ಇಂದಿನ ಯುವಕರ ಅಭಿರುಚಿಯೆಂದರೆ ಎಲ್ಲೇ ಕುಳಿತುಕೊಳ್ಳಲಿ ಮೊಬೈಲ್ ಹಿಡಿದಿರುತ್ತಾರೆ. ಪಕ್ಕದಲ್ಲಿ ಯಾರು ಕುಳಿತಿರುತ್ತಾರೆ ಎಂಬ ಬಗ್ಗೆ ವಿಚಾರಿಸುವುದಿಲ್ಲ. ಬಸ್ ಇಲ್ಲವೇ ಟ್ರೈನ್ ನಲ್ಲಿ ಕುಳಿತುಕೊಳ್ಳಲಿ ಅವರು ಮೊಬೈಲ್ ಹಿಡಿದುಕೊಳ್ಳುತ್ತಾರೆ. ಹೀಗಾಗಿ ಒಬ್ಬರಿಗೊಬ್ಬರಿಗೆ ಪರಿಚಯ ಮಾಡಿಕೊಳ್ಳಲು ಆಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಳವಳ ವ್ಯಕ್ತಪಡಿಸಿದರು.
ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟ, ತುಮಕೂರು ವಿಶ್ವವಿದ್ಯಾಲಯ, ದರೈಸ್ತ್ರೀ ಕಲ್ಚರಲ್ ಟ್ರಸ್ಟ್ ಹಾಗೂ ಸಮತಾ ಪ್ರಕಾಶನದ ವತಿಯಿಂದ ತುಮಕೂರುವ ವಿವಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಾ.ಶಿವಣ್ಣ ತಿಮ್ಲಾಪುರ ಬರೆದಿರುವ ‘ತೊಗಲ ಯೋಗಿ’ ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹೊಸ ತಂತ್ರಜ್ಞಾನದಿಂದ ದುಷ್ಪರಿಣಾಮವೇ ಹೆಚ್ಚು ಆಗುತ್ತಿವೆ. ತಂತ್ರಜ್ಞಾನದಿಂದ ಯಾವ ರೀತಿ ದುರುಪಯೋಗ ಮಾಡಿಕೊಳ್ಳಬಹುದು. ಹೀಗೆ ದುರುಪಯೋಗ ಮಾಡುವುದರಿಂದ ಸ್ವಂತಕ್ಕೆ ಆಗುವ ಲಾಭವೇನು? ಈ ರೀತಿಯ ಬುದ್ದಿವಂತರೂ ಕೂಡ ಇದ್ದಾರೆ.
ಶ್ರೀಕಿ ಅನ್ನುವ ವ್ಯಕ್ತಿ ಬಹಳ ಬುದ್ದಿವಂತ. ಅವನನ್ನು ನೋಡಲು ಪೆಕರನಂತೆ ಕಾಣುತ್ತಾನೆ. ಅಸಾಧಾರಣ ಬುದ್ದಿವಂತ ಅವನು. ಆದರೆ ಆ ಬುದ್ದಿವಂತಿಕೆಯನ್ನು ತಂತ್ರಜ್ಞಾನ ದುರುಪಯೋಗಪಡಿಸಿಕೊಳ್ಳಲು ಬಳಸಿಕೊಂಡು ಅಪರಾಧ ಎಸಗಿದ್ದಾನೆ. ಹೀಗಾಗಿ ಪೋಷಕರು ತಮ್ಮ ಮಕ್ಕಳನ್ನು ತಿದ್ದುವ ಕೆಲಸ ಮಾಡಬೇಕು. ಒಳ್ಳೆಯ ದಾರಿಯಲ್ಲಿ ಹೋಗುವಂತೆ ನೋಡಿಕೊಳ್ಳಬೇಕು ಎಂದರು. ಭವಿಷ್ಯದಲ್ಲಿ ಮಕ್ಕಳು ಸಮಾಜದ ಆಸ್ತಿಯಾಗಬೇಕು. ಹಾಗೆ ಮಕ್ಕಳನ್ನು ಬೆಳೆಸಬೇಕು ಎಂದರು.
ಹಳ್ಳಿಗಾಡಿನಿಂದ ಬಂದಂತಹ ಮಕ್ಕಳು, ಹಳ್ಳಿಗಾಡಿನ ಕುಗ್ರಾಮಗಳಲ್ಲಿ ಸರ್ಕಾರ ಶಾಲೆಗಳಲ್ಲಿ ಅದು ಕೆಟ್ಟ ವ್ಯವಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದಂತಹ ಮಕ್ಕಳು ಯಾರೂ ಕೂಡ ಮೇಲು ಮತ್ತು ಕೀಳು ಅನ್ನುವಂತಹದ್ದು ಆಗುವುದಿಲ್ಲ. ಎಲ್ಲ ಮಕ್ಕಳಿಗೂ ಕೂಡ ಭಗವಂತ ಬುದ್ದಿಶಕ್ತಿಯನ್ನು ಸಮಾನವಾಗಿ ಕೊಟ್ಟಿರುತ್ತಾನೆ. ಆದರೆ ಹಳ್ಳಿಗಾಡಿನ ಮಕ್ಕಳಿಗೆ ತಮ್ಮ ಪ್ರತಿಭೆ ಹೊರ ಹಾಕಲು ಅವಕಾಶ ಸಿಗುವುದಿಲ್ಲ ಎಂದರು.
ಹಳ್ಳಿಗಾಡಿನ ಮಕ್ಕಳು ತಮ್ಮ ಪ್ರತಿಭೆಯನ್ನು, ಬುದ್ದಿಶಕ್ತಿಯನ್ನು ಹೊರಹಾಕಲು ಅವಕಾಶಗಳು ದೊರೆಯಬೇಕು. ಅವಕಾಶ ದೊರೆತಾಗ ದಡ್ಡರು ಅನ್ನಿಸಿಕೊಳ್ಳಲು ಸಾಧ್ಯವಿಲ್ಲ. ಯಾರಿಂದ ಯಾರಿಗೂ ಕಡಿಮೆ ಇಲ್ಲ ಅನ್ನಿಸಿಕೊಳ್ಳುವುದು ಇಲ್ಲ. ಅವಕಾಶ ವಂಚಿತರಿಗೆ ಮಾತ್ರ ಸಮಾಜದಲ್ಲಿ ಕೆಲವೊಮ್ಮ ತನ್ನ ಪ್ರತಿಭೆಯನ್ನು ಹೊರಹೊಮ್ಮಿಸಲು ಪ್ರದರ್ಶನ ಮಾಡಲಿಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ಅವಕಾಶ ವಂಚಿತರು ಎಷ್ಟೇ ಬುದ್ದಿವಂತರು ಇದ್ದರೂ ಕೂಡ ಅವಕಾಶದಿಂದ ವಂಚಿತರಾಗಿ ತನ್ನ ತನವನ್ನು ಅವರು ಪರಿಣಾಮಕಾರಿಯಾಗಿ ಜನರ ಮುಂದೆ ಇಡಲಿಕ್ಕೆ ಸಾಧ್ಯವಾಗುವುದಿಲ್ಲ ಎಂದು ಹೇಳಿದರು.
ಡಾ.ಶಿವಣ್ಣ ತಿಮ್ಲಾಪುರ ಹಳ್ಳಿನಲ್ಲಿ ಹುಟ್ಟಿ, ಹಳ್ಳಿಯಲ್ಲಿಯೇ ವಿದ್ಯಾಭ್ಯಾಸ ಮಾಡಿ ತನ್ನ ಛಾಪನ್ನು ಮೂಡಿಸುವಂತಹ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ಇಂದಿನ ಯುವಕರಿಗೆ ಶಿವಣ್ಣ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.
ಸಂಸ್ಕೃತಿ ಚಿಂತಕ ಡಾ.ನಟರಾಜ ಬೂದಾಳ್ ಅಧ್ಯಕ್ಷತೆ ವಹಿಸಿದ್ದರು. ಕವನ ಸಂಕಲನ ಕುರಿತು ಡಾ.ಜಿ.ವಿ.ಆನಂದಮೂರ್ತಿ ಮಾತನಾಡಿದರು. ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಸಾಹಿತಿ ತುಂಬಾಡಿ ರಾಮಯ್ಯ, ಕುಲಸಚಿವೆ ನಾಹಿದಾ ಜಮ್ ಜಮ್, ಚರಕ ಆಸ್ಪತ್ರೆಯ ಡಾ.ಬಸವರಾಜು, ಸಾಮಾಜಿಕ ಹೋರಾಟಗಾರ ಡ್ಯಾಗೇರಹಳ್ಳಿ ವಿರೂಪಾಕ್ಷ, ಕಾಲೇಜು ಕನ್ನಡ ಅಧ್ಯಾಪಕರ ಒಕ್ಕೂಟದ ಅಧ್ಯಕ್ಷ ಡಾ.ಬಿ.ಆರ್.ರೇಣುಕಪ್ರಸಾದ್, ತೊಗಲ ಯೋಗಿ ಕೃತಿಕಾರ ಡಾ.ಶಿವಣ್ಣ ತಿಮ್ಲಾಪುರ ಇದ್ದರು.