ದಲಿತರ ಬಗ್ಗೆಯಾಗಲಿ ಅಥವಾ ಸಮಾಜದ ಯಾವುದೇ ವರ್ಗದ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ. ಲೋಕಸಭಾ ಚುನಾವಣೆ ನಡೆದರೆ ಬಿಜೆಪಿ ಸೋಲುವುದು ಖಚಿತ, ಬಿಜೆಪಿ ಕರ್ನಾಟಕದಲ್ಲಿ ಒಡೆದ ಮನೆ, ಚುನಾವಣೆ ನಡೆದು 3 ತಿಂಗಳಾದರೂ ವಿರೋಧ ಪಕ್ಷದ, ವಿಧಾನಪರಿಷತ್ ನಾಯಕನಿಲ್ಲ, ವಿಪ್ಗಳನ್ನು ಆಯ್ಕೆ ಮಾಡಿಲ್ಲ. ಇದೆಲ್ಲಾ ನೋಡಿದರೆ ಬಿಜೆಪಿಯಲ್ಲಿ ಏನೂ ಸರಿಯಿಲ್ಲ ಎಂದು ಕಾಂಗ್ರೆಸ್ ಉಪಾಧ್ಯಕ್ಷ ವಿ.ಎಸ್.ಉಗ್ರಪ್ಪ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವಣ್ಣ ಅವರು ಶ್ರೇಣಿಕೃತ ವ್ಯವಸ್ಥೆಯ ವಿರುದ್ದ ದನಿ ಎತ್ತಿದವರು. ವರ್ಗರಹಿತ, ಜಾತಿ ರಹಿತ ಸಮಾಜದ ನಿರ್ಮಾಣಕ್ಕೆ ಲಿಂಗಾಯತ ಧರ್ಮವನ್ನು ಸ್ಥಾಪಿಸಿದವರು. ಆದರೆ ಇಂದು ಭಾರತೀಯ ಜನತಾ ಪಾರ್ಟಿಯವರು ಲಿಂಗಾಯತ ಹಾಗೂ ದಲಿತರ ಬಗ್ಗೆ ಮಾತನಾಡಲು ಪ್ರಾರಂಭ ಮಾಡಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಆರ್.ಎಸ್.ಎಸ್ ನ 2ನೇ ಸರಸಂಚಾಲಕ ಗೋಳವಾಳ್ಕರ್ ಅವರ ಬಂಚ್ ಆಫ್ ಥಾಟ್ಸ್ ಅಲ್ಲಿ ಶ್ರೇಣೀಕೃತ ಸಮಾಜದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಬಿಜೆಪಿಯವರಿಗೂ ಬಸವಣ್ಣನವರ, ದಲಿತರ ವಿಚಾರಧಾರೆಗೂ ಯಾವುದೇ ಸಂಬಂಧವಿಲ್ಲ ತಿಳಿಸಿದ್ದಾರೆ.
ಕಾಂಗ್ರೆಸ್ನಲ್ಲಿ ವೀರಶೈವರಿಗೆ ಸ್ಥಾನಮಾನ ಕೊಟ್ಟಿಲ್ಲ ಎಂದು ಹೇಳುತ್ತಾರೆ. ವಿರೇಂದ್ರ ಪಾಟೀಲರು ನಮ್ಮ ರಾಜ್ಯದ ಗೌರವಾನ್ವಿತ ನಾಯಕರು, ಇಂದಿರಾ ಗಾಂಧಿ ಅವರ ವಿರುದ್ದ ಚಿಕ್ಕಮಗಳೂರಿನಲ್ಲಿ ಸೋತ ನಂತರ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು, ಕೇಂದ್ರದ ಮಂತ್ರಿ ಮಾಡಲಾಯಿತು. ರಾಜ್ಯ ಕಾಂಗ್ರೆಸ್ ಅಧ್ಯಕ್ಷರನ್ನಾಗಿ, ಮುಖ್ಯಮಂತ್ರಿಳನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಬಿಜೆಪಿಗೆ ಉತ್ತರ ನೀಡಿದ್ದಾರೆ.
ದಲಿತರ ವಿಚಾರವಾಗಿ ಬಿಜೆಪಿಯವರು ಸುಳ್ಳು ಹೇಳುತ್ತಾರೆ. ನಮ್ಮ ಹಿರಿಯ ನಾಯಕ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ, ಕೇಂದ್ರ ಸಚಿವರನ್ನಾಗಿ, ವಿರೋಧ ಪಕ್ಷದ ನಾಯಕನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಮಹಾರಾಷ್ಟ್ರದಲ್ಲಿ, ಪಂಜಾಬಿನಲ್ಲಿ ದಲಿತರನ್ನು ಮುಖ್ಯಮಂತ್ರಿಗಳಾನ್ನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ ಎಂದು ಹೇಳಿದ್ದಾರೆ.
ದೇಶದಲ್ಲಿ ಇರುವ ಪ್ರಮುಖ ದಲಿತ ನಾಯಕರ ಹೆಸರು ಹೇಳುತ್ತಾ ಹೋದರೆ ಅವರೆಲ್ಲಾ ಕಾಂಗ್ರೆಸ್ ಪಕ್ಷದಿಂದ ಬಂದವರು. ರಾಜ್ಯಪಾಲರನ್ನಾಗಿ, ಲೋಕಸಭಾ ಸ್ಪೀಕರ್ಗಳನ್ನಾಗಿ ಮಾಡಿ ಕಾಂಗ್ರೆಸ್ ಪಕ್ಷ ದಲಿತರಿಗೆ ಗೌರವ ನೀಡಿದೆ ಎಂದಿದ್ದಾರೆ.
ಬಿಜೆಪಿಯುವರು ಬಂಗಾರು ಲಕ್ಷ್ಮಣ್ ಅವರನ್ನು ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಮಾಡಿದರು. ಅವರು ಯಾರ ಬಳಿಯೋ ಹಣ ಪಡೆದರು ಎಂದು ರಾಜಕೀಯವಾಗಿ ಅವರನ್ನು ಮುಗಿಸಲಾಯಿತು. ಗೋವಿಂದ ಕಾರಜೋಳ ಅವರೇ ನಿಮಗೆ ಸಾಮಾಜಿಕ ನ್ಯಾಯದ ಬಗ್ಗೆ ಬದ್ದತೆ ಇಲ್ಲ. ನೀವು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಏಕೆ ಕಾಂತರಾಜು ಆಯೋಗದ ಜಾತಿ ಗಣತಿ ವರದಿಯನ್ನು ಏಕೆ ಜಾರಿಗೆ ತರಲಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿಯವರ ನಾಯಕತ್ವ ಕರ್ನಾಟಕದಲ್ಲಿ ವಿಫಲಾಗಿದೆ, ಒಡೆದ ಮನೆಯಾಗಿ ಯಾರು ನಾಯಕರಿಲ್ಲದೇ, ಕಾಂಗ್ರೆಸ್ ಸರ್ಕಾರದ ವಿರುದ್ದ ಜನರನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಆದರೆ ನಮ್ಮ ಜನ ಬುದ್ದಿವಂತರಿದ್ದು ಬಿಜೆಪಿಯವರ ಮಾತನ್ನು ನಂಬುವುದಿಲ್ಲ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೀನಾಯವಾಗಿ ಬಿಜೆಪಿಯನ್ನು ರಾಷ್ಟ- ರಾಜ್ಯದಲ್ಲಿ ಸೋಲಿಸಲಿದ್ದಾರೆ ಎಂದು ತಿಳಿಸಿದ್ದಾರೆ.


