ಮುಖ್ಯಮಂತ್ರಿ ಬದಲಾವಣೆಗೆ ಸಂಬಂಧಿಸಿದಂತೆ ನವೆಂಬರ್ 14ರ ವರೆಗೂ ಏನೂ ನಡೆಯುವುದಿಲ್ಲ. ಈಗ ನಡೆಯುತ್ತಿರುವ ನಾಯಕತ್ವ ಬದಲಾವಣೆ ವಿಷಯವೆಲ್ಲವೂ ಗಾಳಿಯಲ್ಲಿ ಗುಂಡು ಹಾರಿಸಿದಂತೆ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಶಾಸಕ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈಗ ನಡೆಯುತ್ತಿರುವ ಸಿಎಂ ಬದಲಾವಣೆಯ ಚರ್ಚೆ ಕೇವಲ ಗಾಳಿಯಲ್ಲಿ ಗುಮಡು ಹೊಡೆದಂತೆ ಆಗಿದೆ ಎಂದು ಹೇಳಿದ್ದಾರೆ.
ದಲಿತರು ಮುಖ್ಯಮಂತ್ರಿ ಆಗಿಲ್ಲ ಎನ್ನುವ ಕೂಗು ಮೊದಲಿನಿಂದಲೂ ಇದೆ. ಕಾಂಗ್ರೆಸ್ ಪಕ್ಷ ಎಲ್ಲರಿಗೂ ಅನುಕೂಲ ಮಾಡಿಕೊಟ್ಟಿದೆ. ಹಾಗೆಂದು ಸಚಿವರಾದ ಕೆ.ಎಚ್.ಮುನಿಯಪ್ಪ, ಡಾ.ಜಿ.ಪರಮೇಶ್ವರ್ ಮುಖ್ಯಮಂತ್ರಿ ಆಗುತ್ತಾರೆ ಎಂದು ಹೇಳಲು ಬರುವುದಿಲ್ಲ ಎಂದು ತಿಳಿಸಿದರು.
ಈ ಹಿಂದೆ ರಾಜ್ಯದಲ್ಲಿ ಮೂವರು ಉಪಮುಖ್ಯಮಂತ್ರಿಗಳು ಆಗಬೇಕೆಂದು ನಾನೇ ಹೇಳಿದ್ದೆ. ಇದರಿಂದ ಕಳೆದ ಲೋಕಸಭೆಯಲ್ಲಿ ಅನುಕೂಲವಾಗುತ್ತಿತ್ತು. ಹಾಗಾಗಿ ನಾನು ವಾದ ಮಾಡಿದ್ದೆ. ಈಗಲೂ ಅಲ್ಪಸಂಖ್ಯಾತರನ್ನು ಸೇರಿ ಉಪಮುಖ್ಯಮಂತ್ರಿಗಳನ್ನು ಮಾಡಿದರೆ ಒಳ್ಳೆಯದು ಎಂದರು.
ರಾಜಕಾರಣದಲ್ಲಿ ಹೇಳುವುದು ಮತ್ತು ಮಾಡುವುದರಲ್ಲಿ ಬಹಳ ವ್ಯತ್ಯಾಸವಿದೆ. ಹಿಂದೆ ನಾನು ಚುನಾವಣೆ ಸ್ಪರ್ಧಿಸುವುದಿಲ್ಲ ಎಂದು ಹೇಳಿದ್ದೆ. ಹಾಗೆಂದು ಮುಂದೆ ಸ್ಪರ್ಧಿಸುವುಇಲ್ಲ ಎಂದು ಯಾವ ಗ್ಯಾರೆಂಟಿ. ಹಾಗೆಯೇ ಸಿದ್ದರಾಮಯ್ಯ ಅವರಿಗೆ ಒತ್ತಡ ಇದೆ. ಸಿಎಂ ಯಾರು ಆಗಬೇಕು ಎನ್ನುವುದು ಪಕ್ಷದ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟ ವಿಷಯ. ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು ಎಂಬ ಆಶಯವು ಇದೆ ಎಂದು ಕೆಎನ್ ರಾಜಣ್ಣ ವಿವರಿಸಿದರು.
ಒಬಿಸಿಗೂ ಮೀಸಲಾತಿ ಕೊಡಬೇಕು
ಸ್ಥಳೀಯ ಸಂಸ್ಥೆಗಳಲ್ಲಿರುವಂತೆ ವಿಧಾನಸಭೆ ಮತ್ತು ಲೋಕಸಭೆಗೆ ಪರಿಶಿಷ್ಟ ಜಾತಿ, ಪಂಗಡದವರಿಗೆ ಮೀಸಲಾತಿ ಕ್ಷೇತ್ರ ಕೊಡಬೇಕು. ಮಹಿಳಾ ಮೀಸಲಾತಿ ತರುವ ಚಂತನೆಯಂತೆ ಹಿಂದುಳಿದ ವರ್ಗಕ್ಕೂ ಮೀಸಲಾತಿ ಕೊಡಬೇಕು. ಕೇಂದ್ರ ಸರ್ಕಾರ ಇದನ್ನು ಮಾಡಬೇಕು ಎಂದು ಆಗ್ರಹಿಸಿದರು.
ಅಮೆರಿಕಾದಲ್ಲಿರುವಂತೆ ಇಲ್ಲೂ ಅಧಿಕಾರ ಸೀಮಿತಗೊಳಿಸಬೇಕು. ಅಮೆರಿಕಾದಲ್ಲಿ ಎರಡು ಬಾರಿ ಮಾತ್ರ ಅಧ್ಯಕ್ಷರಾಗಿ ಆಯ್ಕೆಯಾಗಲು ಅವಕಾಶವಿದೆ.ಹಾಗೆಯೇ ನಮ್ಮ ದೇಶದಲ್ಲೂ ಕಾನೂನು ಜಾರಿಯಾಗಬೇಕು ಎಂದು ಸಲಹೆ ನೀಡಿದರು.


