ನಿವೃತ್ತ ಪ್ರಾಂಶುಪಾಲ, ಜನಪರ ಚಿಂತಕ ಪ್ರೊ.ಜಿ.ಎಂ.ಶ್ರೀನಿವಾಸಯ್ಯ ಅವರು ಸೆ.2ರಂದು ರಾತ್ರಿ 8.30ರ ಸುಮಾರಿನಲ್ಲಿ ನಿಧನರಾದರು. ಅವರಿಗೆ 91 ವರ್ಷ ವಯಸ್ಸಾಗಿತ್ತು.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದರು. ಸೋಮವಾರ ತೀವ್ರ ಅಸ್ವಸ್ಥರಾದ ಅವರನ್ನು ತುಮಕೂರಿನ ಗುಬ್ಬಿ ರಸ್ತೆಯಲ್ಲಿರುವ ಟಿಎಚ್.ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ರಾತ್ರಿ ನಿಧನರಾದರು.
ದಿನಾಂಕ:07-09-1933ರಲ್ಲಿ ಗುಬ್ಬಿಯ ಹೊಸಪಾಳ್ಯದ ಬಡಾವಣೆಯಲ್ಲಿ ಜನಿಸಿದ್ದರು. ಹಾಸನ, ಕೋಲಾರ ಮತ್ತು ತುಮಕೂರು ಆರ್ಟ್ಸ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿದ್ದರು.
ಇತಿಹಾಸ ವಿಷಯವನ್ನು ಸಮಗ್ರವಾಗಿ ತಿಳಿದುಕೊಂಡಿದ್ದ ಅವರು ಯುರೋಪಿಯನ್ ಇತಿಹಾಸದ ಕುರಿತು ನಿರರ್ಗಳವಾಗಿ ಪಾಠ ಬೋಧಿಸುತ್ತಿದ್ದರು ಎಂದು ಅವರ ವಿದ್ಯಾರ್ಥಿಗಳು ಸ್ಮರಿಸುತ್ತಾರೆ. ವಿದ್ಯಾರ್ಥಿ ವಲಯದಲ್ಲಿ ಅವರು ಜಿಎಂಎಸ್ ಎಂದೇ ಹೆಸರಾಗಿದ್ದರು.
ತುಮಕೂರು ವಿಶ್ವವಿದ್ಯಾಲಯದ ಮಾಜಿ ಸಿಂಡಿಕೇಟ್ ಸದಸ್ಯರಾಗಿದ್ದರು.
ಜಿ.ಎಂ.ಶ್ರೀನಿವಾಸಯ್ಯನವರ ಅಂತಿಮ ದರ್ಶನಕ್ಕೆ ತುಮಕೂರಿನ ಅಶೋಕನಗರದ ವಿನಾಯಕ ಆಸ್ಪತ್ರೆ ರಸ್ತೆಯಲ್ಲಿರುವ ಅವರ ಮನೆಯಲ್ಲಿ ಮಧ್ಯಾಹ್ನ 12ಗಂಟೆಯವರೆಗೆ ಇಡಲಾಗಿದೆ ಎಂದು ಕುಟುಂಬದ ಮೂಲಗಳು ಹೇಳಿವೆ.
ಸೆ.3ರಂದು ಮಧ್ಯಾಹ್ನ 2 ಗಂಟೆಗೆ ಗಾರ್ಡನ್ ರಸ್ತೆಯಲ್ಲಿರುವ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.