ಈ ಬಾರಿ ತುಮಕೂರಿನ ಹಿರಿದೀಪಗಳಾದ ದೊರೈರಾಜ್, ಕುಂದೂರು ತಿಮ್ಮಣ್ಣ, ಅವರಿಗೆ ಬಾಬು ಜಗಜೀವನ್ ರಾಂ ಪ್ರಶಸ್ತಿ ಲಭಿಸಿದೆ.
ಕುಂದೂರು ತಿಮ್ಮಣ್ಣ ತಮ್ಮ ಜೀವಮಾನವನ್ನೇ ದಸಂಸಕ್ಕಾಗಿ ಮುಡುಪಾಗಿಟ್ಟವರು. ಬೆಂಗಳೂರಿನಲ್ಲಿ ರೌಡಿಯಾಗಬೇಕಾಗಿದ್ದವರು ದಸಂಸದ ಸಂಗದಿಂದ ಮಾನವೀಯ ಮೂರ್ತಿಯಾಗಿ ಬದಲಾದರು.

ಬೀಕೆ, ಕೇಬಿ, ಇತ್ಯಾದಿಯವರ ಸಂಪರ್ಕದಿಂದ ಈಗಲೂ ದಸಂಸಕ್ಕಾಗಿಯೇ ದುಡಿಯುತ್ತಿದ್ದಾರೆ. ತಮ್ಮ ಮನೆಯೇ ದಸಂಸದ ಕೇಂದ್ರವಾಗಿದೆ. ಹೊಸತಲೆಮಾರನ್ನು ದಸಂಸದ ಜೊತೆ ಜೋಡಿಸುತ್ತಿದ್ದಾರೆ. ಇತ್ತೀಚೆಗೆ ‘ಅಂಗುಲಿಮಾಲ’ ರೂಪಕದಲ್ಲಿ ಕಂಟಲಗೆರೆ ನಿರೂಪಿಸಿದ ಅನುಭವ ಕಥನ ಪ್ರಕಟವಾಗಿದೆ. ಅಭಿನಂದನೆಗಳು ಸರ್.. ನೀವೇ ನಮ್ಮೆಲ್ಲರಿಗೆ ಸ್ಪೂರ್ತಿ ಎಂದು ಉಪನ್ಯಾಸಕ ರವಿಕುಮಾರ್ ನೀ.ಹ. ತಿಳಿಸಿದ್ದಾರೆ.
ದೊರೈರಾಜು ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ, ಉಪನಿರ್ದೇಶಕರಾಗಿ, ಜಂಟಿ ನಿರ್ದೇಶಕರಾಗಿ ಪದವಿಪೂರ್ವ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ನಿಷ್ಠುರತೆ, ಪ್ರಾಮಾಣಿಕತೆಗೆ ಹೆಸರಾಗಿದ್ದವರು.
ತಮ್ಮ ವಿದ್ಯಾರ್ಥಿ ದಿನಗಳಲ್ಲಿ ತುಮಕೂರಿನ ಎನ್ ಆರ್ ಕಾಲೋನಿಯಲ್ಲಿ ತಮ್ಮ ವಯೋಮಾನದವರನ್ನು ಸೇರೀಸಿ ದಲಿತಯುವಕ ಸಂಘ ಕಟ್ಟಿ ‘ ಹೆಂಡದಂಗಡಿ ‘ ವಿರುದ್ಧ ಆಂದೋಲನವನ್ನು ರೂಪಿಸಿ, ರಾತ್ರಿ ಶಿಕ್ಷಣವನ್ನು ನೀಡಲು ಶ್ರಮಿಸಿದವರು. ಮುಂದೆ ಉದ್ಯೋಗದಲ್ಲಿದ್ದುಕೊಂಡೇ ತುಮಕೂರಿನ ನೆಲದಲ್ಲಿ ದಲಿತ ಚಳುವಳಿಯನ್ನು ಮುನ್ನಡೆಸಿದವರು. ಇವರ ಅನುಭವಗಳ ಕೃತಿ ಪೂರ್ಣವಾಗಿ ಹೊರಬರಬೇಕಾಗಿದೆ. ಕ್ವಚಿತ್ತಾಗಿ ಎಂ ಎಚ್ ನಾಗರಾಜ್ ಅವರ ‘ ಏಕತೆಯ ಹೋರಾಟಗಾರ ‘ ಪ್ರಕಟವಾಗಿದೆ.
ಈ ಎರಡು ಜೀವಿಗಳಿಗೆ ಬಾಬು ಜಗಜೀವನ್ ರಾಂ ಪ್ರಶಸ್ತಿ ಲಭಿಸಿರುವುದು ತುಮಕೂರು ಸೀಮೆಗೆ ಹೆಮ್ಮೆಯ ವಿಷಯ ಎಂದು ಅವರು ಹೇಳಿದ್ದಾರೆ.