ಸ್ತ್ರೀ ಶಕ್ತಿ ಸಂಘಗಳ ಮೂಲಕ ಸಮಾಜದಲ್ಲಿ ಮಹಿಳೆಯರಿಗೆ ಹೆಚ್ಚು ಆರ್ಥಿಕ ಸ್ವಾತಂತ್ರ್ಯ ಲಭಿಸಿದೆ. ಈ ಮೂಲಕ ಮಹಿಳೆಯರಿಗೆ ಹೆಚ್ಚು ಹೆಚ್ಚು ಆತ್ಮವಿಶ್ವಾಸ ಹಾಗೂ ಜ್ಞಾನ ಬೆಳೆಯುತ್ತಿದೆ ಎಂದು ಗುಬ್ಬಿಯ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹ ಪ್ರಾಧ್ಯಾಪಕಿ ಡಾ.ಬಿ.ಎನ್.ಅರುಣ ಕುಮಾರಿ ತಿಳಿಸಿದರು.
ತುಮಕೂರು ಛಲವಾದಿ ಮಹಾಸಭಾದ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಮಹಿಳಾ ಉತ್ಸವದಲ್ಲಿ ಭಾಗಿಯಾಗಿ ಮಾತನಾಡಿದರು.
ಮಹಿಳಾ ದಿನಾಚರಣೆ ಎಂದರೆ ಪುರುಷರನ್ನು ವಿರೋಧಿಸುವುದಲ್ಲ. ಬದಲಾಗಿ, ಆತ್ಮವಿಶ್ವಾಸದ ಪ್ರತೀಕವಾಗಿ, ಆರ್ಥಿಕವಾಗಿ ಸಬಲರಾಗುತ್ತಾ ದೌರ್ಜನ್ಯ, ಹಾಗೂ ಮಾನಸಿಕ ಹಿಂಸೆಗಳನ್ನು ಸರಿಯಾಗಿ ಹಿಮ್ಮೆಟ್ಟಿಸುವುದು ಎಂದರು.
ಕೆಲಸ ಮಾಡುವ ಜಾಗಗಳಲ್ಲಿ ಮಹಿಳೆಯರನ್ನು ಗೌರವಿಸಬೇಕಿದೆ, ಸ್ತ್ರೀ ಗೆ ಸ್ವಾತಂತ್ರ್ಯ ಎಂದರೆ ಸ್ವೇಚ್ಚೆ ಅಲ್ಲ, ಅದೊಂದು ಭದ್ರತೆ ಎಂಬ ಭಾವನೆ ಮಹಿಳೆಯರಿಗೆ ಬರುವಂತೆ ವ್ಯವಸ್ಥೆ ರೂಪಿಸಬೇಕಿದೆ. ತಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಹೇಳಿಕೊಳ್ಳುವುದು ನೈಜವಾದ ಸ್ವಾತಂತ್ರ್ಯ ಮಹಿಳೆಯರಿಗೆ ಬೇಕಿದೆ ಎಂದು ಅಭಿಪ್ರಾಯಪಟ್ಟರು. ಹೆಣ್ಣು ಹೆಣ್ಣಾಗಿ ಹುಟ್ಟುವುದಿಲ್ಲ. ಅವಳು ಸಮಾಜದಲ್ಲಿ ಹೆಣ್ಣಾಗಿ ರೂಪಿಸಲ್ಪಡುತ್ತಾಳೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಡಾ.ಪಿ.ಚಂದ್ರಪ್ಪ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಮಹಿಳಾ ಸ್ವಾತಂತ್ರ್ಯಕ್ಕೆ, ಸಮಾನತೆಗೆ , ಮತದಾನದ ಹಕ್ಕಿಗಾಗಿ ರೂಪಿಸಿದ ಹೋರಾಟವನ್ನು ಸ್ಮರಿಸಿದರು.
ಮಹಿಳೆಯರಿಗೆ ಅನೇಕ ಆಟೋಟ ಸ್ಪರ್ಧೆಗಳನ್ನು ಈ ಸಂದರ್ಭದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಭಾದ ಉಪಾಧ್ಯಕ್ಷ ದೊಡ್ಡ ಸಿದ್ದಯ್ಯ , ಖಜಾಂಚಿ ಸಿದ್ದನಂಜಯ್ಯ, ಲಕ್ಷ್ಮೀ ನರಸಯ್ಯ, ಈರಬಾಲಯ್ಯ, ಸಂಘಟನಾ ಕಾರ್ಯದರ್ಶಿ ಚಂದ್ರಶೇಖರ ಇದ್ದರು.
ಮಹಿಳಾ ಸಂಚಾಲಕಿ ಮಂಜುಳಾ ನಿರೂಪಿಸಿದರು. ನಿರ್ದೇಶಕ ಎಸ್.ಆನಂದಮೂರ್ತಿ ಸ್ವಾಗತಿಸಿ, ಆಶಾ ರವೀಶ್ ವಂದಿಸಿದರು. ಸುಜಾತ ಆನಂದ್ ಪರಿಚಯಿಸಿದರು. ಪ್ರಮಿಳಾ ಮತ್ತು ರೇಣುಕಾ ಪ್ರಾರ್ಥನೆ ಮಾಡಿದರು. ಜಗದಾಂಬ ಮತ್ತು ಮಧುಶಾಲಿನಿ ತೀರ್ಪುಗಾರರಾಗಿ ಭಾಗವಹಿಸಿದ್ದರು.