ಕಾಶ್ಮೀರದ ಪೆಹಲ್ಗಾಮ್ ಪ್ರವಾಸಿ ತಾಣದಲ್ಲಿ ಭಾರತೀಯರ ಮೇಲೆ ನಡೆದ ಉಗ್ರಗಾಮಿಗಳ ದಾಳಿಯನ್ನು ಖಂಡಿಸಿ, ಉಗ್ರರನ್ನು ಸದೆ ಬಡಿಯುವಂತೆ ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ತುಮಕೂರು ನಗರದ ಟೌನ್ಹಾಲ್ ಮುಂಭಾಗ ಮೇಣದ ಬತ್ತಿ ಹಚ್ಚಿ ಮೃತರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಘಟನೆಯಲ್ಲಿ ಮೃತರಾದವರಿಗೆ ಮುಂಬತ್ತಿ ಹಚ್ಚಿ, ಎರಡು ನಿಮಿಷಗಳ ಕಾಲ ಮೌನಾಚರಣೆ ಮಾಡುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಯಿತು. ಈ ವೇಳೆ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ, ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕರ ದಾಳಿ ಕೇಂದ್ರದ ಬೇಹುಗಾರಿಕೆ ಮತ್ತು ಭದ್ರತಾ ವೈಫಲ್ಯಗಳೇ ಕಾರಣ. ಇದನ್ನು ಖಂಡಿಸುತ್ತೇವೆ. ಹಾಗೆಯೇ ಉಗ್ರರನ್ನು ಸದೆ ಬಡೆಯಲು ಕಾಂಗ್ರೆಸ್ ಪಕ್ಷ ಸದಾ ದೇಶದ ಪರವಾಗಿ ನಿಲ್ಲಲಿದೆ ಎಂದರು.
ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸುಮಾರು 27ಕ್ಕೂ ಹೆಚ್ಚು ದಾಳಿಗಳು ನಡೆದಿವೆ. ಪ್ರಮುಖವಾಗಿ ಪುಲ್ವಾಮ ದಾಳಿ ನಡೆದು ಐದು ವರ್ಷ ಕಳೆದರು, ಕಾರಣರಾದವರಿಗೆ ಶಿಕ್ಷೆಯಾಗಿಲ್ಲ. ಇದೇ ಇಂದಿನ ಘಟನೆಗೂ ಕಾರಣವಾಗಿರಬಹುದು. ಸರಕಾರ ಈ ಕೂಡಲೇ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡು ಭಾರತೀಯ ರಕ್ಷಣೆ ಜೊತೆಗೆ, ಭಯೋತ್ಪಾದಕರ ಶಿಕ್ಷೆಗೆ ಮುಂದಾಗಬೇಕು. ಕಾಂಗ್ರೆಸ್ ಸದಾ ಕೇಂದ್ರ ಸರಕಾರದ ಬೆನ್ನಿಗೆ ಇರುತ್ತದೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಆರ್.ರಾಮಕೃಷ್ಣ ಮಾತನಾಡಿ, ಕಾಶ್ಮೀರದಲ್ಲಿ ಪ್ರವಾಸಿಗರ ಹತ್ಯೆಯ ಹಿಂದೆ ಕೇಂದ್ರದ ಭದ್ರತಾ ವೈಫಲ್ಯ ಎದ್ದು ಕಾಣುತ್ತಿದೆ. ಹತ್ಯೆಗೀಡಾದವರು ಯಾವ ಜಾತಿ, ಧರ್ಮ ಎನ್ನುವುದಕ್ಕಿಂತ ಅವರು ಭಾರತೀಯರು ಎಂಬುದು ಮುಖ್ಯ. ಹಾಗಾಗಿ ಅವರಿಗೆ ಶ್ರದ್ದಾಂಜಲಿ ಸಲ್ಲಿಸಿ, ಆ ಕುಟುಂಬದೊಂದಿಗೆ ಇಡೀ ಭಾರತೀಯರು ನಿಲ್ಲಬೇಕಾಗಿದೆ. ಹತ್ಯೆಗೆ ಕಾರಣರಾದ ಭಯೋತ್ಪಾದಕರನ್ನು ಕೇಂದ್ರ ಸರಕಾರ ಪತ್ತೆ ಹಚ್ಚಿ ಸದೆ ಬಡಿಯುವ ಕೆಲಸ ಮಾಡಬೇಕೆಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಭಾರತದ ಸ್ವರ್ಗ ಎಂದು ಕರೆಯುವ ಕಾಶ್ಮೀರದಲ್ಲಿ ಭಯೋತ್ಪಾದಕರು 27 ಪ್ರವಾಸಿಗರನ್ನು ಹತ್ಯೆ ಮಾಡಿರುವುದು ಖಂಡನೀಯ. ಭಾರತೀಯರೆಲ್ಲಾ ಒಂದಾಗಿ ಇದಕ್ಕೆ ತಕ್ಕ ಉತ್ತರವನ್ನು ನೀಡಬೇಕಾಗಿದೆ. ಈ ಘಟನೆಗೆ ಧರ್ಮ, ಜಾತಿಯ ಬಣ್ಣ ಕಟ್ಟುವುದು ಸರಿಯಲ್ಲ. ಹತ್ಯೆಗೀಡಾದವರಲ್ಲೇ ಭಾರತೀಯರು ಎಂಬುದು ಮುಖ್ಯ ಎಂದು ಹೇಳಿದರು.
ಮಾಜಿ ಶಾಸಕ ಎಸ್.ಷಪಿಅಹಮದ್ ಮಾತನಾಡಿ, ಇಡೀ ಘಟನೆಯನ್ನು ಕಾಂಗ್ರೆಸ್ ಪಕ್ಷ ಹಾಗೂ ದೇಶದ ಜನತೆ ಖಂಡಿಸುತ್ತದೆ. ಈಗಾಗಲೇ ನಮ್ಮ ನಾಯಕ ರಾಹುಲ್ಗಾಂಧಿ ಘಟನೆ ನಡೆದ ಪಹಲ್ಗಾಮ್ಗೆ ಹೋಗಿ ಗಾಯಗೊಂಡವರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ. ಮೃತರ ಕುಟುಂಬಗಳನ್ನು ಭೇಟಿಯಾಗಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ ಎಂದರು.
ತುಮಕೂರು ನಗರ ಬ್ಲಾಕ್ ಅಧ್ಯಕ್ಷ ಮಹೇಶ್, ಫಯಾಜ್, ಪಾಲಿಕೆ ಮಾಜಿ ಸದಸ್ಯರುಗಳಾದ ನಯಾಜ್, ಇನಾಯತ್, ಮುಖಂಡರಾದ ಬಿ.ಎಸ.ದಿನೇಶ್, ಸಿದ್ದಲಿಂಗೇಗೌಡ, ರಂಗಶಾಮಣ್ಣ ಸಿದ್ದಾಪುರ, ರೇವಣ್ಣಸಿದ್ದಯ್ಯ, ಷಣ್ಮುಗಪ್ಪ, ಸುಜಾತ, ನಾಗಮಣಿ, ಕವಿತಾ, ಮರಿಚನ್ನಮ್ಮ, ಶಿವಾಜಿ, ಶೆಟ್ಟಾಳಯ್ಯ, ನರಸೀಯಪ್ಪ, ಮೆಹಬೂಬ್ಪಾಷ, ಮಹಮದ್ ಯೂನಸ್, ಪುರುಷೋತ್ತಮ್, ಅಂಬರೀಷ್ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.


