ರಾಜ್ಯ ಸರಕಾರ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ನ್ಯಾ.ಕಾಂತರಾಜು ಅವರ ಸಮಿತಿಯಿಂದ ನಡೆಸಿರುವ ಸಾಮಾಜಿಕ ಮತ್ತು ಅರ್ಥಿಕ ಸಮೀಕ್ಷೆಯಲ್ಲಿ ಉಪ್ಪಾರ ಜನಾಂಗದ ಸಂಖ್ಯೆಯನ್ನು ಕಡಿಮೆ ನಮೂದಿಸಲಾಗಿದೆ. ಹಾಗಾಗಿ ಮರು ಸಮೀಕ್ಷೆ ನಡೆಸಿ, ಜನಾಂಗಕ್ಕೆ ನ್ಯಾಯ ಒದಗಿಸುವಂತೆ ಅಖಿಲ ಉಪ್ಪಾರ ವಿದ್ಯಾಭಿವೃದ್ದಿ ಸಂಘದ ಅಧ್ಯಕ್ಷ ಸಿ.ಎಸ್. ಮಂಜುನಾಥ್ ಸರಕಾರವನ್ನು ಒತ್ತಾಯಿಸಿದ್ದಾರೆ.
ತುಮಕೂರಿನಲ್ಲಿ ಭಗೀರಥ ಜಯಂತಿ ಅಂಗವಾಗಿ ಕರೆದಿದ್ದ ಉಪ್ಪಾರ ಸಂಘದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರದ ಜಾತಿ ಗಣತಿ ಸೋರಿಕೆಯಾದ ಮಾಹಿತಿಯಂತೆ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾದ ಮಾಹಿತಿಯಂತೆ ರಾಜ್ಯದಲ್ಲಿ ಉಪ್ಪಾರ ಜನಾಂಗದ ಜನಸಂಖ್ಯೆ 7.50 ಲಕ್ಷ ಎಂದು ತೋರಿಸಲಾಗಿದೆ. ರಾಜ್ಯದಲ್ಲಿ ಉಪ್ಪಾರ ಸಮುದಾಯ ಸುಮಾರು 35 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದೆ. ತುಮಕೂರು ಜಿಲ್ಲೆಯಲ್ಲಿಯೇ ಸುಮಾರು 1.50 ಲಕ್ಷ ಇದ್ದೇವೆ. ಹಾಗಾಗಿ ಮರು ಸಮೀಕ್ಷೆ ನಡೆಸಿ, ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕೆಂಬುದು ಒತ್ತಾಯವಾಗಿದೆ ಎಂದರು.
ಹಂಪಿ ವಿವಿಯ ಹಿರಿಯ ಪ್ರಾಧ್ಯಾಪಕಿ ಕೆ.ಬಿ.ಮೈತ್ರಿ ನೇತೃತ್ವದಲ್ಲಿ ಕುಲಶಾಸ್ತ್ರೀಯ ಅಧ್ಯಯನ ನಡೆಸಿದ ಸಂದರ್ಭದಲ್ಲಿ ಸುಮಾರು 25ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ 42ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳಲ್ಲಿ ಉಪ್ಪಾರ ಸಮುದಾಯ 12 ರಿಂದ 15 ಸಾವಿರ ಮತದಾರರನ್ನು ಹೊಂದಿದ್ದು, ನಿರ್ಣಾಯಕ ಪಾತ್ರ ವಹಿಸಲಿದೆ. ಕುಲಶಾಸ್ತಿçಯ ಅಧ್ಯಯನ ನಡೆಸಿದ ಸಂದರ್ಭದಲ್ಲಿ ನಮ್ಮ ಜನಾಂಗ ರಾಜ್ಯದಲ್ಲಿ ಸುಮಾರು 35 ಲಕ್ಷದಷ್ಟಿದೆ. ಆದರೆ ಜಾತಿ ಜನಗಣಿತಿಯಲ್ಲಿ ಕೇವಲ 7.50 ಎಂದು ತೋರಿಸಲಾಗಿದೆ. ಸರಕಾರದ ಈ ನಡೆಯಿಂದ ಜನಾಂಗಕ್ಕೆ ದೊರೆಯುವ ಸಾಮಾಜಿಕ, ಶೈಕ್ಷಣಿಕ, ಔದ್ಯೋಗಿಕ ಸೌಲಭ್ಯಗಳಲ್ಲಿ ಸಾಕಷ್ಟು ಕೊರತೆ ಕಾಣಲಿದೆ. ಹಾಗಾಗಿ ಇದನ್ನು ಮರು ಸಮೀಕ್ಷೆ ನಡೆಸಿ, ಸಮುದಾಯಕ್ಕೆ ನ್ಯಾಯಒದಗಿಸಬೇಕು ಎಂದು ಸಿ.ಎಸ್. ಮಂಜುನಾಥ್ ಆಗ್ರಹಿಸಿದರು.
ಪ್ರವರ್ಗ 1 ಮೀಸಲಾತಿ ಹೋರಾಟ ಸಮಿತಿಯ ತುಮಕೂರು ಜಿಲ್ಲಾಧ್ಯಕ್ಷ ರೇಣುಕಯ್ಯ ಮಾತನಾಡಿ, ಸ್ವಾತಂತ್ರ ಪೂರ್ವದಲ್ಲಿ ಉಪ್ಪುತಯಾರು ಮಾಡಿ, ವ್ಯಾಪಾರ ಮಾಡುತ್ತಿದ್ದ ಸಮುದಾಯ ನಮ್ಮದು. ಗಾಂಧೀಜಿಯವರ ಉಪ್ಪಿನ ಸತ್ಯಾಗ್ರಹದ ನಂತರ ಬೇರೆ ಬೇರೆ ಕಸುಬಗಳನ್ನು ಮಾಡಿಕೊಂಡು ಬದುಕುತಿದ್ದೇವೆ. ಶೈಕ್ಷಣಿಕವಾಗಿ, ಅರ್ಥಿಕವಾಗಿ, ಸಾಮಾಜಿಕವಾಗಿ ಬಹಳ ಹಿಂದೆ ಉಳಿದಿದೆ. ಒಂದು ವೇಳೆ ಸರಕಾರದ ಈಗಿನ ಅಂಕಿ ಅಂಶದAತೆ ಉಪ್ಪಾರ ಸಮುದಾಯ 7.50ಲಕ್ಷ ಜನಸಂಖ್ಯೆಗೆ ಮೀಸಲಾತಿ ನಿಗದಿಯಾದರೆ ಸಮುದಾಯಕ್ಕೆ ದೊಡ್ಡ ಅನ್ಯಾಯವಾಗಲಿದೆ. ಹಾಗಾಗಿ ಸರಕಾರ ಮರು ಸಮೀಕ್ಷೆ ನಡೆಸಬೇಕು ಎಂದರು.
ಪೂರ್ವಭಾವಿ ಸಭೆಯಲ್ಲಿ ಉಪ್ಪಾರ ಸಮುದಾಯದ ಮುಖಂಡರಾದ ಲೋಕೇಶ್, ತಿಪ್ಪೇಸ್ವಾಮಿ, ದೊಡ್ಡ ಹನುಮೇಗೌಡ, ಮೂಡ್ಲಗಿರಿಯ್ಪ, ನಾಗರಾಜು, ಚನ್ನಿಗರಾಯಪ್ಪ, ಹರೀಶ್ ಇದ್ದರು.


