ಗುಮ್ಮಟನಗರ ಬಿಜಾಪುರದಲ್ಲಿ ದಿನಾಂಕ: 28-12-2024 ಶನಿವಾರದಂದು “ಅಖಿಲ ಕರ್ನಾಟಕ ಅಂಧರ ಪ್ರಥಮ ಸಾಹಿತ್ಯ ಸಮ್ಮೇಳನ” ನಡೆಯುತ್ತಿದೆ. ಅಂಧರ ಸಾಹಿತ್ಯ ಸಮ್ಮೇಳನದಲ್ಲಿ ನಾನು ಪ್ರಬಂಧ ಮಂಡನೆ ಮಾಡುವ ಸಲುವಾಗಿಯೇ ಅಂಧರ ಹಲವಾರು ಸಾಹಿತ್ಯ ಕೃತಿಗಳನ್ನು ಓದಿಕೊಂಡೆ. ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ಅಮೂಲ್ಯವಾದ ಕೊಡುಗೆಗಳನ್ನು ನೀಡಿರುವ ಹಲವಾರು ಅಂಧ ಸಾಧಕರನ್ನು ಹಾಗೂ ಸಂಘಸಂಸ್ಥೆಗಳನ್ನು ಕುರಿತು ಅಮೂಲ್ಯವಾದ ಮಾಹಿತಿಗಳನ್ನು ಕಲೆಹಾಕಿಕೊಂಡೆ.
ಇದೆಲ್ಲವನ್ನೂ ನಾನು ಗಮನಿಸಿದಾಗ ನನಗೆ ಅನ್ನಿಸಿದ್ದೇನೆಂದರೆ ಕಣ್ಣಿನ ದೃಷ್ಟಿ ಇರುವ ಲೇಖಕರು ಅಕ್ಷರಸ್ಥರಾಗಿದ್ದರೂ ಲೋಕವನ್ನು ನೋಡುವ ದೃಷ್ಟಿ ಕಳೆದುಕೊಳ್ಳುತ್ತಿರುವುದು ವಿಪರ್ಯಾಸ. ಲೇಖಕನಾದವನು ಮಾನವೀಯತೆಯ ದೃಷ್ಟಿ ಕಳೆದುಕೊಳ್ಳುವುದು ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ಭಯಾನಕ ಅಡಚಣೆಯಾಗಿದೆ, ಆದರೆ ಕಣ್ಣಿಲ್ಲದವರು ಬರೆದಿರುವ ಸಾಹಿತ್ಯ ಇತರರಿಗೆ ಪ್ರೇರಣೆಯಾಗುವ ಶಕ್ತಿಯನ್ನು ಪಡೆದುಕೊಂಡಿದೆ. ಕಣ್ಣಿರುವವರು ದೇಹದ ಕಣ್ಣುಗಳಿಂದ ಲೋಕವನ್ನು ನೋಡಿದರೆ ಅಂಧರು ಅಂತರಂಗದ ಕಣ್ಣುಗಳಿಂದ ಪ್ರಪಂಚವನ್ನು ನೋಡುತ್ತಾರೆ. ಹಾಗಾಗಿಯೇ ಕುರುಡುತನವು ಲೋಕವನ್ನು ಗ್ರಹಿಸುವ ತೀಕ್ಷ್ಣವಾದ ಸೂಕ್ಷ್ಮತೆಯನ್ನು ಅಂಧರಲ್ಲಿ ಬೆಳೆಸುತ್ತದೆ,

ಬ್ರೈಲ್ ಲಿಪಿಯ ಆವಿಷ್ಕಾರಕ್ಕೂ ಹಿಂದೆ ಅಂಧ ಕವಿಗಳು ತಮ್ಮ ಕಾವ್ಯ ಬರೆಯುವ ಅಥವಾ ಇತರರ ಕವಿತೆಗಳನ್ನು ಹಾಡುವ ಕಾಲದಲ್ಲಿ ಕಾವ್ಯವು ಮೌಖಿಕವಾಗಿತ್ತು . ಮೌಖಿಕ ಸಂಸ್ಕೃತಿಯ ಕವಿಗಳೂ ಹಾಡುಗಾರರೂ ಆಗಿದ್ದ ಅವರು ಬ್ರೈಲ್ ಲಿಪಿಯ ಲಭ್ಯತೆಯಿರದ ದಿನಗಳಲ್ಲಿ ಶಾಲಾ ಅಕ್ಷರ ಕಲಿಕೆಯ ಯಾವುದೇ ಪ್ರಯೋಜನ ಪಡೆಯಲಾಗಲಿಲ್ಲ. ಹೀಗಿದ್ದರೂ ಅವರ ಸಾಹಿತ್ಯಿಕ ಪ್ರವೃತ್ತಿಯನ್ನು ಬಿಟ್ಟುಕೊಡದೆ ಪದ್ಯಗಳನ್ನು ರಚಿಸಿ ಹಾಡಿದರು. ಅವರು ಹಾಡುತ್ತಿದ್ದ ಪದ್ಯಗಳನ್ನು ಗೆಳೆಯರು ಲಿಪಿರೂಪದ ಅಕ್ಷರಗಳಲ್ಲಿ ದಾಖಲೀಕರಿಸಿದರು. ಲೂಯಿ ಬ್ರೈಲ್ ಅವರು ಬ್ರೈಲ್ ಲಿಪಿಯನ್ನು ರೂಪಿಸಿ ಅಭಿವೃದ್ಧಿಪಡಿಸಿದ ನಂತರದಲ್ಲಿ ಅಂಧರು ಶಾಲಾ ಕಾಲೇಜುಗಳ ಔಪಚಾರಿಕ ಶಿಕ್ಷಣದ ಕಡೆಗೆ ಮುಖಮಾಡಿದರು.
ಈಗ ಈ ಅಂಧರ ಪ್ರಪಂಚದ ಪ್ರತಿಭೆಗಳು ತಮ್ಮ ಜ್ಞಾನವನ್ನು ಎಷ್ಟೊಂದು ವಿಕಾಸ ಮಾಡಿಕೊಂಡಿರುವರೆಂದರೆ ಬೇರೆ ಬೇರೆ ಭಾಷೆಗಳ ಉತ್ತಮ ಸಾಹಿತ್ಯ ಕೃತಿಗಳನ್ನು ಬ್ರೈಲ್ ಲಿಪಿಗೆ ಲಿಪ್ಯಂತರ ಮಾಡಿ ಅನುವಾದಿಸಿಕೊಳ್ಳುತ್ತಿದ್ದಾರೆ. ಬ್ರೈಲ್ ಲಿಪಿಯಿಂದಲೂ ಇತರೆ ಭಾಷೆಗಳಿಗೆ ಅನುವಾದ ಮಾಡುವ ಸೃಜನಶೀಲತೆಯನ್ನು ತೋರಿಸುತ್ತಿದ್ದಾರೆ. ಇತ್ತೀಚಿಗೆ “ಕರ್ನಾಟಕ ಅಂಧರ ವಿಮೋಚನಾ ವೇದಿಕೆಯ” ಕೆಲವು ಉತ್ಸಾಹಿ ಗೆಳೆಯರು “ನೆನಪಿನಂಗಳದಲ್ಲಿ ಶಂಕರ್ ನಾಗ್” ಎಂಬ ಕೃತಿಯನ್ನು ಬ್ರೈಲ್ ಪಿಪಿಗೆ ಅನುವಾದಿಸಿ ಪ್ರಕಟಿಸಿದ್ದಾರೆ. ಈಗ ಅಂಧರ ಬೆರಳ ತುದಿಯಲ್ಲಿ ಶಂಕರ್ ನಾಗ್ ಇದ್ದಾರೆ. ಬ್ರೈಲ್ ಲಿಪಿಯನ್ನು ಕಲಿತರೆ ಪ್ರಪಂಚದ ಎಲ್ಲಾ ಭಾಷೆಗಳನ್ನು ಓದಬಹುದು, ಬರೆಯಬಹುದು ಎಂದು ತೋರಿಸಿಕೊಡುತ್ತಿದ್ದಾರೆ. ತಮದೊಡಲಿನಿಂದ ಮೂಡಿದ ಬಂದ ಬೆಳಕಿನ ಕಿರಣಗಳಂತೆ ಕವಿ-ಸಾಹಿತಿಗಳು, ಸಂಗೀತಗಾರರು, ಕ್ರೀಡಾ ಪಟುಗಳು, ಶಿಕ್ಷಣ ತಜ್ಞರು, ಕಲಾವಿದರು, ಅಧಿಕಾರಿಗಳು ಅಂಧರ ಲೋಕದಿಂದ ಬಂದು ಪ್ರಕಾಶಿಸುತ್ತಿದ್ದಾರೆ. ಸೂರ್ಯನ ಬಿಸಿಲಿಗೆ ಮೈಯೊಡ್ಡಿದ ಅಂಧರು ಸೂರ್ಯನ ಬೆಳಕನ್ನೇ ಅನುಭವಿಸದೆ ಜಗತ್ತಿಗೆ ಬೆಳಕು ನೀಡುವ ಮಹಾ ಚೋದ್ಯವನ್ನು ಕಂಡು ನಾನು ಬೆರಗಾಗಿದ್ದೇನೆ…
ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತು ”ಅಖಿಲ ಕರ್ನಾಟಕ ಅಂಧರ ಪ್ರಥಮ ಸಾಹಿತ್ಯ ಸಮ್ಮೇಳನ”-ವನ್ನು ಇದೇ 28-12-2024 ರ ಶನಿವಾರದಂದು, ಗೋಲ ಗುಮ್ಮಟ ನಗರಿ ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಆಯೋಜಿಸಿರುತ್ತದೆ. ಪೂಜ್ಯ ಶ್ರೀ ಬಸವಾನಂದ ಸ್ವಾಮೀಜಿ, ಶ್ರೀ ಗುರು ಬಸವ ಮಹಾಮನೆ, ಮನಗಂಡಿ, ಧಾರವಾಡ ಇವರ ಸರ್ವಾಧ್ಯಕ್ಷತೆಯಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಕರ್ನಾಟಕ ಅಂಧರ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ- ಬಹುಕಾಲದ ನನ್ನ ಆತ್ಮೀಯ ಗೆಳೆಯ- ಸಾಮಾಜಿಕ ಹೋರಾಟಗಾರ- ಅಂಧಕವಿ ಮುದಿಗೆರೆ ರಮೇಶ್ ಕುಮಾರ್ ಅವರು ಸಮ್ಮೇಳನದ ಆಶಯ ನುಡಿಗಳನ್ನಾಡಲಿದ್ದಾರೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ.ಪುರುಷೋತ್ತಮ ಬಿಳಿಮಲೆ, ಪತ್ರಕರ್ತ- ಸಾಹಿತಿ ಜಾಣಗೆರೆ ವೆಂಕಟರಾಮಯ್ಯ, ವಡ್ಡಗೆರೆ ನಾಗರಾಜಯ್ಯ ಹಾಗೂ ರಾಜ್ಯದ ನೂರಾರು ಅಂಧ ಕವಿ ಸಾಹಿತಿಗಳು ಭಾಗವಹಿಸುತ್ತಿರುವ ಈ ಸಮ್ಮೇಳನದಲ್ಲಿ ತಮ್ಮ ಭಾಗವಹಿಸುವಿಕೆ ಮತ್ತು ಪ್ರೋತ್ಸಾಹವಿರಲಿ ಎಂದು ವಿನಂತಿಸುತ್ತೇನೆ.
— ಡಾ.ವಡ್ಡಗೆರೆ ನಾಗರಾಜಯ್ಯ, ಕವಿಗಳು, ಹಿರಿಯ ಸಾಹಿತಿಗಳು


