ಮೀಸಲಾತಿಯನ್ನು ಇಷ್ಟು ದಿನ ಹೆಚ್ಚು ಉಂಡವರು ಬಹಿರಂಗ ಚರ್ಚೆಗೆ ಬರುವಂತೆ ಮೀಸಲಾತಿ ಪಡೆದಿರುವ ಸಚಿವಗಳಿಗೆ ಅಲೆಮಾರಿ ಸಮುದಾಯದ ಹಂದಿಜೋಗಿ ಸಂಘ ಆಗ್ರಹಿಸಿದೆ.
ಅಲೆಮಾರಿ ಸಮುದಾಯಗಳು ಇಂದಿಗೂ ಒಂದು ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿಯಿದ್ದು, ಅವರಿಗೆ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸವಲತ್ತುಗಳು ದೊರೆತಿರುವುದಿಲ್ಲ. ಅಲೆಮಾರಿಗಳಿಗೆ ಒಂದೂರಿಲ್ಲ, ಕೇರಿಯಿಲ್ಲ, ಮನೆಯಿಲ್ಲ, ಗುಡಿಸಲು, ಡೇರಿಗಳೇ ಅವರಿಗೆ ವಾಸ ಸ್ಥಾನ, ಅವರು ಇಂದಿಗೂ ಹಂದಿ ಸಾಕಾಣಿಕೆ, ಭಿಕ್ಷಾಟನೆ, ಬಾಚಣಿಕೆ ಮಾರಾಟ, ಕೂದಲು ಮಾರಾಟ, ಮುಂತಾದ ಕಸುಬುಗಳನ್ನು ಮಾಡಿಕೊಂಡು ಊರಿಂದ ಊರಿಗೆ ಅಲೆಯುವವರಾಗಿದ್ದರೆ.
ಎಷ್ಟೋ ಜನಕ್ಕೆ ಶಿಕ್ಷಣ ಇಲ್ಲದಿರುವುದರಿಂದ ಅವರಿಗೆ ಮೀಸಲಾತಿ ಇದೆ, ನಾವು ಅಲೆಮಾರಿಗಳು, ಪರಿಶಿಷ್ಟ ಜಾತಿಗೆ ಸೇರಿದವರು ಎಂಬುದು ಸಹ ತಿಳಿದಿಲ್ಲ, ಇಂತಹ ಸಮುದಾಯದ ಮೀಸಲಾತಿಯನ್ನು ಸ್ಪರ್ಶ ಜಾತಿಗಳೊಂದಿಗೆ ಸೇರಿಸಿ ಪಡೆದುಕೊಳ್ಳಿ ಎಂದು ಸಿದ್ದರಾಮಯ್ಯ ಸಂಪುಟದ ಸಚಿವರು ಬೀದಿರಂಪ ಮಾಡಿ ಸೇರಿಸಿರುವುದು ಘನ ಘೋರವಾದ ಅನ್ಯಾಯವೆಂದು ಸಂಘ ಖಂಡಿಸಿದೆ.
ಹೆಚ್ಚು ಮೀಸಲಾತಿ ಪಡೆದುಕೊಂಡಿರುವ, ಪಡೆಯುತ್ತಿರುವ ಸಚಿವರುಗಳಿಗೆ ಮಾನವೀಯತೆಯ ಮನುಷ್ಯತ್ವ ಗುಣವಿದ್ದರೆ, ಅವರು ಮನುಷ್ಯರಾಗಿದ್ದರೆ ಅಲೆಮಾರಿ ಸಮುದಾಯಕ್ಕೆ ನೀಡಬೇಕಾದ ಒಳಮೀಸಲಾತಿ ನೀಡಿ ಪುಣ್ಯಕಟ್ಟಿಕೊಂಡು ಅಲೆಮಾರಿಗಳು ಸಮಾಜದಲ್ಲಿ ಮನುಷ್ರಂತೆ ಬಾಳಲು ಅನುಕೂಲ ಮಾಡಿಕೊಡಲಿ ಎಂದು ಹೇಳಿದೆ.
ಮೀಸಲಾತಿ ಕಲ್ಪಿಸಿದಂದಿನಿಂದ ಇಂದಿನವರೆಗೂ ರಾಜಕೀಯ ಮೀಸಲಾತಿಯಾಗಲಿ, ಉದ್ಯೋಗ ಮೀಸಲಾತಿಯಾಗಲಿ ಪಡೆದುಕೊಳ್ಳದೆ ಕತ್ತಲೆಯಲ್ಲಿ ಕೊಳೆಯುತ್ತಿವೆ, ಇಂತಹ ಸಮುದಾಗಳ ಸಂವಿಧಾನ ಬದ್ಧ ಹಕ್ಕುಗಳನ್ನು ರಣಹದ್ದು ಕಿತ್ತುಕೊಂಡಂತೆ ಕಿತ್ತುಕೊಂಡಿರುವುದು ಕರುಣೆ, ಪ್ರೀತಿ, ಮೈತ್ರಿ ಇಲ್ಲದವರಾಗಿದ್ದು, ಮೀಸಲಾತಿಯಡಿ ಆಯ್ಕೆಯಾಗಿರುವ ಸಚಿವರುಗಳು ಧಮ್ಮಿದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಅಲೆಮಾರಿ ಸಮುದಾಯಗಳು ಸವಾಲು ಹಾಕಿವೆ.
ನಿಮಗೂ ಹೃದಯವಿದ್ದರೆ ಈ ತಾರತಮ್ಯವನ್ನು ಸರಿಪಡಿಸಿ. ಸಾಮಾಜಿಕ ನ್ಯಾಯಕ್ಕೆ ಮುಂದಾಗುವಂತೆ ಹಂದಿಜೋಗಿ ಸಂಘ ಆಗ್ರಹಿಸಿದೆ.
ನೀವು ಈ ರೀತಿ ಅನ್ಯಾಯ ಮಾಡುವುದಿದ್ದರೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗವನ್ನು ಏಕೆ ಮಾಡಿದಿರಿ. ಮಾಡಿದ್ದರಿಂದ ಯಾರಿಗೆ ಲಾಭ ಆಯಿತು, ಯಾರು ಹೆಚ್ಚು ರಾಜಕೀಯ ಅಧಿಕಾರ, ಉದ್ಯೋಗದ ಅಧಿಕಾರ ಪಡೆದಿದ್ದಾರೋ ಅವರಿಗೆ ಹೆಚ್ಚು ಲಾಭವಾಗಿದೆ. ಒಳಮೀಸಲಾತಿಯಲ್ಲಿ ಆಗಿರುವ ಅನ್ಯಾಯವನ್ನು ಅಲೆಮಾರಿ ಸಮುದಾಯಕ್ಕೆ ಸರಿಪಡಿಸದಿದ್ದರೆ ಅದರ ಫಲವನ್ನು ಮುಂದಿನ ಚುನಾವಣೆಯಲ್ಲಿ ಅನುಭವಿಸಬೇಕಾಗುತ್ತದೆ ಎಂದು ಹೇಳಿದೆ.


