Sunday, September 8, 2024
Google search engine
Homeಮುಖಪುಟಗುತ್ತಿಗೆ ಆಧಾರದಲ್ಲಿ ಪ್ರಾಂಶುಪಾಲರ ನೇಮಕ -ಡಿವೈಎಫ್ ಐ ಖಂಡನೆ

ಗುತ್ತಿಗೆ ಆಧಾರದಲ್ಲಿ ಪ್ರಾಂಶುಪಾಲರ ನೇಮಕ -ಡಿವೈಎಫ್ ಐ ಖಂಡನೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇದ್ದ 300 ಪ್ರಾಂಶುಪಾಲರ ಹುದ್ದೆಗಳ ನೇರ ಭರ್ತಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಲಿಖಿತ ಪರೀಕ್ಷೆಯ ಮೂಲಕ ಐದು ವರ್ಷಗಳ ಅವಧಿಗೆ ಮಾತ್ರ ಗುತ್ತಿಗೆಯಾಧಾರದಲ್ಲಿ ನೇಮಕ ಮಾಡಿಕೊಳ್ಳುತ್ತಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ ಡಿವೈಎಫ್‌ಐ ತುಮಕೂರು ಜಿಲ್ಲಾ ಸಮಿತಿಯ ಸಂಚಾಲಕರಾದ ಮಂಜುನಾಥ್, ಈ.ಶಿವಣ್ಣ, ಎಂ.ಆರ್್. ನಾಗರಾಜು, ಶರತ್ ಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.

ರಾಜ್ಯದ 434 ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 400 ಪ್ರಾಂಶುಪಾಲರ ಪೈಕಿ 310 ಸ್ಥಾನಗಳಿಗೆ ಗುತ್ತಿಗೆ ಪದ್ದತಿಯಡಿ ನೇಮಕ ಮಾಡಲು ಹೊರಟಿರುವ ಸರ್ಕಾರದ ಕ್ರಮವನ್ನು ಡಿವೈಎಫ್‌ಐ ಬಲವಾಗಿ ಖಂಡಿಸುತ್ತದೆ. ಗುತ್ತಿಗೆ ಪದ್ಧತಿ ಬದಲಿಸಿ ಖಾಲಿಯಿರುವ 400 ಪ್ರಾಂಶುಪಾಲರ ಹುದ್ದೆಗಳನ್ನು ಖಾಯಂ ಆಗಿ ನೇಮಖಾತಿ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಕೇವಲ 5 ವರ್ಷಗಳ ಅವಧಿಗೆ ಆಯ್ಕೆ ಮಾಡಿಕೊಳ್ಳುವ ಸರ್ಕಾರ ಈ ಅವಧಿ ನಂತರ ಅವರನ್ನು ಸೇವೆಯಿಂದ ಬಿಡುಗಡೆಗೊಳಿಸಿದರೆ ಅತಂತ್ರರಾಗುವ ಅವರು ಏನು ಕೆಲಸ ಮಾಡಬೇಕು ? ಇದರಲ್ಲಿ ಸರ್ಕಾರಕ್ಕೆ ಹೊಣೆಗಾರಿಕೆ ಇಲ್ಲವೇ? ಶಿಕ್ಷಣ ಕ್ಷೇತ್ರದಲ್ಲಿ ಈ ರೀತಿ ಬಳಸಿ ಬಿಸಾಡುವ ಜೀತ ಪದ್ಧತಿ ಸ್ವರೂಪದ ಕೆಲಸವನ್ನು ರಾಜ್ಯ ಸರ್ಕಾರವೇ ಕೂಡಲೇ ರದ್ದುಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಇಂಜಿನಿಯರಿಂಗ್ ಸೇರಿದಂತೆ ಇತರೆ ಪದವಿ ಕಾಲೇಜುಗಳಲ್ಲಿ 15 ವರ್ಷಗಳ ಬೋಧನಾನುಭವ ಹೊಂದಿರುವವರಿಗೆ ನೇಮಖಾತಿಯಲ್ಲಿ ಅವಕಾಶವಿದೆ. ಇಂಜಿನಿಯರಿಂಗ್ ಕಾಲೇಜು ಮತ್ತು ಇತರೆ ಕಾಲೇಜುಗಳಲ್ಲಿ ಕೆಲಸ ಮಾಡಿದವರು ಆಯ್ಕೆಯಾದರೆ ಪದವಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲು ಹೇಗೆ ಸಾಧ್ಯ ? ತಾತ್ಕಾಲಿಕವಾಗಿ ಶಿಕ್ಷಣ ಕ್ಷೇತ್ರದಲ್ಲಿ ಆಯ್ಕೆ ಮಾಡುವುದರಿಂದ ಆಯ್ಕೆಯಾದವರಿಗೆ ಸೇವಾ ಭದ್ರತೆ ಖಾತರಿಯೂ ಇಲ್ಲ. ಅಲ್ಲದೇ ವಿದ್ಯಾರ್ಥಿಗಳ ಪಾಠ ಪ್ರವಚನಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾರೆ.

ಸರ್ಕಾರ ನಿಗದಿಗೊಳಿಸಿರುವ 15 ವರ್ಷಗಳ ಕಾಲ ಸೇವಾನುಭವವಿಲ್ಲದವರೂ ಹಲವು ದುರ್ಮಾರ್ಗದ ಪ್ರಭಾವ ಬಳಸಿ ಖಾಸಗೀ ಶಿಕ್ಷಣ ಸಂಸ್ಥೆಗಳಿಂದ 158 ವರ್ಷಗಳ ಸೇವಾ ದೃಢೀಕರಣ ಪಡೆದಿರುವ ವದಂತಿಗಳಿವೆ. ಸರ್ಕಾರದ ಉನ್ನತ ಅಧಿಕಾರಿಗಳ ಕುಟುಂಬಸ್ಥರೇ ಇಂತಹ ದುಷ್ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆಂಬುದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿ ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಗೊಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಉನ್ನತ ಶಿಕ್ಷಣ ಪಿಎಚ್‌ಡಿ ಪಡೆದು ಕೆಲಸ ಮಾಡಲು ಸಾಮರ್ಥ್ಯವಿರುವ ಲಕ್ಷಾಂತರ ಜನತೆಗೆ ಅವಕಾಶ ನೀಡಬೇಕು. ಸರ್ಕಾರ ಪರೀಕ್ಷಾ ಪ್ರಾಧಿಕಾರದ ಮೂಲಕ ೫ ವರ್ಷದ ಅವಧಿಗೆ ಗುತ್ತಿಗೆಯಾಧಾರದಲ್ಲಿ ಪ್ರಾಂಶುಪಾಲರ ನೇಮಕ ಮಾಡಲು ಹೊರಟಿರುವುದನ್ನು ಕೂಡಲೇ ರದ್ದುಪಡಿಸಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಖಾಯಂ ನೇಮಕ ಮಾಡಿಕೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular