ವಿಕಲಚೇತನ ಮತ್ತು ಬುದ್ಧಿಮಾಂಧ್ಯ ಮಕ್ಕಳನ್ನು ಮನೆಯಿಂದ ಹೊರಗೆ ಬಾರದಂತೆ ಬಂಧಿಸಿ ಕೂಡಿ ಹಾಕುವುದು ಅಪರಾಧ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶೆ ನೂರುನ್ನೀಸ ತಿಳಿಸಿದರು.
ತುಮಕೂರು ನಗರದ ಬಾಲಭವನ ಸಭಾಂಗಣದಲ್ಲಿ ವಿಕಲಚೇತನ ಮಕ್ಕಳೊಂದಿಗೆ ಕಾರ್ಯನಿರ್ವಹಿಸುವ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ವಿಶೇಷ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಕಲಚೇತನ ಮಕ್ಕಳು ಹಾಗೂ ಆರೈಕೆದಾರರೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅನಿಷ್ಠ ಪದ್ದತಿಗಳ ಸಂಕೋಲೆಯಿಂದ ವಿಕಲಚೇತನ ಮಕ್ಕಳನ್ನು ಕಟ್ಟಿ ಹಾಕುವುದು, ಕೂಡಿ ಹಾಕಬಾರದು. ಇಂತಹ ಪದ್ದತಿಗಳು ಕಂಡು ಬಂದರೆ ಅಂತಹವರಿಗೆ ಕಾನೂನಿನಲ್ಲಿ ದಂಡನೆ ಮತ್ತು ಶಿಕ್ಷೆ ವಿಧಿಸಲು ಅವಕಾಶ ಇದೆ. ಇದು ಕಾನೂನು ಪ್ರಕಾರ ಅಪರಾಧ. ಇಂತಹ ಕಾರ್ಯಕ್ಕೆ ಯಾರೂ ಸಹ ಕೈ ಹಾಕಬಾರದು. ಬದಲಾಗಿ ವಿಕಲಚೇತನ ಮಕ್ಕಳ ಆರೈಕೆಗಾಗಿ ಇರುವ ಡೇ ಕೇರ್ ಸೆಂಟರ್ ಮತ್ತು ವಸತಿ ಶಾಲೆಗಳಿಗೆ ಸೇರಿಸಲು ಪೋಷಕರು ಹೆಚ್ಚು ಜಾಗೃತರಾಗಬೇಕು ಎಂದು ಹೇಳಿದರು.
ಗರ್ಭವಾಸ್ಥೆಯಲ್ಲೇ ಮಗುವಿನ ಸ್ಥಿತಿಯನ್ನು ಕಂಡು ಹಿಡಿಯುವಷ್ಟು ತಂತ್ರಜ್ಞಾನ ಮುಂದುವರೆದಿದ್ದರೂ ಸಹ ವಿಕಲಚೇತನ ಮಕ್ಕಳು ಜನಿಸುವುದು ಕಂಡು ಹಿಡಿಯುವುದು ಕಷ್ಟಕರವಾಗುತ್ತಿದೆ. ವಿಕಲಚೇತನ ಮಕ್ಕಳನ್ನು ಜೀವನಪೂರ್ತಿ ಆರೈಕೆ ಮಾಡುವ ಪೋಷಕರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದರು.
ವಿಕಲಚೇತನ ಮಕ್ಕಳಿಗೆ ನಿಖರವಾಗಿ ಬೇಕಾಗಿರುವ ಅಗತ್ಯತೆಗಳನ್ನು ಗುರುತಿಸುವುದು ಎಲ್ಲರ ಕರ್ತವ್ಯ ಎಂದ ಅವರು, ಸಮಾಜದಲ್ಲಿ ವಿಕಲಚೇತನ ಮಕ್ಕಳಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ತಿಳಿಸಿದರು.
ವಿಕಲಚೇತನ ಮಕ್ಕಳಿಗಾಗಿ ಸರ್ಕಾರದಿಂದ ಬಹಳಷ್ಟು ಯೋಜನೆಗಳು ಜಾರಿಯಾಗಿದ್ದು, ವಿವಿಧ ಇಲಾಖೆಗಳ ಮೂಲಕ ಸೌಲಭ್ಯಗಳು ಲಭಿಸುತ್ತಿವೆ. ಆದರೆ ಮಾಹಿತಿ ಕೊರತೆಯಿಂದಾಗಿ ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪುದು ಕಷ್ಟ ಸಾಧ್ಯವಾಗುತ್ತಿದೆ. ಹಾಗಾಗಿ ಸರ್ಕಾರದ ಯೋಜನೆಗಳ ಬಗ್ಗೆ ವಿಕಲಚೇತನ ಮಕ್ಕಳಿಗೆ ಮಾಹಿತಿ ಒದಗಿಸುವ ಕಾರ್ಯ ಅಗತ್ಯವಾಗಿ ಆಗಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ಕೆ.ಟಿ. ತಿಪ್ಪೇಸ್ವಾಮಿ ಮಾತನಾಡಿ, ರಾಜ್ಯದಲ್ಲಿ ವಿಕಲಚೇತನ ಮಕ್ಕಳಿಗೆ ಸಿಗಬೇಕಾಗಿರುವ ಸೌಲಭ್ಯಗಳನ್ನು ದೊರಕಿಸುವ ಸಂಬAಧ ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಕೆಎಸ್ಸಾರ್ಟಿಸಿ ಮತ್ತು ಬಿಎಂಟಿಸಿ ಬಸ್ಗಳಲ್ಲಿ ವಿಕಲಚೇತನ ಮಕ್ಕಳಿಗೆ ಆಗುತ್ತಿರುವ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪವಿತ್ರ ಮಾತನಾಡಿದರು. ಮೊಬಿಲಿಟಿ ಇಂಡಿಯಾ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕ ಅಲ್ಬಿನಾ ಶಂಕರ್, ಹಿರಿಯ ಕಾರ್ಯಕ್ರಮ ವ್ಯವಸ್ಥಾಪಕ ಆನಂದ್ ಎಸ್.ಎನ್., ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ ಬಿ.ಎಸ್. ಚಿದಾನಂದಮೂರ್ತಿ, ಸಬ್ಇನ್ಸ್ಪೆಕ್ಟರ್ ಬಾಬು ಕಿಲಾರಿ, ಹೆಲನ್ ಕೆಲರ್ ನಿರ್ದೇಶಕರಾದ ಎಂ.ಎಸ್. ಗಾಯತ್ರಿ, ಡಾ. ಹಿರೇಮಠ್, ಚೈತನ್ಯ, ಸಂಗಮೇಶ್ವರ್ ಇದ್ದರು.


