ನಿಗಮ ಮಂಡಳಿಗಳಲ್ಲಿ ತುಮಕೂರು ಜಿಲ್ಲೆಯವರಿಗೆ ಆದ್ಯತೆ ನೀಡಬೇಕು. ನಾವು ಹೇಳಿದವರಿಗೆ ನಿಗಮ-ಮಂಡಳಿಯ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ನಾನು ಮತ್ತು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕೇಳಿದ್ದೇವೆ. ಆದರೆ ನಮ್ಮ ಮಾತಿಗೆ ಹೈಕಮಾಂಡ್ ನಾಯಕರು ಗಮನ ಕೊಟ್ಟಿಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಪಕ್ಷದ ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿರುವ ರಾಜಣ್ಣ, ನಿಗಮ ಮಂಡಳಿಗಳಿಗೆ ಅಧ್ಯಕ್ಷರನ್ನಾಗಿ ಯಾರನ್ನಾದರೂ ನೇಮಕ ಮಾಡಲಿ. ಆ ವಿಚಾರವನ್ನು ನಮ್ಮ ಗಮನಕ್ಕೂ ತರಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಪಿಕ್ ಪಾಕೇಟ್ ಮಾಡುವವರು, ಬಡ್ಡಿ ವ್ಯವಹಾರ ನಡೆಸುವವರನ್ನು ನೇಮಕ ಮಾಡಿದರೆ ಹೇಗೆ? ಯಾವನ ಯೋಗ್ಯತೆ ಏನು ಅನ್ನುವುದು ಮತ್ತು ಯಾರಿಗೆ ಕೊಟ್ಟರೆ ಪಕ್ಷಕ್ಕೆ ಅನುಕೂಲ ಆಗುತ್ತದೆ ಎಂಬುದು ಗೊತ್ತಿರುತ್ತದೆ. ಹೀಗಾಗಿ ನಾವು ಹೇಳಿದವರಿಗೆ ಕೊಡಬೇಕು. ಆದನ್ನು ಮಾಡಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೇರೆ ದೇಶದಲ್ಲಿ ಕುಳಿತು ಇಲ್ಲಿ ಹಾಕಿದರೆ ಏನು ಗತಿ? ಪರಿಸ್ಥಿತಿ ಹೀಗಾದರೆ ಪಕ್ಷದ ಕಾರ್ಯಕರ್ತರ ಕಥೆ ಏನು? ಪಕ್ಷ ಬಲಪಡಿಸುವರನ್ನು ಆಯ್ಕೆ ಮಾಡಲು ಕೇಳಿದ್ದೆವು. ಇದೆಲ್ಲವನ್ನೂ ಬಿಟ್ಟು ನೇಮಿಸುವುದಾದರೆ ನೇಮಕ ಮಾಡಲಿ, ಹೊರಗಿನವರನ್ನು ಸೇರಿಸಿದವರಿಗೆ ನಮ್ಮ ಮಾತು ಅರ್ಥ ಆಗುತ್ತದೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾವು ಜನರಿಗೆ ನೀಡಿರುವ ಗ್ಯಾರಂಟಿಗಳಿಂದ ಗೆಲ್ಲುತ್ತೇವೆ ಎನ್ನುವ ಭ್ರಮ ಇದ್ದರೆ ಅದು ದಡ್ಡತನ. ರಾಜಸ್ಥಾನದಲ್ಲಿ ಗ್ಯಾರಂಟಿ ತಂದರೂ ಜನರು ಕಾಂಗ್ರೆಸ್ ಪಕ್ಷಕ್ಕೆ ವೋಟ್ ಹಾಕಿಲ್ಲ ಎಂದು ಹೇಳಿದ್ದಾರೆ.
ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಲಿ
ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮಾಜಿ ಸಂಸದ ಮುದ್ದಹನುಮೇಗೌಡರಿಗೆ ಟಿಕೆಟ್ ನೀಡಬೇಕು. ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಲ್ಲ. ಅವರಿಗೆ ಟಕೆಟ್ ಕೊಟ್ಟರೆ ಗೆಲುವು ಖಚಿತ. ನಾವೇ ಅವರನ್ನು ಗೆಲ್ಲಿಸಿಕೊಂಡು ಬರುತ್ತೇವೆ ಎಂದು ಹೇಳಿದ್ದೇವೆ. ಆದರೆ ಅವರನ್ನು ಪಕ್ಷದ ರಾಜ್ಯಧ್ಯಕ್ಷರು ಸೇರಿಸಿಕೊಳ್ಳುತ್ತಿಲ್ಲ ಎಂದು ಡಿ.ಕೆ.ಶಿವಕುಮಾರ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ನಾವು ಹೇಳಿದವರಿಗೆ ಟಿಕೆಟ್ ಕೊಡುವುದಾದರೆ ಕೊಡಲಿ. ಅದು ಬಿಟ್ಟು ಬೇರೆಯವರಿಗೆ ಟಿಕೆಟ್ ಕೊಟ್ಟರೆ ಅವರೇ ಗೆಲ್ಲಿಸಿಕೊಂಡು ಬರಲಿ ಎಂದು ಸಚಿವ ಕೆ.ಎನ್.ರಾಜಣ್ಣ ಸವಾಲು ಹಾಕಿದ್ದಾರೆ.


