ರಾಜ್ಯ ಸರ್ಕಾರ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆಸುತ್ತಿರುವ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ ಸಮೀಕ್ಷೆಯನ್ನು ಪಟ್ಟಭದ್ರ ಹಿತಾಸಕ್ತಿಗಳು ವಿರೋಧಿಸುತ್ತಿದ್ದು, ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಜಾಗೃತ ಕರ್ನಾಟಕದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಅನಿಲ್ ಕುಮಾರ್ ಚಿಕ್ಕದಾಳವಾಟ ತಿಳಿಸಿದರು.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, 1903ರ ಮಿಲ್ಲರ್ ಆಯೋಗದಿಂದ ಹಿಡಿದು, ನ್ಯಾ.ಕಾಂತರಾಜು ಆಯೋಗದ ವರದಿಯವರೆಗೆ ಮುಂದುವರೆದು, ಈಗಲೂ ಸಹ ವರದಿ ಸರಿಯಾಗಿ ನಡೆದಿಲ್ಲ ಎಂಬ ನೆಪವೊಡ್ಡಿ ವರದಿಯ ಶಿಫಾರಸ್ಸುಗಳನ್ನು ವಿರೋಧಿಸಲು ಕೆಲ ಪಕ್ಷಗಳ ಮುಖಂಡರು ಸಂಚು ರೂಪಿಸುತ್ತಿದ್ದಾರೆ. ಇವರಿಗೆ ಸಂಪತ್ತಿನ ಸಮಾನ ಹಂಚಿಕೆ ಆಗುವುದು ಬೇಕಿಲ್ಲ ಎಂದು ಆರೋಪಿಸಿದರು.
ಸರ್ಕಾರ ರಾಜ್ಯದಲ್ಲಿ ವಾಸಿಸುತ್ತಿರುವ ಜನರ ಸಾಮಾಜಿಕ, ಅರ್ಥಿಕ, ಶೈಕ್ಷಣಿಕ ಸ್ಥಿತಿಗತಿ ತಿಳಿಯುವ ನಿಟ್ಟಿನಲ್ಲಿ ಸಮೀಕ್ಷೆ ನಡೆಸಲು ಹೊರಟಿದೆ. ಇದು ಸ್ವಾಗತಾರ್ಹ ಬೆಳವಣಿಗೆ. ಸರ್ಕಾರ ನಡೆಸುತ್ತಿರುವ ಈ ಗಣತಿಯಿಂದ ಇದುವರೆಗೂ ಕುಲಕಸುಬುಗಳನ್ನೇ ನಂಬಿ ಅತಂತ್ರ ಸ್ಥಿತಿಯಲ್ಲಿದ್ದ ಹತ್ತಾರು ಹಿಂದುಳಿದ ಮತ್ತು ಅತಿ ಹಿಂದುಳಿದ ಜಾತಿಗಳ ಜನರನ್ನು ಮೇಲೆತ್ತಲು ಅವಶ್ಯವಿರುವ ಯೋಜನೆಗಳನ್ನು ರೂಪಿಸಲು ಕಲೆ ಹಾಕುತ್ತಿರುವ ದತ್ತಾಂಶ ಇದಾಗಿದೆ. ಈ ದತ್ತಾಂಶದಿಂದ ಒಬಿಸಿ ಪಟ್ಟಿಯಲ್ಲಿರುವ ಹಲವಾರು ತಳ ಸಮುದಾಯಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಸರ್ಕಾರ ಈಗಾಗಲೇ ಶೇ.75ರಷ್ಟು ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಿದೆ. ಶೇ100ರಷ್ಟು ಸಮೀಕ್ಷೆ ಪೂರ್ಣಗೊಳ್ಳಲು ನಾಡಿನ ಎಲ್ಲ ವರ್ಗದ ಜನರು ಸಮೀಕ್ಷೆಯಲ್ಲಿ ಪಾಲ್ಗೊಳ್ಳುವಂತೆ ಕೋರಿದರು.
ಜಾಗೃತ ಕರ್ನಾಟಕದ ಮುಖಂಡ ಹರೀಶ್ ಕಮ್ಮನಕೋಟೆ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸವಲತ್ತುಗಳು ತಲುಪಬೇಕಾದರೆ ಹಾಗೂ ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸಲು, ಸಮಾಜಿಕ ನ್ಯಾಯ ಒದಗಿಸಲು ಸರ್ಕಾರ ಈಗ ನಡೆಸುತ್ತಿರುವ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ಅನಿವಾರ್ಯವಾಗಿದೆ. ಈ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಬಿಜೆಪಿ ನಾಯಕರ ತಿರುಚಿದ ಹೇಳಿಕೆಗಳ ಹಿಂದೆ ಬಹುದೊಡ್ಡ ಷಡ್ಯಂತ್ರ ಅಡಗಿದೆ ಎಂದರು.
ವಕೀಲ ಕಿಶೋರ್, ಜಾಗೃತ ಕರ್ನಾಟಕದ ರಾಜ್ಯ ಸಮಿತಿ ಸದಸ್ಯ ಆದಮ್ಖಾನ್, ಪದವೀಧರರ ವೇದಿಕೆ ಅಧ್ಯಕ ದಯಾನಂದ್, ಮಲ್ಲಿಕಾರ್ಜುನ ಕೊರವರ್, ಮಂಜುಳಮ್ಮ ಮತ್ತು ಚಂದನ್ಡಿ.ಎನ್ ಇದ್ದರು.


