ಮಕ್ಕಳು ಶಿಕ್ಷಣ ಕಲಿಯುವಾಗ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಪ್ರಶ್ನಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು ಎಂದು ವಿಚಾರವಾದಿ ನರೇಂದ್ರ ನಾಯಕ್ ತಿಳಿಸಿದರು.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನಲ್ಲಿ ಚಿಗುರು ಯುವಜನ ಸಂಘ, ಅಮಲಗೊಂದಿ ಹಾಗೂ ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟ-ಕರ್ನಾಟಕ ಸಹಯೋಗದಲ್ಲಿ ಆಯೋಜಿಸಿದ್ದ ವೈಜ್ಞಾನಿಕ ಮನೋಭಾವಕ್ಕಾಗಿ ವಿಜ್ಞಾನದ ನಡಿಗೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಮುದಾಯದಲ್ಲಿ ನಡೆಯುವ ಅನೇಕ ದುರ್ಘಟನೆಗಳು ನಾವು ಪ್ರಶ್ನೆಸದೆ ಇದ್ದ ಪರಿಣಾಮದಿಂದಲೂ ಸಹ ಘಟಿಸುತ್ತವೆ. ಹಾಗಾಗಿ ಪ್ರಜ್ಞಾವಂತರಾದ ಎಲ್ಲರೂ ಸಹ ತಮ್ಮ ದಿನನಿತ್ಯದ ಜೀವನದಲ್ಲಿ ಧೈರ್ಯದಿಂದ ಪ್ರಶ್ನೆ ಮಾಡುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕಿದೆ. ಪ್ರಶ್ನಿಸದೆ ಯಾವುದನ್ನು ಸಹ ಒಪ್ಪಿಕೊಳ್ಳಬಾರದು ಎಂದು ಹೇಳಿದರು.
ತಮ್ಮ ಶಿಕ್ಷಕರು ಹೇಳಿದರೂ ಸಹ ಅದನ್ನು ವಿಮರ್ಶಾತ್ಮಕವಾಗಿ ಆಲೋಚಿಸಬೇಕು. ಸಮುದಾಯದಲ್ಲಿ ಮುಗ್ಧ ಜನರು ಮೋಸಗಾರರಿಂದ ಮೋಸ ಹೋಗುವಂತಹ ಸಂದರ್ಭಗಳನ್ನು ನಾವು ನೋಡುತ್ತಿದ್ದೇವೆ, ಪವಾಡಗಳ ಮೂಲಕ ವಂಚನೆ ಮಾಡುವ ಜನರನ್ನು ವೈಜ್ಞಾನಿಕವಾಗಿ ಪ್ರಶ್ನಿಸಿ ಇಂಥವರಿಂದ ಜನಸಾಮಾನ್ಯರನ್ನು ರಕ್ಷಿಸಬೇಕಿದೆ ಎಂದರು.
ಚಿಗುರು ಯುವಜನ ಸಂಘದ ಮಂಜುನಾಥ್ ಆಮಲಗೊಂದಿ ಮಾತನಾಡಿ, ಪ್ರಸ್ತುತ ಸಮಾಜದಲ್ಲಿ ತಪ್ಪುಗಳು ನಡೆಯುತ್ತಿದ್ದರೂ ನೋಡಿಕೊಂಡು ಸುಮ್ಮನಿರುವವರ ಸಂಖ್ಯೆ ಹೆಚ್ಚಿದೆ. ಮಕ್ಕಳು ಕಲಿಕೆಯ ಜೊತೆ ವೈಜ್ಞಾನಿಕವಾಗಿ ಆಲೋಚಿಸುವುದನ್ನು ಕಲಿಯಬೇಕಿದೆ. ಮಕ್ಕಳು ತಮ್ಮ ದಿನ ನಿತ್ಯದ ಬದುಕಿನಲ್ಲಿ ವಿಜ್ಞಾನವನ್ನು ಅಳವಡಿಸಿಕೊಳ್ಳುವುದರ ಜೊತೆ ಬೇರೆಯವರಿಗೂ ಸಹ ಅದರ ಅರಿವನ್ನು ಮೂಡಿಸಬೇಕಿದೆ. ಮೌಢ್ಯವನ್ನು ಅಳಿಸಿ ವೈಜ್ಞಾನಿಕತೆಯನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ. ಇಂತಹ ವಿಚಾರಗಳನ್ನು ಮಕ್ಕಳಿಗೆ ತಿಳಿಸುತ್ತಿರುವ ಅಖಿಲ ಭಾರತ ವಿಚಾರವಾದಿಗಳ ಒಕ್ಕೂಟದ ಕಾರ್ಯವು ಶ್ಲಾಘನೀಯವಾದುದು ಎಂದರು.
ಶಿರಾ ತಾಲ್ಲೂಕಿನ ಅಮಲಗೊಂದಿ ಪ್ರೌಢಶಾಲೆ, ಶಿರಾ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ), ಮಂಜುಶ್ರೀ ಆಂಗ್ಲಶಾಲೆ, ಎಪಿಜೆ ಅಬ್ದುಲ್ ಕಲಾಂ ಶಾಲೆ ಮತ್ತು ಚಿಕ್ಕನಹಳ್ಳಿಯ ಮುರಾರ್ಜಿ ಶಾಲೆಯ ಮಕ್ಕಳಿಗೆ ಮೌಢ್ಯ ಬಯಲು ಮಾಡುವ ವಿಡಿಯೋಗಳನ್ನು, ಕೆಲವು ಮೌಢ್ಯಗಳನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸಿದರು.
ಕಾರ್ಯಕ್ರಮದಲ್ಲಿ ಚಿಗುರು ಯುವಜನ ಸಂಘದ ಅಂಬಿಕಾ, ಯಶೋಧ, ಮಧು, ಮಂಜುನಾಥ್ ಆಲದಮರ, ಸಾಜಿ, ಶಾಲೆಗಳ ಎಲ್ಲಾ ಶಿಕ್ಷಕರು ಮತ್ತು ಮಕ್ಕಳು ಹಾಜರಿದ್ದರು.