ಸಾಲಬಾಧೆ ಮತ್ತು ಪಕ್ಕದ ಮನೆಯವರ ಕಿರುಕುಳದಿಂದ ಮನನೊಂದ ದಂಪತಿಯೊಂದು ತಮ್ಮ ಮೂವರು ಮಕ್ಕಳನ್ನು ಹತ್ಯೆ ಮಾಡಿ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡವರನ್ನು ಗರೀಬ್ ಸಾಬ್, ಪತ್ನಿ ಸುಮಯ್ಯ ದಂಪತಿ ಎಂದು ಗುರುತಿಸಲಾಗಿದ್ದು, ಆತ್ಮಹತ್ಯೆಗೂ ಮೊದಲು ಈ ದಂಪತಿ ತಮ್ಮ ಮಗಳು ಹಜೀನಾ, ಗಂಡು ಮಕ್ಕಳಾದ ಮೊಹ್ಮದ್ ಶಬೀರ್ ಮತ್ತು ಮೊಹಮದ್ ಮುನೀರ್ ಅವರನ್ನು ಕೊಂದು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ತುಮಕೂರಿನ ಸದಾಶಿವನಗರದಲ್ಲಿ ವಾಸವಾಗಿದ್ದು ಗರೀಬ್ ಸಾಬ್ ಮತ್ತು ಸುಮಯ್ಯ ದಂಪತಿ ಕೈತುಂಬ ಸಾಲ ಮಾಡಿಕೊಂಡಿದ್ದರು. ಅಲ್ಲದೆ ಇವರು ವಾಸಿಸುತ್ತಿದ್ದ ಮನೆಯ ಪಕ್ಕದಲ್ಲೇ ವಾಸಿಸುತ್ತಿದ್ದ ಕುಟುಂಬ ಕಿರುಕುಳ ನೀಡುತ್ತಿದ್ದರು ಎಂದು ಹೇಳಲಾಗಿದೆ. ಹೀಗಾಗಿ ನೊಂದ ಗರೀಬ್ ಸಾಬ್ ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ ಎನ್ನಲಾಗಿದೆ.
ಆತ್ಮಹತ್ಯೆಗೂ ಮೊದಲು ಒಂದು ಪತ್ರವನ್ನು ಬರೆದಿಡಲಾಗಿದೆ. ವಿಡಿಯೋವನ್ನೂ ಕೂಡ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಗರೀಬ್ ಸಾಬ್ ಕುಟುಂಬದ ಆತ್ಮಹತ್ಯೆಗೆ ಕಾರಣರಾದವರನ್ನಲಾದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.