ದೇಶದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಜಾತಿಗಳಿವೆ.ಕರ್ನಾಟಕದಲ್ಲಿ 1800 ಕ್ಕೂ ಹೆಚ್ಚು ಜಾತಿಗಳಿವೆ. ಈ ಎಲ್ಲ ಜಾತಿಗಳ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಮತ್ತು ರಾಜಕೀಯ ಹಿನ್ನೆಲೆಯ ಮಾಹಿತಿಯನ್ನು ನೀಡುವುದು ಸರ್ಕಾರಗಳ ಸಂವಿಧಾನ ಬದ್ಧವಾದ ಜವಾಬ್ದಾರಿ.
1891 ರಲ್ಲಿ ಜಾತಿವಾರು ಸಮೀಕ್ಷೆ ಮೊದಲು ಆರಂಭವಾಯಿತು.1931 ರಲ್ಲಿ ಸಾಮಾಜಿಕ ಸಮೀಕ್ಷೆಯನ್ನು ನಡೆಸಲಾಯಿತು. ಪ್ರತಿ ಹತ್ತು ವರ್ಷಗಳಿಗೊಮ್ಮೆ ನಡೆಸಬೇಕಿತ್ತಾದರೂ ಅದು ಕಾರಣಾಂತರಗಳಿಂದ ಸ್ಥಗಿತಗೊಂಡಿತ್ತು. ಈಗ ಸಿದ್ದರಾಮಯ್ಯನವರ ಸರ್ಕಾರ ಸಾಮಾಜಿಕ ಸಮೀಕ್ಷೆ ನಡೆಸಲು ಎಚ್.ಕಾಂತರಾಜ್ ಅವರ ನೇತೃತ್ವದ ಆಯೋಗವನ್ನು ನೇಮಕ ಮಾಡಿದೆ. ನಾಡಿನ ಸಂಪತ್ತನ್ನು ಸಮಾನವಾಗಿ ಹಂಚಿಕೆ ಮಾಡಲು ಸಾಮಾಜಿಕ ಸಮೀಕ್ಷೆ ಸಹಾಯಕ. ಈ ಅರಿವು ಇದ್ದರೂ ಕೂಡ ಕೇವಲ ರಾಜಕೀಯ ಕಾರಣಕ್ಕೆ ಕೆಲವೇ ಕೆಲವು ಪ್ರಬಲ ಸಮುದಾಯಗಳು ಸೋರಿಕೆಯಾದ ಅಂಕಿ ಅಂಶಗಳನ್ನು ಆಧಾರವಾಗಿಟ್ಟುಕೊಂಡು ವಿರೋಧಿಸುತ್ತಿರುವುದು ಸಂವಿಧಾನ ವಿರೋಧಿ ನಡೆಯಾಗಿದೆ.
ಈವರೆಗೂ ಕರ್ನಾಟಕದಲ್ಲಿ ಸ್ವತಂತ್ರ ನಂತರದಲ್ಲಿ ಹಿಂದುಳಿದ ವರ್ಗದ ಅರಸು, ಮತ್ತು ಕುರುಬ ಸಮುದಾಯಗಳು ಎರಡು ಬಾರಿ,
ಈಡಿಗ, ದೇವಾಡಿಗ, ರಜಪೂತ ತಲಾ ಒಂದು ಬಾರಿ ಈ ರಾಜ್ಯದ ಚುಕ್ಕಾಣೆ ಹಿಡಿದಿದ್ದಾರೆ. ಬ್ರಾಹ್ಮಣರು ನಾಲ್ಕು ಬಾರಿ, ಒಕ್ಕಲಿಗರು ಎಂಟು ಬಾರಿ, ಲಿಂಗಾಯತರು ಹದಿನಾಲ್ಕು ಬಾರಿ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ. ಕರ್ನಾಟಕದಲ್ಲಿ ಇದುವರೆಗೂ ದಲಿತ ಸಮುದಾಯದವರು ಮುಖ್ಯಮಂತ್ರಿ ಕುರ್ಚಿ ಹತ್ತಿರ ಸುಳಿಯಲು ಸಾಧ್ಯವಾಗಿಲ್ಲ. ಇಂಥ ಎಲ್ಲಾ ಅಸಮಾನತೆಗಳನ್ನು ತಿಳಿಯಲು ಸಾಮಾಜಿಕ ಸಮೀಕ್ಷೆಯಿಂದ ಮಾತ್ರ ಸಾಧ್ಯ. ಆದುದರಿಂದ ಅತಿ ಜರೂರಾಗಿ ಸಾಮಾಜಿಕ ಸಮೀಕ್ಷೆ ಆಗಬೇಕು.ಆ ಮೂಲಕ ಎಲ್ಲಾ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಸಿಗಬೇಕು. ಇದನ್ನು ವಿರೋಧಿಸುವ ಜನರ ಮನಸ್ಥಿತಿಗಳು ಬದಲಾಗಬೇಕು.
ಇಷ್ಟಕ್ಕೂ ಲಿಂಗಾಯತ, ಒಕ್ಕಲಿಗ, ಬ್ರಾಹ್ಮಣ ಸಮುದಾಯದವರು ಅಷ್ಟೇ ಕರ್ನಾಟಕದಲ್ಲಿ ಜೀವಿಸುತ್ತಿಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಲಿ.
ಲೇಖಕರು:ಡಾ.ಶಿವಣ್ಣ ತಿಮ್ಲಾಪುರ.


