ಮುಂಬರುವ ಬಜೆಟ್ ಅಧಿವೇಶನದಲ್ಲಿ ಒಳಮೀಸಲಾತಿ ಖಾತ್ರಿಪಡಿಸಿ, ಸಂಪೂರ್ಣ ಒಳಮೀಸಲಾತಿಗೆ ಒತ್ತಾಯಿಸಿ ಫೆ.23 ರಂದು ರಾಜ್ಯದಾದ್ಯಂತ ಎಲ್ಲಾ ಉಸ್ತುವಾರಿ ಸಚಿವರ ಮನೆ ಮುಂದೆ ಪ್ರತಿಭಟನೆ ಕಾರ್ಯಕ್ರಮದ ಪೂರ್ವಭಾವಿಯಾಗಿ ಫೆ.14ರಂದು ತುಮಕೂರಿನಲ್ಲಿ ಒಳಮೀಸಲಾತಿ ಹೋರಾಟ ಸಮಿತಿ ವತಿಯಿಂದ ಸಭೆ ನಡೆಸಲಾಯಿತು.
ಒಳಮೀಸಲಾತಿ ಜಾರಿ ಹೋರಾಟ ಸಮಿತಿಯ ಬಸವರಾಜ ಕೌತಾಳ್ ಮಾತನಾಡಿ, ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರಕಾರ ಒಳಮೀಸಲಾತಿ ಹೋರಾಟಕ್ಕೆ ನಾವು ತಾರ್ತಿಕ ಅಂತ್ಯ ಕೊಟ್ಟಿದ್ದೇವೆ ಎಂಬ ಭ್ರಮೆಯಲ್ಲಿದೆ. ಆದರೆ ಇದು ಶುದ್ದ ಸುಳ್ಳು, ಮೂವತ್ತೊಂದು ವರ್ಷಗಳಿಂದ ನಮ್ಮ ಹೋರಾಟಕ್ಕೆ ಇಂದಿಗೂ ಪರಿಪೂರ್ಣ ನ್ಯಾಯ ದೊರೆಕಿಲ್ಲ. ಹಲವು ಬಾರಿ ಭೇಟಿ ಮಾಡಿದಾಗಲು ನಾವು ಎಲ್ಲವನ್ನು ಮಾಡಿ ಮುಗಿಸಿದ್ದೇವೆ ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಒಳಮೀಸಲಾತಿ ಜಾರಿಗೆಯಾಗಿದೆ ಇನ್ನೇನು ಎಂಬ ಆಲೋಚನೆಯಲ್ಲಿಯೇ ಮಾದಿಗ ಸಮುದಾಯವೂ ಇದೆ. ಆದರೆ ಒಳಗೆ ಹಳ್ಳ ಹಿಡಿದಿದೆ. ಜಾರಿ ಸಂದರ್ಭದಲ್ಲಿ ಆಗುವ ತೊಂದರೆಗಳು, ಇದರ ಹಿನ್ನೆಲೆಯಲ್ಲಿ ಹುಟ್ಟಿಕೊಂಡಿರುವ ವಿರೋಧಾಭಾಸಗಳು, ಆರಂಭವಷ್ಟೇ, ಹಾಗಾಗಿ ಇನ್ನೂ ಸಂಘರ್ಷ ಮುಂದುವರೆದಿದೆ, ಮುಂದುವರೆಯಲಿದೆ. ಈ ಹಿನ್ನೆಲೆಯಲ್ಲಿ ಎರಡನೇ ಹಂತದ ಹೋರಾಟ ನಡೆಸಬೇಕಾದ ಅನಿವಾರ್ಯವಾಗಿದೆ ಎಂದರು.
ರಾಜ್ಯ ಸರಕಾರ ಸುಪ್ರಿಂಕೋರ್ಟಿಗೆ ಪಕ್ಕದ ಆಂಧ್ರ, ತಮಿಳುನಾಡು, ಹರಿಯಾಣ, ಪಂಜಾಬ್ ಸರಕಾರ ಮಾಡಿರುವುದನ್ನೇ ನಾವು ಮಾಡಿದ್ದೇವೆ ಎಂಬ ಹಾರಿಕೆ ಹೇಳಿಕೆಯನ್ನು ನೀಡಿದೆ. ಜಾರಿಗೆ ಬಂದಿರುವ ಒಳಮೀಸಲಾತಿ ಅನ್ವಯ ನೇಮಕಾತಿ ಮಾಡುತ್ತೇವೆ, ಆದರೆ ಬಡ್ತಿ ಮೀಸಲಾತಿಯ ಬಗ್ಗೆ ಬಾಯಿ ಬೀಡುತ್ತಿಲ್ಲ. ಆದರೆ ಬಡ್ತಿ ಮೀಸಲಾತಿ ಹೊಸ ಕಾಯ್ದೆಗೆ ತಿದ್ದುಪಡಿ ಸರಿಪಡಿಸುವ ಮಾತುಗಳನ್ನಾಡುತ್ತಿದೆ. ಆದರೆ ಒಳಮೀಸಲಾತಿಯನ್ನು ತಾತ್ವಿಕವಾಗಿ ಒಪ್ಪಿಕೊಂಡು, ಅದನ್ನು ಜಾರಿಗೆ ತರುವ ಪ್ರಾಮಾಣಿಕ ಪ್ರಯತ್ನವನ್ನು ಸರಕಾರ ಮಾಡುತ್ತಿಲ್ಲ ಎಂದು ದೂರಿದರು.
ತುಮಕೂರು ಜಿಲ್ಲಾ ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ಫೆ.23 ರಂದು ನಗರದ ಟೌನ್ಹಾಲ್ನಿಂದ ಹೊರಟು ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿಗೆ ತೆರಳಿ ಮನವಿ ಸಲ್ಲಿಸುವ ಕೆಲಸ ಮಾಡಲಾಗುವುದು. ಒಳಮೀಸಲಾತಿ ಸಂಪೂರ್ಣ ಜಾರಿಗೆ, ಬ್ಯಾಕ್ಲಾಗ್ ಹುದ್ದೆಗಳ ಭರ್ತಿ ಹಾಗೂ ಬಡ್ತಿ ಮೀಸಲಾತಿಯಲ್ಲಿ ಒಳಮೀಸಲಾತಿ ಜಾರಿ, ಹಾಗೂ ಎಸ್ಸಿ, ಎಸ್ಟಿ ಮೀಸಲಾತಿ ಪ್ರಮಾಣ ಹೆಚ್ಚಳವನ್ನು ಸಂವಿಧಾನದ 9ನೇ ಷಡ್ಯೂಲ್ಗೆ ಸೇರಿಸುವುದು ಇನ್ನಿತರ ಬೇಡಿಕೆಗಳನ್ನು ಮುಂದಿಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಹಿರಿಯರಾದ ದೊರೈರಾಜು, ವೈ.ಹೆಚ್.ಹುಚ್ಚಯ್ಯ ಹಾಗೂ ಪಾವಗಡ ಶ್ರೀರಾಮ ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ನರಸೀಯಪ್ಪ, ಶಿವನಂಜಯ್ಯ ಇದ್ದರು.


