ಒಳಮೀಸಲಾತಿ ಇಲ್ಲವಾದಲ್ಲಿ ಸರ್ಕಾರ ನೀಡಿರುವ ಬಾಬು ಜಗಜೀವನ ರಾಮ್ ಪ್ರಶಸ್ತಿಯನ್ನು ಹಿಂದಿರುಗಿಸುತ್ತೇನೆ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಕುಂದೂರು ತಿಮ್ಮಯ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿದ್ದಾರೆ.
ನನ್ನ ಸಾಮಾಜಿಕ ಸೇವೆಯನ್ನು ಗುರುತಿಸಿ 2023ನೇ ಸಾಲಿನ ಬಾಬು ಜಗಜೀವನರಾಮ್ ರಾಜ್ಯ ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದೀರಿ. ನನಗೆ ಇದರಿಂದ ಅತೀವ ಸಂತೋಷವಾಗಿದೆ. ಐವತ್ತು ವರ್ಷದ ನನ್ನ ಸಂಘರ್ಷದ ಬದುಕು ಸಾರ್ಥಕವೆನಿಸಿತ್ತು. ಪ್ರಶಸ್ತಿ ಪ್ರದಾನ ಮಾಡಿ ಅಂದು ತಾವು ಸಾಮಾಜಿಕ ನ್ಯಾಯಕ್ಕೆ ಬದ್ದವಾಗಿರುವುದಾಗಿ, ಒಳಮೀಸಲಾತಿಯನ್ನು ಜಾರಿಗೊಳಿಸಿಯೇ ತೀರುವುದಾಗಿ ಆಡಿದ ಮಾತು ಇನ್ನೂ ಕಿವಿಯಲ್ಲಿ ಗುಯ್ ಗುಡುತ್ತಿದೆ ಎಂದು ಹೇಳಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪು ಬಂದ ನಂತರವೂ, ತಾವೇ ರಚಿಸಿದ ನ್ಯಾಯಮೂರ್ತಿ ನಾಗಮೋಹನ್ ದಾಸ್ ವರದಿ ಬಂದು ಒಳಮೀಸಲು ಹಂಚಿಕೆಗೆ ಶಿಫಾರಸು ಮಾಡಿದ ನಂತರವೂ ಸಮಿತಿ, ಉಪಸಮಿತಿ, ಕ್ಯಾಬಿನೆಟ್ ತೀರ್ಮಾನ ಎಲ್ಲ ಮುಗಿದರೂ ಒಂದಲ್ಲ ಒಂದು ಅನಗತ್ಯ ಹೊಸ ಸಮಸ್ಯೆ ಸೃಷ್ಟಿಸಿಕೊಂಡು ಒಳಮೀಸಲು ಅನುಷ್ಠಾನ ಮುಂದೂಡುತ್ತಲೇ ಬರುತ್ತಿರುವುದು ಅವಮಾನಕರವೆನಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಶೇಕಡ 15ರ ಹಳೆ ಮೀಸಲು ನಿಯಮದಂತೆ 56 ಸಾವಿರ ಹುದ್ದೆಗಳನ್ನು ಒಳಮೀಸಲು ಇಲ್ಲದೆ ಭರ್ತಿ ಮಾಡಿಕೊಳ್ಳಲು ಮುಂದಾಗಿರುವುದು ನೋವಿನ ಸಂಗತಿ ಮಾತ್ರವಾಗಿರದೆ ನಾವುಗಳೆಲ್ಲ ತಮ್ಮ ಹಾಗೂ ತಮ್ಮ ಸಾಮಾಜಿಕ ನ್ಯಾಯದ ಮೇಲೆ ಇಟ್ಟಿರುವ ಬದ್ದತೆಯು ಬುಡಮೇಲಾಗುತ್ತಿರುವ ಪ್ರಶ್ನೆಯಾಗಿರುತ್ತದೆ ಆದ್ದರಿಂದ ವೈಜ್ಞಾನಿಕ ಅಂಕಿ ಅಂಶಗಳೇ ಹೇಳುತ್ತಿರುವಂತೆ ಅತ್ಯಂತ ಹಿಂದುಳಿದ ಅಲೆಮಾರಿ ಮತ್ತು ಮಾದಿಗ ಸಮುದಾಯಕ್ಕೆ ಪ್ರತ್ಯೇಕವಾಗಿ ಶೆ.1 ಹಾಗೂ 6ರಷ್ಟು ಒಳಮೀಸಲಾತಿ ನೀಡಬೇಕು. ಒಳಮೀಸಲಾತಿ ಇಲ್ಲದೆ ಯಾವುದೇ ನೇಮಕಾತಿಯನ್ನು ಮುಂದುವರೆಸುವುದೇ ಆದರೆ ತಾವು ಆಶ್ವಾಸನೆ ಇಟ್ಟು ನೀಡಿದ ಪ್ರಶಸ್ತಿಯನ್ನು ಮುಡಿಗೇರಿಸಿ ತಿರುಗಾಡುವುದರಲ್ಲಿ ಯಾವುದೇ ಅರ್ಥ ಕಾಣುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ಸಮುದಾಯದ ಹಿತವೇ ವೈಯಕ್ತಿಕ ಹಿತವೂ ಆಗಿದೆ. ಮಾ.12ರಂದು ನಡೆಯುವ ತಮ್ಮ ಕ್ಯಾಬಿನೆಟ್ ಸಭೆಯಲ್ಲಿ ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ಬಾಬು ಜಗಜೀವನರಾಮ್ ಪ್ರಶಸ್ತಿಯನ್ನು ಸರ್ಕಾರಕ್ಕೆ ಹಿಂದಿರುಗಿಸುವುದಾಗಿ ನೋವಿನಿಂದ ಈ ಪತ್ರ ಬರೆಯುತ್ತಿದ್ದೇನೆ. ಅವಕಾಶ ವಂಚಿತರಿಗೆ ಆದ್ಯತೆಯಾನುಸಾರ ಅವಕಾಶ ಕಲ್ಪಿಸುವುದೇ ಮೀಸಲು ನೀತಿಯಾಗಿದೆ. ಸಂವಿಧಾನದ ಆಶಯವಾಗಿದೆ. ಅದರ ಅನುಸಾರವೇ ಸಂವಿಧಾನ ಜಾರಿಯಾದಾಗಿನಿಂದಲೂ ಪರಿಶಿಷ್ಟರು ಮೊದಲ ಆದ್ಯತೆಯಾಗಿದ್ದರು. ಇದನ್ನು ಇತರ ಎಲ್ಲಾ ಸಮುದಾಯಗಳೂ ಒಪ್ಪಿಕೊಂಡು ಪಾಲಿಸಿಕೊಂಡು ಬಂದಿವೆ. ಈಗ ಪರಿಶಿಷ್ಟರೊಳಗೆ ಒಳಮೀಸಲು ಎಂದಾಗ ನ್ಯಾಯಮೂರ್ತಿ ನಾಗಮೋಹನದಾಸ್ ಅವರು ಹಿಂದುಳಿದಿರುವಿಕೆಯನ್ನು ಆದ್ಯತೆಯನುಸಾರ ಪ್ರವರ್ಗ ಎ,ಬಿ.ಸಿ,ಡಿ ಎಂದು ಗುರುತಿಸಿರುತ್ತಾರೆ. ಇದನ್ನು ಒಪ್ಪಿಕೊಂಡು ರೋಷ್ಟರ್ ನಿಯಮವನ್ನು ಯಥಾಸ್ಥಿತಿಯಲ್ಲಿ ಪಾಲಿಸಬೇಕಾಗಿ ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.


