Monday, September 16, 2024
Google search engine
Homeಮುಖಪುಟಕಾನೂನು ಭಯದಿಂದ ಸಮಾನವಾಗಿ ಕಾಣುವ ಮೇಲ್ವರ್ಗ-ನಿಜಗುಣಾನಂದ ಸ್ವಾಮೀಜಿ

ಕಾನೂನು ಭಯದಿಂದ ಸಮಾನವಾಗಿ ಕಾಣುವ ಮೇಲ್ವರ್ಗ-ನಿಜಗುಣಾನಂದ ಸ್ವಾಮೀಜಿ

ಮೇಲ್ವರ್ಗ ಎಂದು ಕರೆಯಿಸಿಕೊಳ್ಳುವ ಜನರು ತಳ ಸಮುದಾಯಗಳ ಜನರನ್ನು ಸಾರ್ವಜನಿಕ ಸ್ಥಳಗಳಲ್ಲಿ ಸಮಾನವಾಗಿ ಕಾಣುತ್ತಿದ್ದರೆ, ಅದು ಕಾನೂನಿನ ಭಯದಿಂದಲೇ ಹೊರತು ಹೃದಯ ಬದಲಾವಣೆಯಿಂದಲ್ಲ ಎಂದು ನಿಷ್ಕಲ ಮಠದ ನಿಜಗುಣಾನಂದ ಸ್ವಾಮೀಜಿ ತಿಳಿಸಿದ್ದಾರೆ.

ತುಮಕೂರು ನಗರದ ಕೇಂದ್ರ ಗ್ರಂಥಾಲಯದ ಅಡಿಟೋರಿಯಂನಲ್ಲಿ ಜಿಲ್ಲಾ ರೇಷ್ಮೆ ಬೆಳೆಗಾರರ ಕ್ಷೇಮಾಭಿವೃದ್ದಿ ಸಂಘ, ತುಮಕೂರು ಜಿಲ್ಲೆ, ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ,ಎಸ್ಟಿ ನೌಕರರ ಸಮನ್ವಯ ಸಮಿತಿ ಹಾಗೂ ಡಾ.ವೈ.ಕೆ.ಬಾಲಕೃಷ್ಣಪ್ಪ ಹಿತೈಷಿಗಳ ಸಂಘದ ವತಿಯಿಂದ ಆಯೋಜಿಸಿದ್ದ ರೇಷ್ಮೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಅಸ್ಪೃಷ್ಯತೆ ಎಂಬುದು ಬೇರೆ ಬೇರೆ ರೀತಿಯಲ್ಲಿ ಇಂದಿಗೂ ಜನರನ್ನು ಕಾಡುತ್ತಿದೆ ಎಂದರು.

ಕಾಣುವ ಮನುಷ್ಯರನ್ನು ದ್ವೇಷಿಸುವ, ದೂಷಿಸುವ ಜನ, ಕಾಣದ ದೇವರನ್ನು ಪ್ರೀತಿಸಲು, ಪೂಜಿಸಲು ಕ್ಯೂನಲ್ಲಿ ನಿಲ್ಲುತ್ತಾರೆ. ದಲಿತರು ಎಂದು ಸಮಾಜದಲ್ಲಿ ಇತರೆ ವರ್ಗಗಳಿಗೆ ಸರಿಸಮನಾಗಿ ಗೌರವಾಧರಗಳನ್ನು ಪಡೆಯುತ್ತಿದ್ದರೆ, ಅದು ಯಾವುದೇ ದೇವರು, ಧರ್ಮ, ಸ್ವಾಮಿಗಳ,ಪೂಜೆ ಪುನಸ್ಕಾರಗಳಿಂದಲ್ಲ, ತಾನು ಗಳಿಸಿದ ವಿದ್ಯೆ ಹಾಗೂ ತಾನು ನಂಬಿರುವ ತೋಳ್ಬಲದಿಂದ ಮಾತ್ರ. ದೇವರು ಏನನ್ನು ನಿರ್ಮಾಣ ಮಾಡಿಲ್ಲ. ಎಲ್ಲವೂ ಮನುಷ್ಯನಿಂದ ನಿರ್ಮಾಣವಾದಂತವು. ದಲಿತ ವಿದ್ಯಾವಂತರು ಈ ಸತ್ಯ ಅರಿತು, ಕೆಲಸ ಮಾಡಿದಾಗ ಸಮದಾಯದ ಅಭಿವೃದ್ದಿ ಸಾಧ್ಯ ಎಂದು ತಿಳಿಸಿದರು.

ರೇಷ್ಮೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣಪ್ಪ ಕುರಿತ “ಕುಸುರಿ” ಅಭಿನಂದನಾ ಗ್ರಂಥ ಬಿಡುಗಡೆ ಮಾಡಿ ಮಾತನಾಡಿದ ಉಡುಪಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ, ರಾಜ್ಯದಲ್ಲಿ ಬಡವಾಗಿರುವ ಯಾವುದಾದರೂ ಇಲಾಖೆ ಇದ್ದರೆ ಅದು ರೇಷ್ಮೆ ಇಲಾಖೆ, ಅಂತಹ ಇಲಾಖೆಯಲ್ಲಿಯೇ ಅತ್ಯಂತ ಕ್ರಿಯಾಶೀಲವಾಗಿ, ಸರ್ಕಾರ ನೀಡಿದ ಗುರಿಗಳನ್ನು ಅಕ್ಷರಶಃ ಮುಟ್ಟಿ, ಸಾವಿರಾರು ರೈತರಿಗೆ ಬದುಕು ಕಟ್ಟಿಕೊಳ್ಳಲು ನೆರವಾಗಿರುವ ಅಧಿಕಾರಿ ಡಾ.ವೈ.ಕೆ.ಬಾಲಕೃಷ್ಣಪ್ಪ, ಓರ್ವ ಅಧಿಕಾರಿ ತನ್ನ ಅಧಿಕಾರದ ಆಚೆಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡರೆ ಹೇಗೆ ಜನಮಾನಸದಲ್ಲಿ ಉಳಿಯಬಲ್ಲರು ಎಂಬುದಕ್ಕೆ ಇಂದಿನ ಕಾರ್ಯಕ್ರಮವೇ ಸಾಕ್ಷಿ. ಸಮಾಜ ಇವರ ಸೇವೆಯನ್ನು ಗುರುತಿಸಿ, ಅಭಿನಂದಿಸುವ ಮೂಲಕ ಅವರು ಮತ್ತಷ್ಟು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಕೊಳ್ಳಲು ಸಹಕಾರಿಯಾಗಲಿದೆ ಎಂದರು.

ರಾಜ್ಯಸಭಾ ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ ಮಾತನಾಡಿ, ಸರ್ಕಾರಿ ಅಧಿಕಾರಿಗಳು ಒಂದಿಲ್ಲೊಂದು ಹಗರಣಗಳಿಗೆ ಸಿಲುಕಿ ನಿವೃತ್ತಿ ಜೀವನವನ್ನು ಸರಿಯಾಗಿ ಅನುಭವಿಸಲಾರದೆ ಜೈಲಿನ ಭಯದಲ್ಲಿರುವ ಈ ಕಾಲಘಟ್ಟದಲ್ಲಿ ಡಾ.ವೈ.ಕೆ.ಬಾಲಕೃಷ್ಣಪ್ಪ ಅವಕಾಶಗಳಿದ್ದಾಗ್ಯೂ ಪ್ರಾಮಾಣಿಕರಾಗಿ ಉಳಿದುಕೊಂಡಿದ್ದಾರೆ ಎಂದು ಹೇಳಿದರು.

ಡಾ.ವೈ.ಕೆ.ಬಾಲಕೃಷ್ಣಪ್ಪ ಕುರಿತು ಸಾಕ್ಷಚಿತ್ರವನ್ನು ಬಿಡುಗಡೆ ಮಾಡಿ ಮಾತನಾಡಿದ ಸಿಇಓ ಜಿ.ಪ್ರಭು, ಅಭಿನಂದನೆ ಸ್ವೀಕರಿಸಿ ರೇಷ್ಮೆ ಇಲಾಖೆಯ ನಿವೃತ್ತ ಉಪನಿರ್ದೇಶಕ ಡಾ.ವೈ.ಕೆ.ಬಾಲಕೃಷ್ಣ, ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ಮಾತನಾಡಿದರು.

ಅಭಿನಂದನಾ ಗ್ರಂಥ ಕುಸುರಿ ಕುರಿತು ತುಮಕೂರು ವಿವಿ ಕನ್ನಡ ಪ್ರಾಧ್ಯಾಪಕ ಡಾ.ನಾಗಭೂಷಣ್ ಬಗ್ಗನಡು ಮಾತನಾಡಿದರು. ವೇದಿಕೆಯಲ್ಲಿ ಪ್ರಗತಿಪರ ಚಿಂತಕ ಕೆ.ದೊರೆರಾಜು, ಡಾ.ಓ.ನಾಗರಾಜು, ತುಮಕೂರು ಜಿಲ್ಲಾ ರೇಷ್ಮೆ ಬೆಳೆಗಾರರ ಸಂಘದ ಗೌರವಾಧ್ಯಕ್ಷ್ಷ ಎಸ್.ವಿ.ಸ್ವಾಮಿ, ಜಿಲ್ಲಾಧ್ಯಕ್ಷ ಶಿವಾನಂದಯ್ಯ,ರೇಷ್ಮೆ ಮಂಡಳಿ ನಿವೃತ್ತ ವಿಜ್ಞಾನಿ ಡಾ.ಹೆಚ್.ಕೆ.ಬಸವರಾಜ್, ಪತ್ರಕರ್ತ ಎಸ್.ನಾಗಣ್ಣ, ರೈತಮುಖಂಡರಾದ ಅನುಸೂಯಮ್ಮ, ಚೇತನಾ ವೈ.ಕೆ.ಬಾಲಕೃಷ್ಣಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ನರಸಿಂಹರಾಜು, ಹಿರಿಯ ದಲಿತ ಮುಖಂಡ ನರಸೀಯಪ್ಪ, ಚರಕ ಅಸ್ಪತ್ರೆಯ ಡಾ.ಬಸವರಾಜು, ಪ್ರೊ.ಡಾಮಿನಿಕ್ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular