗಳ ಸಂಖ್ಯೆ ಹೆಚ್ಚಾದಂತೆ ಜನರ ನಡುವೆ ಸಾಮರಸ್ಯವನ್ನು ನಾವು ನೋಡಬಹುದಾಗಿದೆ ಎಂದು ತಿಳಿಸಿದರು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಮಾತನಾಡಿ, ಗ್ರಾಮೀಣ ರಂಗಭೂಮಿಯನ್ನು ಸಶಕ್ತವಾಗಿ ಕಟ್ಟಿರುವುದು ತುಮಕೂರು ಜಿಲ್ಲೆಯಲ್ಲಿ ಮಾತ್ರ. ರಂಗಭೂಮಿ ಕಲಾವಿದರು ಅಭಿನಯಿಸಲು ತಮ್ಮ ಕೈಯಿಂದಲೇ ಹಣ ಹಾಕಿಕೊಂಡು ಇಡೀ ರಾತ್ರಿ ನಾಟಕದಲ್ಲಿ ಅಭಿನಯಿಸುತ್ತಾರೆ. ಈ ಮೂಲಕ ಗ್ರಾಮೀಣ ರಂಗಭೂಮಿಯನ್ನು ಕಲಾವಿದರು ಗಟ್ಟಿಯಾಗಿ ಕಟ್ಟುತ್ತಿದ್ದಾರೆ ಎಂದರು.
ಗ್ರಾಮೀಣ ರಂಗಭೂಮಿಯ ಕಲಾವಿದರನ್ನು ಇದುವರೆಗೂ ನಾಟಕ ಅಕಾಡೆಮಿಯ ಅಧ್ಯಕ್ಷರನ್ನಾಗಿ ಮಾಡಿಲ್ಲ. ಇದಕ್ಕೆ ಕಾರಣ ರಂಗಭೂಮಿ ಕಲಾವಿದರು ಸಂಘಟಿತರಾಗದಿರುವುದೇ ಕಾರಣ ಎಂದರು.
ಅಧ್ಯಕ್ಷತೆಯನ್ನು ಶಾಸಕ ಜಿ.ಬಿ. ಜ್ಯೋತಿಗಣೇಶ್ ವಹಿಸಿದ್ದರು. ಹಿರಿಯ ರಂಗಕರ್ಮಿ, ಹರಿಕಥಾ ವಿದ್ವಾನ್ ಕಲಾಶ್ರೀ ಲಕ್ಷ್ಮಣ್ದಾಸ್ ಅವರನ್ನು ಅಭಿನಂದಿಸಲಾಯಿತು.
ಸಮಾರಂಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್. ಸಿದ್ದಲಿಂಗಪ್ಪ, ಕಲಾವಿದರ ಸಂಘದ ಅಧ್ಯಕ್ಷ ಶಿವಣ್ಣ, ಧನಿಯಕುಮಾರ್, ಯೋಗಾನಂದ್, ಎಂ.ವಿ. ನಾಗಣ್ಣ, ವಸಂತಕುಮಾರ್, ಡಾ. ಡಿ.ಎನ್. ಯೋಗೀಶ್ವರಪ್ಪ, ಉಮಾಮಹೇಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಈಶ್ವರ್ ಕು. ಮಿರ್ಜಿ, ಚಿಕ್ಕಬೆಳ್ಳಾವಿ ಶಿವಕುಮಾರ್, ಲೋಕೇಶ್ದಾಸ್, ಗೋಪಾಲ ಸ್ವಾಮಿ ಇದ್ದರು.


