ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ಸಾರ ಸಗಟಾಗಿ ತಿರಸ್ಕರಿಸಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಐದು ರಾಜ್ಯಗಳ ಚುನಾವಣೆಯ ಫಲಿತಾಂಶ ಐರನ್ ಲೆಗ್ ಎಂದು ಪ್ರಧಾನಿಯವರನ್ನು ಗೇಲಿ ಮಾಡುತಿದ್ದ ಕಾಂಗ್ರೆಸ್ ಮುಖಂಡರಿಗೆ ಸರಿಯಾದ ಉತ್ತರ ನೀಡಿದೆ ಎಂದು ತಿಳಿಸಿದರು.
ಐದು ರಾಜ್ಯಗಳ ಚುನಾವಣೆ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆಯ ಸೆಮಿಫೈನಲ್ ಇದ್ದಂತೆ, ಬಾರಿ ಅಂತರದಿಂದ ನಮಗೆ ಜನತೆ ಬೆಂಬಲ ಸೂಚಿಸಿ, ವಿಜಯ ನಿಮ್ಮದೆ ಎಂಬ ರೀತಿಯಲ್ಲಿ ಭವಿಷ್ಯ ನುಡಿದ್ದಾರೆ. ಹಾಗಾಗಿ 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರಮೋದಿ ಮೂರನೇ ಬಾರಿಗೆ ಪ್ರಧಾನಿಯಾಗುವುದು ಸೂರ್ಯ, ಚಂದ್ರರಿರುವಷ್ಟೇ ಸತ್ಯ ಎಂದರು.
ಕಾಂಗ್ರೆಸ್ನ ಬಿಟ್ಟಿ ಭರವಸೆಗಳಿಗೆ ಮದ್ಯಪ್ರದೇಶ, ಚತ್ತಿಸ್ಗಡ, ರಾಜಸ್ಥಾನದ ಜನತೆ ಮನ್ನಣೆ ನೀಡಿಲ್ಲ. ಸಚಿವರಾಗಿರುವ ಎಂ.ಜೆಡ್. ಜಮೀರ್ ಅಹಮದ್ ಖಾನ್ ತನ್ನದೇ ಘನ ಇತಿಹಾಸವಿರುವ ಕರ್ನಾಟಕದ ಮರ್ಯಾದೆಯನ್ನು ತೆಲಂಗಾಣದಲ್ಲಿ ಮಣ್ಣು ಪಾಲು ಮಾಡಿದ್ದಾರೆ. ಜಮೀರ್ ಅಹಮದ್ಖಾನ್ ಅವರಿಗೆ ಮಂತ್ರಿಗಿರಿ ನೀಡಿರುವುದು ಮಂಗನ ಕೈಯಲ್ಲಿ ಮಾಣಿಕ್ಯ ನೀಡಿದಂತಾಗಿದೆ ಎಂದು ಲೇವಡಿ ಮಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಘೋಷಣೆ ಮಾಡಿದ ಐದು ಗ್ಯಾರಂಟಿಗಳು ಹಳ್ಳ ಹಿಡಿಯುತ್ತಲಿವೆ. ಶಕ್ತಿ ಯೋಜನೆಯ ಉಚಿತ ವಿದ್ಯತ್ಗೆ, ಅನಿಯಮಿತಿ ಲೋಡ್ಶಡ್ಡಿಂಗ್ ಸಾಕ್ಷಿಯಾಗಿದೆ. ಗೃಹ ಲಕ್ಷ್ಮೀ ಶೇ, 40ರಷ್ಟು ಜನರಿಗೆ ತಲುಪಿಯೇ ಇಲ್ಲ. ಅನ್ನಭಾಗ್ಯದಲ್ಲಿ ನೀಡುತ್ತಿರುವ ಅಕ್ಕಿ ಕೇಂದ್ರ ಸರಕಾರದ್ದು, ಯುವನಿಧಿ ಇನ್ನೂ ಜಾರಿಗೆ ಬಂದೇ ಇಲ್ಲ. ಹಾಗಾಗಿ ಜನತೆಗೆ ಲೋಕಸಭಾ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ರೇಣುಕಾಚಾರ್ಯ ತಿಳಿಸಿದರು.
ಈ ಸಂದರ್ಭದಲ್ಲಿ ಟಿ.ಆರ್.ಸದಾಶಿವಯ್ಯ, ರಂಗಾನಾಯಕ್, ಯಶಸ್ಸ್, ಅರುಣ್, ಜ.ಜಗದೀಶ್, ಗಂಗೇಶ್, ಪ್ರತಾಪ್, ಚಂಗಾವಿ ರವಿ ಸೇರಿ ಹಲವರು ಇದ್ದರು.


