ಜಾನ್ ಪೀಟರ್ ಶೌಟನ್ ಅವರ ‘ಅನುಭಾವಿಗಳ ಕ್ರಾಂತಿ’ ಕೃತಿಯು ವಚನ ಸಾಹಿತ್ಯಕ್ಕೆ ನೀಡಿರುವ ವಿಶಿಷ್ಟ ಕೊಡುಗೆಯಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಟಿ. ಆರ್. ಚಂದ್ರಶೇಖರ್ ಹೇಳಿದರು.
ತುಮಕೂರು ವಿಶ್ವವಿದ್ಯಾನಿಲಯದ ಬಸವೇಶ್ವರ ಅಧ್ಯಯನ ಪೀಠ ಹಾಗೂ ಡಾ. ಡಿ.ವಿ ಗುಂಡಪ್ಪ ಕನ್ನಡ ಅಧ್ಯಯನ ವಿಭಾಗಗಳು ಗುರುವಾರ ಜಂಟಿಯಾಗಿ ಆಯೋಜಿಸಿದ್ದ “ಜಾನ್ ಪೀಟರ್ ಶೌಟನ್ ಅವರ ಅನುಭಾವಿಗಳ ಕ್ರಾಂತಿ” ಕೃತಿಯ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅನುಭಾವಿಗಳ ಕ್ರಾಂತಿ ಕೃತಿಯಲ್ಲಿ ಬಸವಣ್ಣನವರ ಕಾಲಘಟ್ಟ, 12ನೆಯ ಶತಮಾನ, ವಸಾಹತು ಕಾಲಘಟ್ಟ ಹಾಗೂ ಸ್ವಾತಂತ್ರö್ಯ ನಂತರದ ಕಾಲಘಟ್ಟ ಎಂಬ ನಾಲ್ಕು ಭಾಗಗಳಿವೆ. ವಚನ ಸಾಹಿತ್ಯದಲ್ಲಿ ಮಹಿಳೆಯರ ಸ್ಥಾನಮಾನದ ಕುರಿತು ಕೂಡ ಈ ಗ್ರಂಥ ಬೆಳಕು ಚೆಲ್ಲಿದೆ ಎಂದರು.
ವಚನ ಸಾಹಿತ್ಯವನ್ನು ಸಂಸ್ಕೃತಿಯ ಚೌಕಟ್ಟಿನ ಒಂದು ಭಾಗವೆಂದು ಗುರುತಿಸಬಹುದು. ಏಕೀಕೃತ ಅಧ್ಯಯನಕ್ಕೆ ಅನುಕೂಲವಾಗುವಂತೆ ವಿಭಿನ್ನ ರೀತಿಯಲ್ಲಿ ಶೌಟನ್ ಕೃತಿಯನ್ನು ಕಟ್ಟಿಕೊಟ್ಟಿದ್ದಾನೆ ಎಂದರು.
ಸಂಶೋಧನೆಯಲ್ಲಿ ವಿಧಾನ, ವಿಶ್ಲೇಷಣೆ ಹಾಗೂ ನೆಲೆಗಟ್ಟು ಬಹಳ ಮುಖ್ಯವಾಗುತ್ತದೆ. ಈ ಕೃತಿಯ ಎಲ್ಲ ಭಾಗಗಳಲ್ಲೂ ಚರ್ಚೆಗೆ ಬರುವ ಏಕೈಕ ವಿಷಯ ಸಮಾನತೆ. ಸಾಮಾಜಿಕ ಸಮಾನತೆ, ಲಿಂಗ ಸಮಾನತೆ, ಆರ್ಥಿಕ ಸಮಾನತೆ ಎಲ್ಲವನ್ನೂ ಇದರಲ್ಲಿ ವಿವರಿಸಲಾಗಿದೆ ಎಂದರು.
ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕಗಳನ್ನು ಓದುವುದರ ಜೊತೆಗೆ ಸಂವಾದಗಳನ್ನು ನಡೆಸುವುದರಿಂದ ಕಲಿತದ್ದು ಹೆಚ್ಚು ನೆನಪಿನಲ್ಲಿ ಉಳಿಯುತ್ತದೆ. ವಿದ್ಯಾರ್ಥಿಗಳು ಮತ್ತು ಸಂಶೋಧನಾರ್ಥಿಗಳು ಜ್ಞಾನಕ್ಕೆ ಮುಕ್ತವಾಗಿರಬೇಕು. ಎಲ್ಲದರ ಅನುಭವವನ್ನು ಪಡೆಯಬೇಕು. ಅನುಭವವನ್ನು ಪಡೆದವರು ಅನುಭಾವಿಗಳಾಗುತ್ತಾರೆ ಎಂದರು.
ತುಮಕೂರು ವಿ.ವಿ. ಪರೀಕ್ಷಾಂಗ ಕುಲಸಚಿವ ಪ್ರೊ. ಪ್ರಸನ್ನ ಕುಮಾರ್, ಡಿ.ವಿ. ಗುಂಡಪ್ಪ ಕನ್ನಡ ಅಧ್ಯಯನ ಕೇಂದ್ರದ ಅಧ್ಯಕ್ಷ ಪ್ರೊ. ನಿತ್ಯಾನಂದ ಬಿ. ಶೆಟ್ಟಿ ಹಾಗೂ ಬಸವೇಶ್ವರ ಅಧ್ಯಯನ ಪೀಠದ ಸಂಯೋಜಕ ಡಾ. ವೆಂಕಟರೆಡ್ಡಿ ರಾಮರೆಡ್ಡಿ ಇದ್ದರು.


