ಎಸ್. ಪಿ. ಮುದ್ದಹನುಮೇಗೌಡರಿಗೆ ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಕೊಟ್ಟಿರುವುದರ ಹಿಂದೆ ಅವರಿಗಿರುವ ಎಲ್ಲಾ ಪಕ್ಷದ ಅನುಭವವೇ ಮಾನದಂಡವಾಗಿರಬೇಕು ಎಂದು ಕಾಂಗ್ರೆಸ್ ಮಾಜಿ ವಕ್ತಾರ ಮುರಳೀಧರ ಹಾಲಪ್ಪ ವ್ಯಂಗ್ಯವಾಡಿದ್ದಾರೆ.
ತುಮಕೂರಿನಲ್ಲಿ ಬೆಂಬಲಿಗರೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿರುವ ಮುರಳೀಧರ ಹಾಲಪ್ಪ ತಮಗೆ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿರುವ ಕುರಿತಂತೆ ಮಾಧ್ಯಮಗಳಿಗೆ ಮೇಲಿನಂತೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ವಯಸ್ಸು, ಅನುಭವದಲ್ಲಿ ಅವರಿಗಿಂತ ಕಿರಿಯ. ಬೇರೆ ಬೇರೆ ಪಕ್ಷದಲ್ಲಿ ಗೌಡರು ಅನುಭವ ಪಡೆದಿರುವುದರಿಂದ ಅಲ್ಲಿನ ವ್ಯವಸ್ಥೆಗಳ ಅರಿವಿದ್ದು, ಚುನಾವಣೆಯಲ್ಲಿ ಅನುಕೂಲವಾಗಬಹುದೆಂದು ಅವರಿಗೆ ಟಿಕೆಟ್ ಕೊಟ್ಟಿರಬಹುದು ಎಂದು ಲೇವಡಿ ಮಾಡಿದ್ದಾರೆ.
ನನಗೆ ಪಕ್ಷ ಹಿಂದೆ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ, ಕೆಪಿಸಿಸಿ ವಕ್ತಾರ, ಪ್ರಧಾನ ಕಾರ್ಯದರ್ಶಿ, ಬೂತ್ ಮಟ್ಟದ ಸಮಿತಿ ಉಸ್ತುವಾರಿ ಹೀಗೆ ಹಲವು ಜವಾಬ್ದಾರಿಗಳನ್ನು ನೀಡಿತ್ತು. ಈ ಜವಾಬ್ದಾರಿಯನ್ನು ನಾಯಕರ ನಿರೀಕ್ಷೆಯಂತೆಯೇ ಪ್ರಾಮಾಣಿಕವಾಗಿ ನಿರ್ವಹಿಸಿದ್ದೇನೆ ಎಂದು ಹೇಳಿದ್ದಾರೆ.
ಒಂದು ಹಂತದಲ್ಲಿ ಲೋಕಸಭೆ ಚುನಾವಣೆಗೆ ಸಿದ್ಧರಾಗುವಂತೆ ಪಕ್ಷದ ನಾಯಕರು ಸೂಚಿಸಿದ್ದ ಮೇರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಕಾರ್ಯಕ್ರಮ, ಸಭೆಗಳನ್ನು ಮಾಡಿ ಕಾರ್ಯಕರ್ತರು, ಮತದಾರರನ್ನು ಸಂಘಟಿಸಿದ್ದೆ. ಈಗ ಟಿಕೆಟ್ ತಪ್ಪಿದೆ. ಆದರೆ ಮಾಡಿದ ಸಂಘಟನೆ ಪಕ್ಷದ ಗೆಲುವಿಗೆ ಪೂರಕವಾಗಲಿದೆ ಎಂದರು.