ಗೃಹಲಕ್ಷ್ಮಿ ಯೋಜನೆಯ ನೋಂದಣಿ ಸ್ಥಗಿತಗೊಂಡಿದೆ ಎಂಬುದನ್ನು ಕೇಳಿ ನನಗೆ ಆಚ್ಚರಿಯಾಗಿದೆ. ಹೀಗಾಗಿ ಇಲಾಖೆಯ ಕಾರ್ಯದರ್ಶಿ ನಿರ್ದೇಶಕರ ಕರೆದು ಮಾತನಾಡಿದ್ದು ಅಚಾತುರ್ಯದಿಂದ ನಮ್ಮ ಇಲಾಖೆಯಿಂದ ಟ್ವೀಟ್ ಮಾಡಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸಾಮಾಜಿಕ ಜಾಲತಾಣ ನಿರ್ವಹಿಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಜೊತೆಗೆ ಈ ಸಂಬಂಧ ಎಲ್ಲರಿಗೂ ನೋಟೀಸ್ ಜಾರಿ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಗೃಹಲಕ್ಷ್ಮಿ ಯೋಜನೆಗೆ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಟ್ವೀಟ್ ಮಾಡಲಾಗಿತ್ತು. ಈ ಕುರಿತು ಮಾಧ್ಯಮಗಳು ವರದಿ ಮಾಡಿದ ಬಳಿಕ ಆ ಟ್ವೀಟ್ ಅನ್ನು ತೆಗೆದುಹಾಕಲಾಗಿದೆ ಎಂದು ಸಚಿವರ ಹೇಳಿಕೆಯನ್ನು ಉಲ್ಲೇಖಿಸಿ ಈದಿನ.ಕಾಂ ವರದಿ ಮಾಡಿದೆ.
ಗೃಹಲಕ್ಷ್ಮಿ ನಿರಂತರವಾಗಿ ನಡೆಯುವ ಯೋಜನೆ. ನಮ್ಮ ಇಲಾಖೆಯಿಂದ ಈಗಾಗಲೇ ಹಣ ವರ್ಗಾವಣೆ ಮಾಡಲಾಗಿದೆ. ಇನ್ನು ನಾಲ್ಕು ಐದು ದಿನಗಳಲ್ಲಿ ಎಲ್ಲರ ಖಾತೆಗೂ ಹಣ ವರ್ಗಾವಣೆ ಆಗುತ್ತದೆ ಎಂದು ಹೇಳಿದ್ದಾರೆ.
1,8 ಕೋಟಿ ರೂಪಾಯಿ ಅಕೌಂಟ್ ಗೆ ಇಲ್ಲಿಯವರೆಗೆ ಹಣನ ಡಿಬಿಟಿ ಪ್ರೊಸೆಸ್ ಆಗಿದೆ.ಅದರಲ್ಲಿ 63 ಲಕ್ಷ ರೂ ಅಕೌಂಟ್ ಗೆ ಹಣ ತಲುಪಿದೆ. ಬ್ಯಾಂಕ್ ನಿಂದ ಮಾತ್ರ ಹಣ ನಿಧಾನ ಆಗಿದೆ. ನಮ್ಮಿಂದ ಹಣ ಈಗಾಗಲೇ ವರ್ಗಾವಣೆ ಆಗಿದೆ. ಇನ್ನು ನಾಲ್ಕೈದು ದಿನಗಳಲ್ಲಿ 1.28 ಕೋಟಿ ಯಜಮಾನಿಯರಿಗೆ ಹಣ ಹೋಗಲಿದೆ ಎಂದು ತಿಳಿಸಿದ್ದಾರೆ.


