ಸಾಮಾಜಿಕ ಚಿಂತಕ ಹಾಗೂ ಜನಪರ ಹೋರಾಟಗಾರ ಕೆ.ದೊರೈರಾಜು ಅವರಿಗೆ ತುಮಕೂರು ವಿಶ್ವವಿದ್ಯಾಲಯದ ಕಲಾ ಕಾಲೇಜು ವತಿಯಿಂದ ವಾರ್ಷಿಕ ‘ಕಲಾಸಿರಿ-2024’ ಪ್ರಶಸ್ತಿ ನೀಡಿ, ಸನ್ಮಾನಿಸಿ, ಗೌರವಿಸಲಾಯಿತು.
ತರಗತಿಗಳಲ್ಲಿ ತಂತ್ರಜ್ಞಾನದ ಮೇಲಿನ ಅವಲಂಬನೆ ಪುಸ್ತಕಕ್ಕಿಂತಲೂ ಹೆಚ್ಚಾಗಿರುವುದು ವಿಪರ್ಯಾಸ. ವಿದ್ಯಾರ್ಥಿಗಳಲ್ಲಿ ಚರ್ಚಾ ವಲಯವನ್ನು ವೃದ್ಧಿಸಿ, ಶಿಕ್ಷಣ ಸಮಾನತೆಯನ್ನು ಕಲಿಸಬೇಕಾದ ತರಗತಿಗಳು ಮನುಷ್ಯತ್ವವಿಲ್ಲದ ಮಾನವರನ್ನು ಸೃಷ್ಟಿಸುತ್ತಿರುವುದು ಈ ಯುಗದ ದುರಂತ ಎಂದು ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಕಳವಳ ವ್ಯಕ್ತಪಡಿಸಿದರು.
ತುಮಕೂರು ವಿಶ್ವವಿದ್ಯಾನಿಲಯ ಕಲಾ ಕಾಲೇಜು ಗುರುವಾರ ಆಯೋಜಿಸಿದ್ದ ಕಲಾಸಿರಿ-2024 ಕಾಲೇಜು ವಾರ್ಷಿಕೋತ್ಸವ ಹಾಗೂ ಜಾನಪದ ಕಲಾಮೇಳ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಂತ್ರಜ್ಞಾನದ ಬಳಕೆ ಹೆಚ್ಚಾದಂತೆ ಮನುಷ್ಯ ಸಂಬಂಧಗಳು ಕುಸಿಯುತ್ತಿವೆ. ಹಾಗೆಯೇ ಶಿಕ್ಷಕರು-ವಿದ್ಯಾರ್ಥಿಗಳ ನಡುವಿನ ಸಂಬಂಧ ಕುಸಿದಿದೆ. ಮಾನವಿಕ ಮುಖಗಳನ್ನು ತಿಳಿಯಬೇಕಾದ ಯುವಪೀಳಿಗೆ ಲಾಭಕೋರ ಮನಸ್ಥಿತಿಯಿಂದ ಮೌಲ್ಯಗಳನ್ನು ಪಲ್ಲಟಗೊಳಿಸಿ ವಿಕೃತಿ ಮೆರೆಯುತ್ತಿದೆ ಎಂದು ವಿಷಾದಿಸಿದರು.
ಯಂತ್ರಕ್ಕೆ ಮನುಷ್ಯತ್ವವನ್ನು ಕೊಡುವ ಶಿಕ್ಷಣ ನಮ್ಮದಾಗಬೇಕು. ಮಾನವನನ್ನು ಯಂತ್ರವಾಗಿ ಮಾಡುವ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಭವಿಷ್ಯ ನಾಶವಾಗುತ್ತಿದೆ. ಭಾರತದಲ್ಲಿ ಮಾನವಿಕ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆ ಕೇವಲ ಶೇ.5 ರಷ್ಟಿದೆ. ನಮ್ಮ ಶಿಕ್ಷಣ ಎಲ್ಲಿಯವರೆಗೆ ಜ್ಞಾನಮುಖಿ, ಉದ್ಯೋಗಮುಖಿ ಎಂಬುದನ್ನು ತಿಳಿಯಬೇಕು. ಶೈಕ್ಷಣಿಕ ವಿಭಾಗೀಕರಣವನ್ನು ವಿದ್ಯಾರ್ಥಿಗಳಲ್ಲಿ ಕಲಿಸಬೇಕು ಎಂದರು.
ವಿವೇಕರಹಿತ ಶಿಕ್ಷಣ ಪ್ರಯೋಗಗಳಾದ ರಾಷ್ಟ್ರೀಯ ಶಿಕ್ಷಣ ನೀತಿ, ರಾಜ್ಯ ಶಿಕ್ಷಣ ನೀತಿಗಳು ವಿದ್ಯಾರ್ಥಿಗಳನ್ನು ಪ್ರಯೋಗದ ವಸ್ತುಗಳಾಗಿ ಬಳಸಿಕೊಳ್ಳುತ್ತಿವೆ. ಶೈಕ್ಷಣಿಕ ಅಸಮಾನತೆಯನ್ನು ನೀಗುವ ಶಿಕ್ಷಣ ನೀತಿ ತರಲು ಯಾವ ಸರ್ಕಾರದಿಂದಲೂ ಸಾಧ್ಯವಾಗಲಿಲ್ಲ. ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಕಲಿಸಬೇಕೆಂಬ ನಿಯಮ ಮಾಡಿದರೆ ನ್ಯಾಯಾಲಯಗಳ ಮೆಟ್ಟಿಲೇರುವ ಶಾಲಾ ಕಾಲೇಜುಗಳಿಗೆ ಮನ್ನಣೆ ಕೊಡುವ ದುಷ್ಟ ಮನಸ್ಥಿತಿಯವರು ಸೃಷ್ಟಿಯಾಗಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಜಾತಿ, ಧರ್ಮ, ಲಿಂಗ, ವರ್ಗ, ವರ್ಣಗಳ ತಾರತಮ್ಯವನ್ನು ಹೋಗಲಾಡಿಸಿ ಆತ್ಮಸ್ಥೈರ್ಯ ಕೊಡುವ, ಸೌಹಾರ್ದತೆ ಸಾರುವ, ಶೈಕ್ಷಣಿಕ ಬಿಕ್ಕಟ್ಟುಗಳನ್ನು ಬಗೆಹರಿಸುವ ಶಿಕ್ಷಣ ವ್ಯವಸ್ಥೆ ನಮ್ಮದಾಗಬೇಕು. ವಿದ್ಯಾವಂತರು ಹೆಚ್ಚಾದಂತೆ ಜಾತಿವಾದಿಗಳು ಬೆಳೆಯುತ್ತಿದ್ದಾರೆ. ಸಮಾನತೆಯ ಮುಖವಾಡಗಳನ್ನು ಧರಿಸಿ ಅಸಮಾನತೆಯ ನೆರಳಡಿ ಬದುಕುತ್ತಿರುವ ಅವಿವೇಕಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು, ಶಿಸ್ತುಬದ್ಧ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಗಳಿಂದ ಹೊರಬರಬೇಕು. ಸ್ಥಾನದಿಂದ ಬರುವ ಗೌರವ ಅಲ್ಪಾವಧಿ. ವ್ಯಕ್ತಿತ್ವದಿಂದ ಬರುವ ಗೌರವ, ಸಿಗುವ ಮನ್ನಣೆ ಶಾಶ್ವತ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ. ಬಿ. ಕರಿಯಣ್ಣ, ಚಲನಚಿತ್ರ ನಟ ಕುಮಾರ್ಗೋವಿಂದ್, ವಿವಿ ಕಲಾ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಯೋಜಕ ಡಾ.ರವಿ, ಕಲಾಸಿರಿ ವಾರ್ಷಿಕೋತ್ಸವದ ಸಮಿತಿಯ ಡಾ. ಗುಂಡೇಗೌಡ, ಡಾ.ಶಿವಣ್ಣ ಬೆಳವಾಡಿ, ಡಾ.ಆರ್.ಸುದೀಪ್ಕುಮಾರ್ ಹಾಜರಿದ್ದರು.