Friday, October 18, 2024
Google search engine
Homeಚಳುವಳಿಸಂವಿಧಾನ, ಪ್ರಜಾಪ್ರಭುತ್ವವನ್ನು ಕಾಯುವ ಕೆಲಸ ಮಾಡಲಿ

ಸಂವಿಧಾನ, ಪ್ರಜಾಪ್ರಭುತ್ವವನ್ನು ಕಾಯುವ ಕೆಲಸ ಮಾಡಲಿ

ಕಳೆದ 70 ವರ್ಷಗಳಿಂದ ಅಂಬೇಡ್ಕರ್ ಅನುಯಾಯಿಗಳು ಈ ದೇಶದ ಸಂವಿಧಾನ ಮತ್ತು ಪ್ರಜಾಪ್ರಭುವವನ್ನು ಕಾಯುವ ಕೆಲಸ ಮಾಡುತ್ತಿದ್ದು, ಬುದ್ದ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳು ಭೂಮಿ ಇರುವರೆಗೂ ಇರಬೇಕೆಂದರೆ, ಮತ್ತಷ್ಟು ಎಚ್ಚರಿಕೆಯಿಂದ ಕಾಯುವ ಕೆಲಸವನ್ನು ಮುಂದುವರೆಸಬೇಕಾದ ಅಗತ್ಯತೆ ಇದೆ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೋಳಿ ತಿಳಿಸಿದ್ದಾರೆ.

ತುಮಕೂರು ನಗರದ ಎಂಪ್ರೆಸ್ ಕೆಪಿಎಸ್ ಶಾಲೆಯ ಸಭಾಂಗಣದಲ್ಲಿ ದಲಿತ ಸಂಘರ್ಷ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ರಾಜ್ಯ ಸರ್ವ ಸದಸ್ಯರ ಮಹಾ ಅಧಿವೇಶನದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶೋಷಿತರಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಜೊತೆಗೆ, ಅರ್ಥಿಕ ಸಮಾನತೆ ದೊರೆಯಬೇಕಾದರೆ ಸಂವಿಧಾನದ ರಕ್ಷಣೆಯ ಜವಾಬ್ದಾರಿಯನ್ನು ನಾವೆಲ್ಲರೂ ಮುಂದುವರೆಸಬೇಕಾಗಿದೆ ಎಂದರು.
ಗಾಂಧಿ, ನೆಹರು ವಿಚಾರಧಾರೆಗಳು ಇಂದು ಮೂಲೆಗೆ ಸರಿದಿವೆ. ಆದರೆ ಬುದ್ದ, ಬಸವ, ಅಂಬೇಡ್ಕರ್ ಅವರ ವಿಚಾರಧಾರೆಗಳಿಗೆ ಅಂತಹ ಸ್ಥಿತಿ ಬರದಂತೆ ನಾವು ಎಚ್ಚರಿಕೆ ವಹಿಸಬೇಕಾಗಿದೆ. ಒಂದು ವೇಳೆ ಈ ವಿಚಾರಧಾರೆಗಳು ಮೂಲೆಗುಂಪಾದರೆ ಸೃಷ್ಟಿಯೇ ಮುಗಿದಂತೆ. ಅರ್ಥಿಕವಾಗಿ ಸಬಲರಾಗಿರುವ ದಲಿತರು, ತಮ್ಮದೇ ಸಮುದಾಯವನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಆಗಬೇಕು.ಸರ್ಕಾರಿ ನೌಕರಿ ಹೊಂದಿರುವ ದಲಿತರು, ತಮ್ಮದೆ ಸಮುದಾಯದ ಬಡವರ ಮಕ್ಕಳನ್ನು ದತ್ತು ಪಡೆದು, ಅವರನ್ನು ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸ ಮಾಡಬೇಕಾಗಿದೆ. ಬಡವರು, ದಲಿತರ ಶೈಕ್ಷಣಿಕ ಅಭಿವೃದ್ದಿ ಕೇಂದ್ರಗಳಾದ ಸರ್ಕಾರಿ ಶಾಲೆಗಳನ್ನು ಉಳಿಸುವ ಕೆಲಸವೂ ನಮ್ಮ ಅದ್ಯತೆಯಾಗಬೇಕಿದೆ ಎಂದು ಹೇಳಿದರು.
ರಾಜ್ಯದ ಯಾವುದೇ ಮೂಲೆಯಲ್ಲಿ ದೌರ್ಜನ್ಯ, ದಬ್ಬಾಳಿಕೆಗಳು ನಡೆದರು ಮೊದಲು ಸಂತ್ರಸ್ಥರ ಜೊತೆ ನಿಲ್ಲುವುದು ದಸಂಸ ಎಂಬ ಹೆಗ್ಗಳಿಕೆ ನಮ್ಮದು. ಅಂಬೇಡ್ಕರ್ ಒಂದು ವರ್ಗದ ಒಳಿತಾಗಿ ಕೆಲಸ ಮಾಡಲಿಲ್ಲ. ಇಡೀ ಮನುಕುಲದ ಒಳಿತಿಗಾಗಿ ಕೆಲಸ ಮಾಡಿದರು ಎಂಬುದನ್ನು ನಮ್ಮ ಯುವಜನತೆ ತಿಳಿಸುವ ಮೂಲಕ, ಹಳ್ಳಿ ಹಳ್ಳಿಗಳಲ್ಲಿ ಅಂಬೇಡ್ಕರ್ ವಿಚಾರಧಾರೆಯನ್ನು ಬಿತ್ತುವ ಕೆಲಸ ಆಗಬೇಕಾಗಿದೆ. ದಲಿತಪರ, ಜೀವ ಪರ ಹೋರಾಟಗಾರರಿಗೆ ಸಂಪನ್ಮೂಲದ ಕೊರತೆ ಇರುವುದು ಸಹಜ. ಸಂವಿಧಾನದ ಅಡಿಯಲ್ಲಿ ಅಧಿಕಾರ, ಅಂತಸ್ತು ಪಡೆದವರು ಈ ಕೊರತೆ ನೀಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕಿದೆ. ವಿಘಟನೆಯಾಗಿರುವ ಎಲ್ಲಾ ದಲಿತಪರ ಸಂಘಟನೆಗಳು ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಧಕ್ಕೆಯಾದಾಗ ಒಗ್ಗೂಡಿ ಎದುರಿಸುವ ಕೆಲಸ ಆಗಬೇಕಾಗಿದೆ ಎಂದರು.
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಮಾತನಾಡಿ, ಪ್ರತಿಯೊಂದು ಮಾನವ ವಿರೋಧಿ, ಜೀವ ವಿರೋಧಿ ಪ್ರಕ್ರಿಯೆಗಳಿಗೆ ದಸಂಸ ಪ್ರತಿಕ್ರಿಯಿಸಿದೆ. ದಲಿತರ ಸ್ವಾಭಿಮಾನದ ಹಾಡುಗಳು ಮನರಂಜನೆಯ ಸರಕು ಗಳಾಗದೆ, ಆಲೋಚನೆಗಳಾಗಬೇಕು. ಏಕವ್ಯಕ್ತಿ, ಏಕ ಭಾಷೆ, ಏಕ ರೂಪದ ಉಡುಪು, ಏಕ ಚುನಾವಣೆ ಇಂತಹ ವಿಚಾರಗಳ ಹಿಂದಿರುವ ಸಾಂಸ್ಕೃತಿಕ ರಾಜಕಾರಣವನ್ನು ದಲಿತ ಸಮುದಾಯ, ಅದರಲ್ಲಿಯೂ ದಲಿತ ಯುವ ಸಮುದಾಯ ಅರ್ಥಮಾಡಿ ಕೊಳ್ಳಬೇಕಿದೆ. ಹಾಗಾಗಿ ಬುದ್ದ ಭಾರತದಲ್ಲಿ ಜರ್ಮನಿಯ ನಾಜಿ ವಾದವನ್ನು ಬಿತ್ತಲು ನಾವು ಎಂದಿಗೂ ಬೀಡಬಾರದು. ರಾಜಪ್ರಭುತ್ವ ಸ್ಥಾಪನೆಯ ಹುನ್ನಾರವನ್ನು ತಡೆಯಬೇಕಿದೆ. 2025-26ರಲ್ಲಿ ಜನಸಂಖ್ಯೆಯ ಆಧಾರದಲ್ಲಿ ಲೋಕಸಭಾ ಕ್ಷೇತ್ರಗಳ ಪುನರಚನೆಯಾಗಲಿದ್ದು, ರಾಜಪ್ರಭುತ್ವವನ್ನು ಪ್ರತಿಪಾದಿಸುವ ಉತ್ತರಭಾರತ ಎಂ.ಪಿ ಗಳ ಸಂಖ್ಯೆ 600 ದಾಟಿದರೆ, ದ್ರಾವಿಡ ಆಲೋಚನೆಯ ದಕ್ಷಿಣ ಭಾರತದ ಎಂ.ಪಿಗಳ ಸಂಖ್ಯೆ 160 ದಾಟುವುದು ಕಷ್ಟ. ಉತ್ತರ ಭಾರತದವರ ಸುಖಃಕ್ಕೆ ದಕ್ಷಿಣ ಭಾರತದ ಜನರು ದುಡಿಯಬೇಕಾದ ಅಪಾಯ ಬಂದೊಗಲಿದೆ. ಮುಂದಿನ ದಿನಗಳು ಮತ್ತಷ್ಟು ಕಠೋರವಾಗಲಿರುವೇ. ಈಗಲೇ ನಾವು ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ಪ್ರೊ..ಬಿ.ಕೆ. ತಮ್ಮ ಇಡೀ ಜೀವನವನ್ನೇ ಶೋಷಿತ ಸಮುದಾಯಗಳ ಏಳಿಗೆಗಾಗಿ ಮುಡಿಪಾಗಿಟ್ಟವರು. ಸವಲತ್ತುಗಳೇ ಇಲ್ಲದ ಕಾಲದಲ್ಲಿ ಇಡೀ ರಾಜ್ಯ ಸುತ್ತಿ ದಸಂಸದವನ್ನು ಪ್ರಬಲವಾಗಿ ಕಟ್ಟಿದರು. ಅವರು ಏನು ಹೇಳುತ್ತಾರೆ ಎಂಬುದನ್ನು ಒಂದು ಸರ್ಕಾರ ಕಾದು ನಿಂತು ಕೇಳಿ ಜಾರಿಗೆ ತರುತ್ತಿತ್ತು. ಜಾರಿಯಲ್ಲಿರುವ ಭೂಮಿ ಹಕ್ಕು, ಪಿಟಿಸಿಎಲ್ ಕಾಯ್ದೆ, ದರಖಾಸ್ತು, ವಸತಿ ಶಾಲೆಗಳು, ಬ್ಯಾಕ್‌ಲಾಗ್ ಹುದ್ದೆ ತುಂಬುವುದು.ಬಡ್ತಿ ಮೀಸಲಾತಿ ಎಲ್ಲವೂ ದಲಿತ ಸಂಘರ್ಷ ಸಮಿತಿಯ ಬೇಡಿಕೆಗಳಾಗಿದ್ದವು ಎಂದರು.
ವೇದಿಕೆಯಲ್ಲಿ ದಸಂಸ ಹಿರಿಯ ಸದಸ್ಯ ಕುಂದೂರು ತಿಮ್ಮಯ್ಯ, ಮಾನವ ಬಂಧುತ್ವ ವೇದಿಕೆಯ ಆನಂತನಾಯ್ಕ್, ವಿರೂಪಾಕ್ಷ ಡ್ಯಾಗೇರಹಳ್ಳಿ, ಮುರುಳಿ ಕುಂದೂರು, ಚೇಳೂರು ಶಿವನಂಜಪ್ಪ, ಗಾನ ಅಶ್ವಥ್, ಮಲ್ಲೇಶ್ ಅಂಬುಗ, ನಾಗಣ್ಣ ಬಡಿಗೇರ, ಅರ್ಜುನ್ ಗೊಬ್ಬುರ್, ತಾಯಪ್ಪ, ಮಹಿಳಾ ಒಕ್ಕೂಟದ ರಾಜ್ಯ ಸಂಚಾಲಕಿ ನಿರ್ಮಲ, ಮುಖಂಡರಾದ ರವೀಂದ್ರ ಹೊಸಕೋಟೆ, ಚಂದ್ರಪ್ಪ ಮತ್ತಿತರರು ಪಾಲ್ಗೊಂಡಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular