ಸ್ಲಂ ಜನರಿಗೆ ನೀಡಿರುವ ಚುನಾವಣೆ ಪ್ರಣಾಳಿಕೆಯ ಭರವಸೆಗಳನ್ನು ಹಾಗೂ ಭೂಮಿ, ವಸತಿಗೆ ಸಂಬಂಧಿಸಿದ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸಬೇಕು. ನಗರದಲ್ಲಿರುವ ಸ್ಲಂ ಜನರು ಕನಿಷ್ಟ ಸೌಲಭ್ಯದಲ್ಲಿ ಬದುಕುತ್ತಿದ್ದು ಸಂವಿಧಾನದ ಸಾಮಾಜಿಕ ನ್ಯಾಯವನ್ನು ಈ ಜನರಿಗೆ ತಲುಪಿಸಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಒತ್ತಾಯಿಸಿದರು.
ಸ್ಲಂ ಜನಾಂದೋಲನ ಕರ್ನಾಟಕ ಮತ್ತು ತುಮಕೂರು ಸ್ಲಂ ಸಮಿತಿ ವತಿಯಿಂದ ತುಮಕೂರಿನ ಮಹಾನಗರ ಪಾಲಿಕೆ ಆವರಣದಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿ ಸ್ಲಂ ಜನರ ಸಾಂಸ್ಕೃತಿಕ ಕಲಾ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಲ್ಯಾಂಡ್ ಬ್ಯಾಂಕ್, ವಸತಿ ಹಕ್ಕು ಕಾಯಿದೆ ಮತ್ತು ನಗರ ಉದ್ಯೋಗ ಖಾತ್ರಿ ಜಾರಿಗೆ ಈಗಾಗಲೇ ವಿಧಾನ ಸಭೆಯಲ್ಲಿ ಸಂಘಟನೆ ನೀಡಿದ ಮಾಹಿತಿ ಆಧಾರಿಸಿ ಪ್ರಶ್ನೆ ಕೇಳಲಾಗಿದೆ. ತುಮಕೂರಿನ ವಸತಿ ರಹಿತರಿಗೆ ಮತ್ತು ಕೋಡಿಹಳ್ಳ, ಇಸ್ಮಾಯಿಲ್ ನಗರ ಹಂದಿ ಜೋಗಿಗಳಿಗೆ ಶೀಘ್ರದಲ್ಲೇ ವಸತಿ ಹಂಚಿಕೆ ಮಾಡಲು ಕ್ರಮಕೈಗೊಳ್ಳಲಾಗುವುದು. ನಗರ ಪ್ರದೇಶದಲ್ಲಿ ವಸತಿ ರಹಿತರಿಗೆ ಮನೆ ನಿರ್ಮಿಸಲು ಭೂಮಿ ಸಿಗುತ್ತಿಲ್ಲ, ಹಾಗಾಗಿ ಸಮಸ್ಯೆ ಜ್ವಲಂತವಾಗಿವೆ, ನಮ್ಮ ಅನುದಾನದಲ್ಲಿ ಕೊಳಗೇರಿಗಳ ಮೂಲಸೌರ್ಯಕ್ಕೆ ಆದ್ಯತೆ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಚಿಂತಕಿ ಡಾ.ದು.ಸರಸ್ವತಿ, ಭಾರತೀಯ ಶಾಸ್ತ್ರೀಯ ಕಲಾ ಪ್ರಕಾರಗಳಿಗೆ ಸಿಗುವ ಮಾನ್ಯತೆ ನಮ್ಮ ನೆಲ ಮೂಲದ ಕಲಾ ಪ್ರಕಾರಗಳಿಗೂ ಸಿಗಬೇಕು. ನಮ್ಮ ದುಡಿಮೆಯ ಆಚರಣೆ ನೀರಿನ ಸಂಸ್ಕೃತಿ ಮತ್ತು ಪ್ರಕೃತಿಯೊಟ್ಟಿಗೆ ಸಂಬಂಧ ಹೊಂದಿರುವ ಆಚರಣೆಯಾಗಿದೆ. ಶ್ರಮಿಕ ಸಂಸ್ಕೃತಿಯು ದೇವರನ್ನು ಮನಷ್ಯರೆಂದು ಭಾವಿಸುತ್ತದೆ ಮತ್ತು ಚಲನಶೀಲತೆಯ ಸಂಕೇತವಾಗಿದ್ದು ಬದುಕುವ ಮತ್ತು ಬದುಕಿಸುವ ಮನುಷ್ಯ ಸಂಸ್ಕೃತಿಯಾಗಿದೆ ಎಂದರು.
ಬೆಂಗಳೂರು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ನಿರ್ದೇಶಕ ಡಾ.ಡೊಮಿನಿಕ್ ಮಾತನಾಡಿ, ವಂಚಿತ ಸಮುದಾಯಗಳ ಆಚರಣೆ ಅಥವಾ ಕಲಾಚರವೇ ನಿಜವಾದ ಆಚರಣೆಗಳು, ಈ ದೇಶದ ಸಂಪತ್ತನ್ನು ಉದ್ಪಾದನೆ ಮಾಡುವ ಮಾನವ ಸಂಪನ್ಮೂಲವೆಂದರೆ ಅದು ಸ್ಲಂ ಜನರೇ. ಆದ್ದರಿಂದ ನಾವು ಆಳುವ ಜನರಾಗಿ ಬದಲಾಗಬೇಕಿದೆ. ನಮ್ಮ ಬದುಕಿನ ಮೇಲಿನ ಬದ್ಧತೆಯನ್ನು ಹೆಚ್ಚು ಮಾಡಿಕೊಳ್ಳಲು ಇಂತಹ ತಳ ಸಮುದಾಯಗಳ ಕಲಾಚಾರಗಳು ಶಕ್ತಿ ತುಂಬುತ್ತವೆ ಎಂದು ಹೇಳಿದರು.
ಸ್ಲಂ ಜನಾಂದೋಲನ ಕರ್ನಾಟಕದ ರಾಜ್ಯ ಸಂಚಾಲಕ ಎ.ನರಸಿಂಹಮೂರ್ತಿ ಪ್ರಾಸ್ತಾವಿಕ ಮಾತನಾಡಿದರು. ಜನಪರ ಚಿಂತಕ ಕೆ.ದೊರೆರಾಜ್ ಅಧ್ಯಕ್ಷತೆ ವಹಿಸಿದ್ದರು. ನಗರ ಪಾಲಿಕೆ ಮಾಜಿ ಸದಸ್ಯ ಲಕ್ಷ್ಮೀನರಸಿಂಹರಾಜು, ದಾವಣಗೆರೆ ಜಿಲ್ಲಾ ಸಮಿತಿಯ ಎಸ್.ಎಲ್ ಆನಂದಪ್ಪ, ಸಾವಿತ್ರಿ ಬಾಯಿಪುಲೆ ಮಹಿಳಾ ಸಂಘಟನೆಯ ಚಂದ್ರಮ್ಮ, ತುಮಕೂರು ಸ್ಲಂ ಸಮಿತಿಯ ದೀಪಿಕಾ, ಚಿತ್ರದುರ್ಗ ಜಿಲ್ಲಾ ಸಮಿತಿಯ ರಾಜಣ್ಣ ಭಾಗವಹಿಸಿದ್ದರು. ತಿರುಮಲಯ್ಯ ನಿರೂಪಿಸಿ, ಅರುಣ್ ಸ್ವಾಗತಿಸಿದರು.ಅನುಪಮ ವಂದಿಸಿದರು.


