ಅಧಿಕಾರ, ಜಾತಿ, ಐಶ್ವರ್ಯ ಒಂದೇ ಕಡೆ ಕ್ರೂಢಿಕೃತವಾದರೆ ಅಪಾಯ ಹೆಚ್ಚಳವಾಗಲಿದೆ, ಅಸಮಾನತೆ ಹೆಚ್ಚಳವಾಗಲಿದ್ದು, ಶೋಷಿತ ಸಮುದಾಯಗಳು ಬೀದಿಗೆ ಬರುವ ಸಂದರ್ಭ ನಿರ್ಮಾಣವಾಗಲಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ತುಮಕೂರು ನಗರದ ಟಿಎಪಿಎಂಎಸ್ ಆವರಣದಲ್ಲಿ ಕರ್ನಾಟಕ ರಾಜ್ಯ ಎಸ್ ಸಿ, ಎಸ್ ಟಿ ನೌಕರರ ಸಮನ್ವಯ ಸಮಿತಿ, ವತಿಯಿಂದ ಹಮ್ಮಿಕೊಂಡಿದ್ದ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಹಾಗೂ ಸಾಧಕ ಶಿಕ್ಷಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇಶದಲ್ಲಿ ರಾಮನಿಗೆ ಗೌರವ ಸಲ್ಲಬೇಕಾದರೆ ಅಯೋಧ್ಯೆಯಲ್ಲಿ ವಾಲ್ಮೀಕಿ ದೇಗುಲ ನಿರ್ಮಾಣವಾಗಬೇಕಿದೆ. ಈಗ ಬಗ್ಗೆ ಪ್ರಧಾನಿಗೆ ಪತ್ರ ಬರೆದಿದ್ದೇನೆ, ಪ್ರಜಾಪ್ರಭುತ್ವದಲ್ಲಿ ಅಂಬೇಡ್ಕರ್ ಸಂವಿಧಾನದಿಂದ ಯಾರು ಏನು ಬೇಕಾದರೂ ಆಗಬಹುದು, ಅಂಬೇಡ್ಕರ್ ಅನುಯಾಯಿಗಳು ಹಿಂದೂತ್ವದ ಆಚರಣೆಯಲ್ಲಿ ತೊಡಗಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ತಿಳಿಸಿದರು.
ಶೋಷಿತ ಸಮುದಾಯಗಳು ತಮ್ಮ ಇತಿಹಾಸವನ್ನು ತಿಳಿಯದೇ ಹೋದರೆ, ಮಕ್ಕಳಿಗೆ ಪರಿಚಯಿಸದೇ ಹೋದರೆ ಮುಚ್ಚಿಟ್ಟಿರುವ ಸಂಗತಿ ಮರೆಯಾಗುವುದರೊಂದಿಗೆ, ಕಲ್ಪಿತ ಇತಿಹಾಸಗಳೇ ಸತ್ಯವಾಗುತ್ತದೆ, ಅಂತಹ ಕಲ್ಪಿತ ಇತಿಹಾಸದಲ್ಲಿಯೇ ಇಂದಿನ ಯುವ ಸಮೂಹ ಮುಳುಗಿದೆ ಎಂದರು.
ಮುಂದುವರೆದ ಯುರೋಪ್ ರಾಷ್ಟ್ರಗಳಲ್ಲಿಯೂ ಹೆಣ್ಣು ಮಕ್ಕಳಿಗೆ ಇತ್ತೀಚಿನ ದಶಕಗಳಲ್ಲಿ ಮತದಾನದ ಹಕ್ಕು ನೀಡಲಾಗಿದೆ, ಭಾರತದಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ವ್ಯವಸ್ಥೆಯೇ ಇರಲಿಲ್ಲ, ಅಂತಹ ಸಂದರ್ಭದಲ್ಲಿ ಸಾವಿತ್ರಿ ಬಾಯಿ ಫುಲೆ ಸೇವೆ ಅನನ್ಯವಾಗಿದೆ ಎಂದು ಹೇಳಿದರು.
ತಳಮಟ್ಟದಿಂದಲೇ ಸಾವಿತ್ರಿ ಬಾಯಿ ಫುಲೆ ಸೇರಿದಂತೆ ಮಹನೀಯರ ವಿಚಾರಧಾರೆಗಳನ್ನು ತಲುಪಿಸಬೇಕಿದೆ, ಶಾಲೆಗಳಿಗೆ ಮಕ್ಕಳ ಹಾಜರಾತಿ ಕಡ್ಡಾಯಗೊಳಿಸಲು ಶಿಕ್ಷಕರು ಶ್ರಮಿಸಬೇಕಿದೆ, ಮಕ್ಕಳಿಗೆ ಉತ್ತಮ ಭವಿಷ್ಯ ಕಲ್ಪಿಸಿದರೆ ಶಿಕ್ಷಕರೇ ಮಕ್ಕಳಿಗೆ ದೇವರಾಗುತ್ತಾರೆ, ಯಾವ ಮಗುವು ಶಿಕ್ಷಣದಿಂದ ವಂಚಿತವಾಗಬಾರದು, ವಿದ್ಯೆಗೆ ಹೆಚ್ಚಿನ ಮಹತ್ವ ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು, ಆಗ ಮಾತ್ರ ಬಡತನ, ಜಾತಿ ದೂರವಾಗಲಿದೆ ಎಂದರು.
ಉತ್ತರ ಭಾರತಕ್ಕೆ ಹೋಲಿಕೆ ಮಾಡಿದರೆ ದಕ್ಷಿಣ ಭಾರತದಲ್ಲಿ ಅಸ್ಪೃಶ್ಯತೆ ಕಡಿಮೆ ಇದೆ, ಅಸಹಾಯಕ ಧ್ವನಿ ಇಲ್ಲದ ಸಮುದಾಯಗಳಿಗೆ ಧ್ವನಿ ನೀಡುವ ಕೆಲಸವನ್ನು ಸಂಘಟನೆಗಳು ಮಾಡಬೇಕು. ಆಗ ಮಾತ್ರ ಶೋಷಿತ, ತಳಸಮುದಾಯಗಳು ಅಭಿವೃದ್ಧಿ ಹೊಂದಲು ಸಾಧ್ಯ, ಈ ನಿಟ್ಟಿನಲ್ಲಿ ಎಸ್ಸಿ,ಎಸ್ಟಿ ನೌಕರರ ಸಂಘಟನೆ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಕರ್ನಾಟಕ ರಾಜ್ಯ ಸರ್ಕಾರಿ ಎಸ್ಸಿ, ಎಸ್ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ.ಶಿವಶಂಕರ್ ಮಾತನಾಡಿ, ತಳ ಸಮುದಾಯಗಳ ಒಳ ಜಾತಿಗಳಿಂದ ಹೊರಬರಬೇಕು, ಸಂವಿಧಾನದ ಅಡಿಯಲ್ಲಿ ಒಂದಾಗುವ ಮೂಲಕ ತಳ ಸಮುದಾಯಗಳು ಅಧಿಕಾರವನ್ನು ಕಸಿಯುವಂತಾಗಲು, ಅಂಬೇಡ್ಕರ್ ಅವರದ ಸಂವಿಧಾನದಿಂದ ಸೌಲಭ್ಯ ಪಡೆದಿರುವವರು ಮುಂದಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪನ್ಯಾಸಕಿ ಡಾ.ಅಶ್ವಿನಿ, ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಕೆಂಪಸಿದ್ದಯ್ಯ, ಮೋಹನ್ಕುಮಾರ್, ರೇಷ್ಮೆ ಹೆಚ್ಚುವರಿ ನಿರ್ದೇಶಕ ವೈ.ಟಿ.ತಿಮ್ಮಯ್ಯ, ಜಿ.ಪಂ.ಸಿಎಒ ನರಸಿಂಹಮೂರ್ತಿ, ಬಿಇಒ ಅಶ್ವತ್ಥ ನಾರಾಯಣ್, ಹನುಮಂತರಾಯಪ್ಪ, ಆರ್ಎಫ್ಒ ಸುರೇಶ್, ಹನುಮಂತರಾಜು, ಮಂಜಣ್ಣ, ಪ್ರೊ.ಗಂಗಾಧರ್, ಕೋಟೆಕಲ್ಲಯ್ಯ, ಯುವರಾಜು, ಚಿಕ್ಕಣ್ಣ ಇತರರು ಇದ್ದರು.