ತುಮಕೂರು ಮಹಾನಗರ ಪಾಲಿಕೆಯ ಪ್ರಸ್ತುತ ವ್ಯಾಪ್ತಿಯನ್ನು ವಿಸ್ತರಿಸಲು ಸರ್ಕಾರ ಚಿಂತನೆ ಮಾಡಿರುವುದು ಅನುಷ್ಠಾನಕ್ಕೆ ಬಂದರೆ ನಗರ, ಗ್ರಾಮಗಳ ಜನರ ಜನಜೀವನ ದುಸ್ತರವಾಗಲಿದ್ದು, ಪ್ರಸ್ತಾವನೆ ಕೈಬಿಡಬೇಕೆಂದು ಬೃಹತ್ ತುಮಕೂರು ಮಹಾನಗರಪಾಲಿಕೆ ವಿಸ್ತರಣೆ ವಿರೋಧಿ ಹೋರಾಟ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.
ತುಮಕೂರು ನಗರದ ಮುರುಘ ರಾಜೇಂದ್ರ ಸಭಾಭವನದಲ್ಲಿ ಸಮಿತಿಯ ಸಂಚಾಲಕ ಕೆ.ಪಿ.ಮಹೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪಾಲಿಕೆ ವ್ಯಾಪ್ತಿಯ 14 ಪಂಚಾಯತಿಗಳ 54 ಹಳ್ಳಿಗಳನ್ನು ಸೇರಿಸಿ ಬೃಹತ್ ತುಮಕೂರು ಮಹಾನಗರ ಪಾಲಿಕೆ ಮಾಡುವ ಸರ್ಕಾರದ ಪ್ರಸ್ತಾವನೆಯನ್ನು ಬಲವಾಗಿ ವಿರೋಧಿಸಿ ಖಂಡನಾ ನಿರ್ಣಯ ಅಂಗೀಕರಿಸಲಾಯಿತು.
ಹೋರಾಟ ಸಮಿತಿ ಸಂಚಾಲಕ ಕೆ.ಪಿ.ಮಹೇಶ್ ಮಾತನಾಡಿ, ರಾಜಧಾನಿ ಬೆಂಗಳೂರಿಗೆ ಕೇವಲ 70 ಕಿ.ಮೀ.ದೂರ ಇದ್ದು, ರಾಜ್ಯದ ವಿವಿಧ 25ಕ್ಕೂ ಹೆಚ್ಚು ಜಿಲ್ಲೆಗಳು ರಾಜಧಾನಿ ಬೆಂಗಳೂರು ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ತುಮಕೂರು ಮಹಾನಗರಪಾಲಿಕೆ ಸುತ್ತಮುತ್ತ 3 ಮೆಡಿಕಲ್ ಕಾಲೇಜು, 7 ಇಂಜಿನಿಯರಿಂಗ್ ಕಾಲೇಜು, ಕೈಗಾರಿಕೆ, ಶಿಕ್ಷಣ, ಜನಸಾಂದ್ರತೆ ಹಾಗೂ ಆರ್ಥಿಕ ಚಟುವಟಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತುಮಕೂರು ಮಹಾನಗರಪಾಲಿಕೆ ವಿಸ್ತರಣೆ ಅವಶ್ಯಕವಾಗಿದೆ ಎಂಬ ಬಗ್ಗೆ ಸರ್ಕಾರ ಪಡೆದಿರುವ ಗೊಂದಲದ ಮಾಹಿತಿ ಬಗ್ಗೆ ತಿಳಿಸಿದರು.
ಪಾಲಿಕೆ ವಿಸ್ತರಣೆ ಮಾಡುವುದರಿಂದ ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ಮಾತ್ರ ಅನುಕೂಲವಾಗಿ, ಜನರು ಝರ್ಜರಿತರಾಗುತ್ತಾರೆ. ಜನರು ಕೊಳ್ಳುವ ಸೈಟ್ ಬೆಲೆ ಗಗನಕ್ಕೇರಿವುದಲ್ಲದೆ, ಆಸ್ತಿ ತೆರಿಗೆ ಪಾವತಿಯೂ ಹೆಚ್ಚಿ ಆಸ್ತಿ ತೆರಿಗೆದಾರರಿಗೆ ಭಾರೀ ತೆರಿಗೆ ಹೊರೆಯಾಗುತ್ತದೆ. ಈ ಹಿಂದೆ ತುಮಕೂರಿಗೆ ಸೇರ್ಪಡೆಗೊಂಡ 22 ಹಳ್ಳಿಗಳ ಸಮಗ್ರ ಅಭಿವೃದ್ಧಿಗೊಳ್ಳದೆ ಮೂಲ ಸೌಕರ್ಯಗಳಿಲ್ಲದೆ ತತ್ತರಿಸಿ ಹೋಗಿದೆ. ಜತೆಗೆ ಆಸ್ತಿ ತೆರಿಗೆ ಹೊರೆಯಿಂದ ನಲುಗಿ, ಹಿಡಿಶಾಪ ಹಾಕುತ್ತಿರುವ ಸ್ಥಿತಿ ನಿರ್ಮಾಣವಾಗಿದೆ. ಸರ್ಕಾರದ ಈಗಿನ ಪ್ರಸ್ತಾವನೆಯು ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸನ್ನು ನುಚ್ಚುನೂರು ಮಾಡಲಿದೆ ಎಂದರು.
ನಗರ ವಿಸ್ತರಿಸುವುದರಿಂದ ಮೂಲ ಸೌಕರ್ಯಗಳಿಗೆ ಆದ್ಯತೆ ನೀಡಲು ಮಹಾನಗರಪಾಲಿಕೆ ವಿಫಲವಾಗುತ್ತದೆ. ಹೊಸ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಮೂಲಸೌಕರ್ಯ ಒದಗಿಸಲು ಹಣ ಬಿಡುಗಡೆ ವಿಳಂಬವಾಗಲಿದೆ. ಇದರಿಂದ ಜನರ ಬದುಕಿನ ಮೇಲೆ ನೇರ ಪರಿಣಾಮ ಬೀರುವುದಲ್ಲದೆ, ವಿದ್ಯಾರ್ಥಿಗಳಿಗೆ ಗ್ರಾಮೀಣ ಕೃಪಾಂಕ ಸಿಗುವುದಿಲ್ಲ. ರೈತ ಸಮುದಾಯದವರು ಸರ್ಕಾರದಿಂದ ಪಡೆಯುತ್ತಿದ್ದ ವಿವಿಧ ವಿಶೇಷ ಸೌಲಭ್ಯಗಳು ಸಿಗದೆ ಪರದಾಡುವಂತಾಗುತ್ತದೆ. ವಾಣಿಜ್ಯ, ಕೈಗಾರಿಕೆ, ಶಿಕ್ಷಣ ವ್ಯವಸ್ಥೆ, ವಾಹನಗಳ ದಟ್ಟಣೆಯಿಂದ ಪರಿಸರದ ಮೇಲೂ ಪರಿಣಾಮ ಬೀರಿ, ಜನರ ಬದುಕೇ ಬದಲಾಗುತ್ತದೆ. ಹೀಗಾಗಿ ಪಾಲಿಕೆ ವ್ಯಾಪ್ತಿ ವಿಸ್ತರಿಸುವ ಪ್ರಸ್ತಾವನೆ ಸರ್ಕಾರ ಕೈಬಿಡಬೇಕೆಂದು ಆಗ್ರಹಿಸಿದರು.
ಸಭೆಯಲ್ಲಿ ಪಾಲಿಕೆ ವಿಸ್ತರಿಸುವ ಸರ್ಕಾರದ ನಡವಳಿಕೆ ಹಾಗೂ ಪ್ರಸ್ತಾವನೆಗೆ ಭಾರೀ ವಿರೋಧ ವ್ಯಕ್ತವಾಯಿತು. ಜಿ.ಪಂ ಮಾಜಿ ಸದಸ್ಯ ಜಿ.ಎಸ್.ಶಿವಕುಮಾರ್, ಮುಖಂಡರಾದ ನವರತ್ನ ಕುಮಾರ್ ಹಾಗೂ ರತ್ನಮ್ಮ, ಮೈದಾಳ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಮಂಜುನಾಥ, ದೊಡ್ಡ ನಾರವಂಗಲದ ರವೀಶ್, ಕೆಸರುಮಡು ಕೃಷ್ಣಪ್ಪ, ತುಮಕೂರಿನ ರಫೀಕ್ ಅಹಮದ್, ವಿವೇಕ್ ವಿರೋಧ ವ್ಯಕ್ತಪಡಿಸಿದರು.


