ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿರುವ ಆರೋಪಿಗಳು ತುಮಕೂರು ಹೊರ ವಲಯದಲ್ಲಿರುವ ಜಿಲ್ಲಾ ಕಾರಾಗೃಹದಲ್ಲೇ ಕಿತ್ತಾಡಿಕೊಂಡಿರುವ ಘಟನೆ ನಡೆದಿದೆ ಎಂದು ಪವರ್ ಟಿವಿ ವರದಿ ಮಾಡಿದೆ.
ತುಮಕೂರು ಜೈಲಿನ ಒಂದೇ ಬ್ಯಾರಕ್ ನಲ್ಲಿರುವ ನಾಲ್ವರು ಆರೋಪಿಗಳ ನಡುವೆ ಮಾತಿನ ಚಕಮಕಿ ನಡೆದಿದ್ದು ಕಿತ್ತಾಟ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ರವಿಶಂಕರ್, ನಿಖಿಲ್, ಕಾರ್ತಿಕ, ಕೇಶವ ಪರಸ್ಪರ ಕಿತ್ತಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ರಾಘವೇಂದ್ರನ ಮಾತು ಕೇಳಿಕೊಂಡು ನಾವು ಈ ಕೇಸ್ ನಲ್ಲಿ ಸಿಲುಕಿದ್ದೇವೆ. ನಮಗೆ ಜೈಲೇ ಗಟ್ಟಿಯಾಗುತ್ತೋ, ಯಾರು ಸಹಾಯ ಮಾಡುತ್ತಾರೋ ಗೊತ್ತಿಲ್ಲ. ನಮಗೆ ಶಿಕ್ಷೆಯೇ ಗಟ್ಟಿಯಾಗುತ್ತೋ ಅಥವಾ ನಮಗೆ ಜಾಮೀನು ಸಿಗುತ್ತೋ ಗೊತ್ತಿಲ್ಲ ಎಂದು ಪರಸ್ಪರ ಕಿತ್ತಾಡಿಕೊಂಡರು ಎಂದು ಹೇಳಲಾಗಿದೆ.
ರಾಘವೇಂದ್ರ ನಮ್ಮೆಲ್ಲರ ಜೀವನ ಸೆಟಲ್ ಆಗುತ್ತದೆ ಎಂದು ಹೇಳಿದ್ದ. ಆದರೆ ನಾವು ಜೈಲಿನಲ್ಲಿಯೇ ಉಳಿಯಬೇಕಾಗಿ ಬಂದಿದೆ. ನಮ್ಮನ್ನು ಜೈಲಿನಿಂದ ಬಿಡಿಸುವವರು ಯಾರು ಎಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.
ರೇಣುಕಾಸ್ವಾಮಿ ಕೊಲೆ ನಂತರ ಮೃತದೇಹವನ್ನು ಬಿಸಾಡಿದ್ದು, ಸ್ಟೇಷನ್ ಗೆ ಹೋಗಿ ಸರೆಂಡರ್ ಆಗಿದ್ದು, ಎಲ್ಲವೂ ನಡೆದಿದ್ದು ರಾಘವೇಂದ್ರ ಹೇಳಿದಂತೆಯೇ ಎಂದು ಗಲಾಟೆ ಮಾಡಿಕೊಂಡರು ಎಂದು ತಿಳಿದುಬಂದಿದೆ.
ದುಡ್ಡಿನ ಆಸೆಗೆ ತಪ್ಪು ಮಾಡಿಬಿಟ್ಟೆ ಎಂದು ಜೈಲು ಸಿಬ್ಬಂದಿ ಬಳಿ ಅಳಲು ತೋಡಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅಲ್ಲದೆ ಏರು ದನಿಯಲ್ಲಿ ನಾಲ್ವರು ಆರೋಪಿಗಳು ಒಬ್ಬರಿಗೊಬ್ಬರು ಬೈದಾಡಿಕೊಂಡರು ಎನ್ನಲಾಗಿದೆ.
ಈ ಪ್ರಕರಣದಲ್ಲಿ ಆರೋಪಿಯಾಗಿರುವ ನಟ ದರ್ಶನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.