Tuesday, March 10, 2026
Google search engine
Homeಮುಖಪುಟಒಳಮೀಸಲು ಜಾರಿಗಾಗಿ ಮಾ.12 ರಂದು ಬೆಂಗಳೂರು ಚಲೋ

ಒಳಮೀಸಲು ಜಾರಿಗಾಗಿ ಮಾ.12 ರಂದು ಬೆಂಗಳೂರು ಚಲೋ

ರಾಜ್ಯದಲ್ಲಿರುವ ಕಾಂಗ್ರೆಸ್ ಸರಕಾರ 54 ಸಾವಿರ ಹುದ್ದೆಗಳನ್ನು ಒಳಮೀಸಲಾತಿ ಇಲ್ಲದೆ ತುಂಬಲು ಹೊರಟಿದೆ. ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾದಿಗರನ್ನು ನಂಬಿಸಿ ಕತ್ತುಕೊಯ್ಯುವ ಕೆಲಸ ಮಾಡಿದೆ. ಸರಕಾರದ ಈ ನಡೆಯನ್ನು ಖಂಡಿಸಿ ಮಾರ್ಚ್ 12ರಂದು ಬೆಂಗಳೂರು ಚಲೋ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಚಿಂತಕ ಕೆ.ದೊರೆರಾಜು ತಿಳಿಸಿದ್ದಾರೆ.

ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಳಮೀಸಲಾತಿಗಾಗಿ ಮಾದಿಗ ಸಮುದಾಯದ್ದು 35 ವರ್ಷಗಳ ನಿರಂತರ ಹೋರಾಟ. ಸುಪ್ರಿಂಕೋರ್ಟಿನ ತೀರ್ಪಿನ ಅನ್ವಯ ಒಳಮೀಸಲಾತಿ ಜಾರಿ ಮಾಡುವ ಬದಲು, ಇಲ್ಲಸಲ್ಲದ ನೆಪಗಳನ್ನು ಹೇಳಿಕೊಂಡು, ನಿರುದ್ಯೋಗಿಗಳು ಹೋರಾಟ ನಡೆಸುತ್ತಿದ್ದಾರೆ ಎಂದು 54 ಸಾವಿರ ಹುದ್ದೆಗಳನ್ನು ತುಂಬಲು ಹೊರಟಿರುವುದು ಖಂಡನೀಯ. ಹಾಗಾಗಿ ಇದು ನಮಗೆ ಮಾಡು, ಇಲ್ಲವೇ ಮಡಿ, ಅಂತಿಮ ಹೋರಾಟ. ನುಡಿದಂತೆ ನಡೆಯಿರಿ ಎಂದು ಕೇಳುವುದಕ್ಕಾಗಿ ಮಾರ್ಚ್ 12 ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದ್ದು, ಇದರಲ್ಲಿ ಸಮುದಾಯದ ಎಲ್ಲಾ ಯುವಜನರು, ಸಾಮಾಜಿಕ ನ್ಯಾಯದ ಪರವಾಗಿರುವ ಎಲ್ಲರೂ ಪಾಲ್ಗೊಳ್ಳುವಂತೆ ಮನವಿ ಮಾಡಿದರು.

ರಾಜ್ಯ ಸರಕಾರದ ನಿಲುವಿನಲ್ಲಿ ಸ್ಪಷ್ಟತೆ ಇಲ್ಲ. ಸುಪ್ರಿಂಕೋರ್ಟಿನ ಆದೇಶವಿದ್ದರೂ, ನ್ಯಾ.ನಾಗಮೋಹನ್ ದಾಸ್ ವರದಿಯ ಅಂಕಿ ಅಂಶಗಳು ಕಣ್ಣಮುಂದೆ ಇದ್ದರೂ ಸರಕಾರ ಒಳಮೀಸಲಾತಿ ಜಾರಿಗೆ ಮೀನಾಮೇಷ ಎಣಿಸುತ್ತಿದೆ. 2022ರಲ್ಲಿಯೇ ಮೀಸಲಾತಿ ಹೆಚ್ಚಳ ಮಾಡಿ ಸರಕಾರ ಆದೇಶ ಮಾಡಿದ್ದರೂ ಅದನ್ನು ಸಂವಿಧಾನದ 9ನೇ ಷಡ್ಯೂಲ್‌ಗೆ ಸೇರಿಸುವಂತೆ ಪಕ್ಷ ಅಧಿಕಾರಕ್ಕೆ ಬಂದು ಮೂರು ವರ್ಷ ಕಳೆದರೂ ಚಕಾರ ಎತ್ತಿಲ್ಲ. ಇಂತಹ ಜನವಿರೋಧಿ ಸರಕಾರದ ವಿರುದ್ದ ಯುವಜನರು ಸ್ವಯಂ ಪ್ರೇರಿತರಾಗಿ ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಕರೆ ನೀಡಿದರು.

ಒಳಮೀಸಲಾತಿ ಹೋರಾಟ ಸಮಿತಿ ಜಿಲ್ಲಾಧ್ಯಕ್ಷ ಡಾ.ವೈ.ಕೆ.ಬಾಲಕೃಷ್ಣಪ್ಪ ಮಾತನಾಡಿ, ರಾಜ್ಯಪಾಲರ ಅಂಕಿತದ ನಂತರವೂ ಸರಕಾರ ಒಳಮೀಸಲಾತಿ ಹೊರತುಪಡಿಸಿ, 54 ಸಾವಿರ ಹುದ್ದೆಗಳನ್ನು ತುಂಬಲು ಹೊರಟಿರುವುದು ಅಕ್ಷಮ್ಯ ಅಪರಾಧ. ಇದು ಸಮುದಾಯದ ಯುವಕರಿಗೆ ವಿಷ ಕೊಟ್ಟಂತೆ. ಒಳ ಮೀಸಲಾತಿ ಕಲ್ಪಿಸಿ ನೇಮಕಾತಿ ಮಾಡಿ ಎಂಬುದ್ದಷ್ಟೇ ಮಾ.12 ರ ಬೆಂಗಳೂರು ಚಲೋ ಅಜೆಂಡಾ. ಹಾಗಾಗಿ ಸರಕಾರ 22-02-2026 ನಡಾವಳಿಯನ್ನು ಹಿಂಪಡೆಯಬೇಕು. ಮೀಸಲಾತಿ ಹೆಚ್ಚಳ ಕುರಿತಂತೆ ಹೈಕೋರ್ಟಿನ ಮುಂದೆ ಸಮರ್ಥ ವಾದ ಮಂಡಿಸಬೇಕು. ಸಂವಿಧಾನದ 9ನೇ ಷಡ್ಯೂಲ್‌ಗೆ ಮೀಸಲಾತಿ ಹೆಚ್ಚಳ ಸೇರಿಸಬೇಕು. ಆರ್ಥಿಕ ಸೌಲಭ್ಯ ಹಂಚಿಕೆಯಲ್ಲಿಯೂ ಒಳಮೀಸಲಾತಿ ಕಲ್ಪಿಸಬೇಕು ಎಂಬುದು ನಮ್ಮ ಹೋರಾಟದ ಗುರಿಯಾಗಿದೆ. ತುಮಕೂರು ಜಿಲ್ಲೆಯಿಂದ ಸುಮಾರು 6 ಸಾವಿರ ಜನರು ಬೆಂಗಳೂರು ಚಲೋ ಕಾರ್ಯಕ್ರಮದಲ್ಲಿ ಸ್ವಯಂ ಪ್ರೇರಿತವಾಗಿ ಪಾಲ್ಗೊಳ್ಳುತಿದ್ದೇವೆ ಎಂದರು.

ಜಿ.ಪಂ.ಮಾಜಿ ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಜಿ.ಪಂ. ಮಾಜಿ ಅಧ್ಯಕ್ಷ ಕೆಂಚಮಾರಯ್ಯ ಮಾತನಾಡಿದರು. ಹೋರಾಟಗಾರರಾದ ಕೊಟ್ಟ ಶಂಕರ್, ಶಿವನಂಜಪ್ಪ, ಬ್ಯಾಂಕ್ ಶಿವಕುಮಾರ್, ನರಸೀಯಪ್ಪ, ರಂಜನ್, ನಾಗರಾಜು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular