Monday, September 16, 2024
Google search engine
Homeಮುಖಪುಟವಿಜಯನಗರ ಕಾಲದ ತಾಮ್ರ ಶಾಸನ ಪತ್ತೆ

ವಿಜಯನಗರ ಕಾಲದ ತಾಮ್ರ ಶಾಸನ ಪತ್ತೆ

ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಆಂಧ್ರಪ್ರದೇಶದ ಗಡಿಭಾಗದ ಅಗಳಿಯಲ್ಲಿ ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿ ಆಳ್ವಿಕೆ ಮಾಡುತ್ತಿದ್ದ ಹರತಿ-ನಿಡುಗಲ್ ಪಾಳೇಗಾರ ದೇವಪ್ಪನಾಯಕನ ಕಾಲದ ತಾಮ್ರ ಶಾಸನ ಪತ್ತೆಯಾಗಿದೆ. ಈ ಶಾಸನವನ್ನು ಅಗಳಿಯ ಗ್ರಾಮಸ್ಥರಾದ ಸದಾಶಿವಯ್ಯನವರು ಸಂರಕ್ಷಿಸಿಟ್ಟುಕೊಂಡಿದ್ದಾರೆ. ಇದನ್ನು ತಾಮ್ರಲೋಹದ ಹಲಗೆಯ ಎರಡೂ ಮುಖದಲ್ಲಿ ಕನ್ನಡ ಲಿಪಿಯಲ್ಲಿ ಬರೆದಿದ್ದರೂ ಭಾಷೆ ಮಾತ್ರ ಸಂಸ್ಕೃತ ಮತ್ತು ತೆಲುಗು ಆಗಿದೆ. ಈ ತಾಮ್ರ ಶಾಸನವು ಒಟ್ಟು 49 ಸಾಲುಗಳಿಂದ ಕೂಡಿದೆ ಎಂದು ತುಮಕೂರಿನ ಇತಿಹಾಸ ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ತಿಳಿಸಿದ್ದಾರೆ.

ಈ ತಾಮ್ರ ಶಾಸನವನ್ನು ಹೆಚ್ಚಿನ ಜಯಪತ್ರಿಕೆ ಎಂದು ಕರೆಯಲಾಗಿದ್ದು ವಿಜಯನಗರದ ಚಕ್ರವರ್ತಿ ಬುಕ್ಕರಾಯನನ್ನು (1399-1406) ಉಲ್ಲೇಖಿಸುತ್ತದೆ. ಶಾರದಾ ಸ್ತುತಿಯಿಂದ ಆರಂಭವಾಗುವ ಈ ಶಾಸನವು ಸಂಸ್ಕೃತ ಶ್ಲೋಕಗಳಿಂದ ಕೂಡಿದ್ದು ಅನಂತರ ತೆಲುಗು ಭಾಷೆಯನ್ನು ಕನ್ನಡ ಲಿಪಿಯಲ್ಲಿ ಬರೆಯಲಾಗಿದೆ ಎಂದಿದ್ದಾರೆ.

ಈ ತಾಮ್ರ ಶಾಸನವು ಅಗಳಿ ಗ್ರಾಮದ ಶಂಕರೇಶ್ವರ ದೇವರಿಗೆ ಸಂಬಂಧಪಟ್ಟಿದ್ದಾಗಿದ್ದು ಹರತಿ-ನಿಡುಗಲ್ ಪಾಳೇಗಾರರ ವಂಶದವನಾದ ದೇವಪ್ಪನಾಯಕನು ತನ್ನ ರಾಜ್ಯಕ್ಕೆ ಸೇರಿದ್ದ ಅಗಳಿಯ ಶಂಕರೇಶ್ವರ ದೇವರಿಗೆ ದೇವಮಾನ್ಯವಾಗಿ ಆ ಊರಿಗೆ ಸೇರಿದ್ದ ಕೆರೆ, ಕಟ್ಟೆ, ಕುಂಟೆ, ಬಾವಿ, ಹೊಲ, ಗದ್ದೆಯ ಜೊತೆಗೆ ಆ ಊರಿನ ಜನರಿಂದ ಸಂಗ್ರಹವಾದ ತೆರಿಗೆಯನ್ನು ದಾನ ಮಾಡಿದ್ದನು. ಈ ದಾನವನ್ನು ಆತ ಆ ದೇವಾಲಯದ ಆಡಳಿತವನ್ನು ನೋಡಿಕೊಳ್ಳುತ್ತಿದ್ದ ಹದಿನೆಂಟು ಜನರಿಗೆ ಒಂದೊಂದು ವ್ರಿತ್ತಿಯನ್ನಾಗಿ ವಿಂಗಡಿಸಿ ನೀಡಿದನೆಂದು ಉಲ್ಲೇಖಿಸಲಾಗಿದೆ.

ಅನಂತರ ಈ ದಾನವನ್ನು ಮತ್ತೆ ಹದಿಮೂರು ಜನರಿಗೆ ವಿಸ್ತರಿಸಿ ನೀಡಿದ್ದನ್ನು ದಾಖಲಿಸಿರುವುದರಿಂದ ಅದಕ್ಕೆ ಹೆಚ್ಚಿನ ಜಯಪತ್ರಿಕೆ ಎಂದು ಕರೆಯಲಾಗಿದೆ. ಅದನ್ನು ಪಡೆದವರೆಂದರೆ,

1. ತೆಲುಗು ಬಣಜಿಗ ಮದನ ಗೌಡ (ಗೌಡ) 2. ವುಳಿ ಕುಂಚಿಟಿಗ ರಂಗನ ಗೌಡ (ಪಟೇಲ) 3. ಕರಣಂಭದ್ರಪ್ಪ (ಶ್ಯಾನುಭೋಗ) 4. ಜಾಯಸ್ಯ ನಾರಾಯಣ ಭಟ್ಟ (ಜ್ಯೋತಿಷ) 5. ತಲಾರ ಮಾಧ (ಪಹರೆ, ತಳವಾರ) 6. ಕಮ್ಮಾರ ಚನ್ನಯ್ಯ 7. ಬಡಗಿ ಕೆಂಪಯ್ಯ 8. ಚಾಕಲ ಚನ್ನ (ಅಕ್ಕಸಾಲಿ) 9. ಮಂಗಳ ಭದ್ರ (ನಾಯಿಂದ) 10. ಅಂಗಜಾಲ ಕೊಂಡ (ರಕ್ಷಕ) 11. ಕುಂಬಾರ ಮಲ್ಲ 12. ತೋಟಿ ಕದ್ರಿ (ಸೇವಕ, ಜಾಡಮಾಲಿ) 13. ಎಡಗೈ ಓಬ
ಇವರೆಲ್ಲ ದೇವರ ಕಾರ್ಯವನ್ನು ವಂಶಪಾರಂರ‍್ಯವಾಗಿ ನಡೆಸಿಕೊಂಡು ಹೋಗಬೇಕೆಂದು ಮದನಗೌಡ, ವುಳಿ ರಂಗನಗೌಡನ ಹೆಸರಿನಲ್ಲಿ ಹೆಚ್ಚಿನ ಜಯಪತ್ರಿಕೆಯನ್ನು ಬರೆದುಕೊಡಲಾಗಿದೆ.

ಈಗಲೂ ಸಹ ಆ ಊರಿನಲ್ಲಿ ಮಹಾನವಮಿ ಹಬ್ಬದ ಸಂದರ್ಭದಲ್ಲಿ ತಾಮ್ರ ಶಾಸನದಲ್ಲಿ ತಿಳಿಸಿರುವ ವ್ಯಕ್ತಿಗಳ ವಂಶಸ್ಥರು ಶಂಕರೇಶ್ವರ ದೇವಾಲಯದ ಆವರಣದಲ್ಲಿ ಸಭೆ ಸೇರಿ ಮಹಾನವಮಿಯ (ದಸರಾ ಹಬ್ಬ) ಒಂಭತ್ತು ದಿನದ ಧಾರ್ಮಿಕ ಆಚರಣೆಯ ಬಗ್ಗೆ ಚರ್ಚಿಸಿ ತಮಗೆ ನಿಗದಿಯಾಗಿರುವ ಸೇವೆಗಳನ್ನು ಮಾಡುತ್ತಿದ್ದಾರೆ. ಈಗ ಇವರನ್ನೆಲ್ಲಾ ದೇವರ ಕೈವಾಡದವರು ಎಂದು ಕರೆಯಲಾಗುತ್ತಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಆರಂಭವಾದ ಈ ಪರಂಪರೆ ಆ ಊರಿನಲ್ಲಿ ಈಗಲೂ ಮುಂದುವರಿಯುತ್ತಿರುವುದು ವಿಶೇಷವಾಗಿದೆ ಎಂದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular