ಆತ್ಮಕಥನಗಳು ಯೂರೋಪ್ ಅನ್ನು ಬದಲಾಯಿಸಿದಷ್ಟು ಭಾರತದಲ್ಲಿ ಬದಲಾಯಿಸಲು ಸಾಧ್ಯವಾಗದಿದ್ದಕ್ಕೆ ಕಾರಣ ಕ್ರಿಶ್ಚಿಯನ್ ಮನಸ್ಸುಗಳು ತಾವು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡರೆ, ಹಿಂದೂ ಮನಸ್ಸುಗಳು ಅಷ್ಟರ ಮಟ್ಟಿಗೆ ಪ್ರಾಯಶ್ಚಿತ್ತವನ್ನು ಮಾಡಿಕೊಳ್ಳಲಿಲ್ಲ ಎಂದು ವಿಮರ್ಶಕ ನಟರಾಜ್ ಹುಳಿಯಾರ್ ಅಭಿಪ್ರಾಯಪಟ್ಟರು.
ತುಮಕೂರಿನ ಕನ್ನಡ ಭವನದಲ್ಲಿ ಹಮ್ಮಿಕೊಂಡಿದ್ದ ಹಿರಿಯ ಹೋರಾಟಗಾರ ಕುಂದೂರು ತಿಮ್ಮಣ್ಣ ಅವರ ಅಂಗುಲಿಮಾಲ ಆತ್ಮಕಥನವನ್ನು ಜನಾರ್ಪಣೆಗೊಳಿಸಿ ಅವರು ಮಾತನಾಡಿದರು.
ಹಿಂದೂ ಸಂಘಟನೆಗಳು ದಲಿತ ಸಂಘಟನೆಗಳ ಹೋರಾಟದ ಮಾದರಿಯನ್ನು ತೆಗೆದುಕೊಂಡು ಇಂದು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಮುಂದಾಗಿವೆ. ಹಿಂದೂ ಸಂಘಟನೆಗಳು ದಲಿತ ಚಳವಳಿಯನ್ನು ಚನ್ನಾಗಿ ಆಧ್ಯಯನ ಮಾಡಿದ್ದು ಜನರ ಮನಸ್ಸುಗಳನ್ನ ಬೇರೆ ದಿಕ್ಕಿನತ್ತ ಕೊಂಡೊಯ್ಯುಲು ಬಳಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.

ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಬಿ.ಕೃಷ್ಣಪ್ಪ, ಸಾಹಿತಿ ದೇವನೂರು ಮಹಾದೇವ, ಕೆ.ಬಿ.ಸಿದ್ದಯ್ಯ, ಇವರೆಲ್ಲರು ಅಂಬೇಡ್ಕರ್ ಅವರನ್ನು ಆಳವಾಗಿ ಅಧ್ಯಯನ ಮಾಡಿ ಚಳವಳಿಯನ್ನು ಕಟ್ಟಿದರು. ಆದರೆ ಕುಂದೂರು ತಿಮ್ಮಣ್ಣ ಅವರು ಅಂಬೇಡ್ಕರ್ ಅವರನ್ನು ಹೆಚ್ಚಿನದಾಗಿ ಓದಲಿಲ್ಲ. ಆದರೆ ಅಂಬೇಡ್ಕರ್ ಚಿಂತನೆಗಳನ್ನು ಅಳವಡಿಸಿಕೊಂಡರು. ಇದು ಅಂಬೇಡ್ಕರ್ ಮ್ಯಾಜಿಕ್ ಎಂದರು.
ಕರ್ನಾಟಕದಲ್ಲಿ ಶೇಕಡ 40ರಷ್ಟು ಕೋಮುವಾದವನ್ನು ಓಡಿಸಿರುವುದು ದಲಿತ ಚಳವಳಿ. ಈ ಆತಂಕದ ಕಾಲದಲ್ಲಿ ಚಳವಳಿದಾರರು ಸೇರಿಕೊಳ್ಳುತ್ತಿದ್ದಾರೆ. ಇದು ಶ್ಲಾಘನೀಯ ವಿಚಾರ ಎಂದು ಹೇಳಿದರು.
ಕುಂದೂರು ತಿಮ್ಮಯ್ಯ ಉಕ್ರೇನ್ ಪರವಾಗಿ ನಿಂತಿದ್ದಾರೆ. ಒಂದು ಪ್ರಜಾಪ್ರಭುತ್ವದ ದೇಶದ ಮೇಲೆ ಒಂದು ಕಮ್ಯೂನಿಸ್ಟ್ ರಾಷ್ಟ್ರ ದಾಳಿ ಮಾಡುತ್ತಿದೆ ಅಂದರೆ, ಇದು ಪ್ರಜಾಪ್ರಭುತ್ವಕ್ಕೆ ಬರುತ್ತಿರುವ ಆಪತ್ತು ಎಂದು ತಿಳಿಯಬೇಕಾಗಿದೆ. ಇದನ್ನು ಸುಮ್ಮನೆ ದೂರ ನಿಂತು ನೋಡಿದರೆ ಆಗುವುದಿಲ್ಲ. ಒಂದು ಪ್ರಜಾಪ್ರಭುತ್ವ ದೇಶದ ಗಡಿಯ ಮೇಲೆ ಚೀನಾ ದಾಳಿ ನಡೆಸುವ ಮೂಲಕ ಕೀಟಲೆಗಳನ್ನು ಮಾಡುತ್ತಿರುವುದು ಸಹಿಸಲು ಸಾಧ್ಯವಿಲ್ಲ. ನಾವು ಇವುಗಳನ್ನು ಗಂಭೀರವಾಗಿ ಪರಿಗಣಿಸಬೇಕಿದೆ ಎಂದು ತಿಳಿಸಿದರು.
ಚೀನಾ ಉಕ್ರೇನಿನ ಮೇಲೆ ದಾಳಿ ಮಾಡುವುದು ಎಷ್ಟು ಹೀನವೋ, ಆಮೆರಿಕಾ ವಿಯಟ್ನಾಮ್ ಮೇಲೆ ದಾಳಿ ಮಾಡುವುದು ಅಷ್ಟೇ ಹೀನ. ಹಾಗೆಯೇ ಚೀನಾ ಭಾರತದ ಗಡಿಯ ಮೇಲೆ ದಾಳಿ ನಡೆಸುವುದು ಹೀನ ಕೃತ್ಯವಾಗಿದೆ. ಅದು ಖಂಡನಾರ್ಹ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಈ ದೇಶವನ್ನು ಪ್ರಜಾಪ್ರಭುತ್ವಕ್ಕೆ ಸಜ್ಜುಗೊಳಿಸುತ್ತದೆ. ಆದರೆ ಇದನ್ನು ದಲಿತ ವಿಮೋಚನಾ ಹೋರಾಟ ಎಂದು ಅಷ್ಟು ಸರಳವಾಗಿ ಹೇಳಲು ಬರುವುದಿಲ್ಲ ಎಂದರು.
ಭಾರತದ ದಲಿತ ಚಳವಳಿ ಅಮೆರಿಕಾದ ಬ್ಲಾಕ್ ಪ್ಯಾಂಥರ್ಸ್ ನಂಟ. ದಲಿತ ಪ್ಯಾಂಥರ್ಸ್ ನಮ್ಮ ಕರ್ನಾಟಕ ಚಳವಳಿಗೆ ಸ್ಪೂರ್ತಿಯನ್ನು ನೀಡಿತು. ಅದು ಜಾತ್ಯತೀತತೆಯನ್ನು ಹುಟ್ಟುಹಾಕಿತು. ಇಂತಹ ಸಂದರ್ಭದಲ್ಲಿ ದಲಿತ ಸಂಘಟನೆಗಳು ಪರಸ್ಪರ ಬೈದಾಡಿಕೊಳ್ಳುವುದನ್ನು ನಿಲ್ಲಿಸಬೇಕು. ಹಳೆಯ ಬಟ್ಟೆಯನ್ನು ಬಹಿರಂಗವಾಗಿ ತೊಳೆಯುವ ಕೆಲಸ ಆಗಬಾರದು. ಇದರಿಂದ ಏನೂ ಪ್ರಯೋಜನವಿಲ್ಲ ಎಂದು ಸಲಹೆ ನೀಡಿದರು.
ಇಂಡಿಯಾದೊಳಗೆ ಜಾತಿ ಅಸ್ಮಿತೆಯನ್ನು ಎಲ್ಲರೂ ಗುರುತಿಸಿಕೊಳ್ಳುತ್ತಿದ್ದಾರೆ. ಬ್ರಾಹ್ಮಣರಿಂದ ಹಿಡಿದು ಕೆಳಜಾತಿಗಳು ಇದೇ ರೀತಿ ಗುರುತಿಸಿಕೊಳ್ಳುತ್ತಿವೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಹಿಂದೂ ಅಸ್ಮಿತೆ ಮೂಲಭೂತವಾದ ಮತ್ತು ಜಾತಿವಾದವನ್ನು ಕಟ್ಟಿಕೊಟ್ಟಿತು. ಇದರ ಬಗ್ಗೆ ನಾವು ಬಹಳ ಎಚ್ಚರದಿಂದ ಇರಬೇಕು ಎಂದರು.
ಸಮಾರಂಭದಲ್ಲಿ ಜನಪರ ಚಿಂತಕ ಕೆ.ದೊರೈರಾಜ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ, ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ನಿರ್ಮಾಪಕ ಟಿ.ಕೆ.ದಯಾನಂದ್, ಹೋರಾಟಗಾರ ಕುಂದೂರು ತಿಮ್ಮಣ್ಣ, ಗಂಗರಾಜಮ್ಮ ಕೆ.ಬಿ.ಸಿದ್ದಯ್ಯ, ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಇತರರು ಇದ್ದರು.
ಚರಕ ಆಸ್ಪತ್ರೆಯ ಡಾ.ಬಸವರಾಜ್ ಪ್ರಾಸ್ತಾವಿಕ ಮಾತನಾಡಿದರು. ಡ್ಯಾಗೇರಹಳ್ಳಿ ವಿರೂಪಾಕ್ಷ ಸ್ವಾಗತಿಸಿದರು. ಉಪನ್ಯಾಸಕ ಶಿವಣ್ಣ ತಿಮ್ಲಾಪುರ ಕಾರ್ಯಕ್ರಮ ನಿರೂಪಿಸಿದರು.


