ಗ್ರಾಮದಿಂದ ಹೊಲದ ಕಡೆಗೆ ಹೋಗುತ್ತಿದ್ದ ಯುವಕನ ಮೇಲೆ ಆರೋಪಿ ಗಿರೀಶ್ ಕಬ್ಬಿಣದ ರಾಡಿನಿಂದ ಹೊಡೆದು ಗಂಭೀರವಾಗಿ ಗಾಯಗೊಳಿಸಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ದೊಮ್ಮತ್ತರಿಯಲ್ಲಿ ನಡೆದಿದೆ.
ಪಾವಗಡ ತಾಲ್ಲೂಕಿನ ದೊಮ್ಮತ್ತಮರಿ ಗ್ರಾಮದ ರಮೇಶ್ ಜೂನ್ 30ರಂದು ಬೆಳಗ್ಗೆ ತಮ್ಮ ಹೊಲದ ಕಡೆಗೆ ತೆರಳುತ್ತಿದ್ದರು. ಈ ಸಂದರ್ಭದಲ್ಲಿ ಎದುರುಗಡೆಯಿಂದ ಬಂದ ಗಿರೀಶ್ ಏಕಾಏಕಿ ರಮೇಶ್ ಮೇಲೆ ಕಬ್ಬಿಣದ ರಾಡಿನಿಂದ ತಲೆಯಲ್ಲಿ ಗಾಯವಾಗುವಂತೆ ಹಲ್ಲೆ ಮಾಡಿ ಪರಾರಿಯಾಗಿದ್ದಾನೆ.
ಗಂಭೀರವಾಗಿ ಗಾಯಗೊಂಡಿರುವ ರಮೇಶ್ ಪಾವಗಡ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.
ಆರೋಪಿ ಗಿರೀಶ್ ಗೆ ಮಾಜಿ ಶಾಸಕರೊಬ್ಬರ ಬೆಂಬಲ ಇದ್ದುದ್ದರಿಂದ ಎಫ್ಐಆರ್ ದಾಖಲಿಸಲು ಹಿಂದೇಟು ಹಾಕಲಾಗಿದೆ ಎಂದು ತಿಳಿದು ಬಂದಿದೆ. ನಂತರ ಆರೋಪಿ ವಿರುದ್ಧ ಎಫ್ಐಆರ್ ದಾಖಲಿಸಲು ಒತ್ತಡ ಬಂದ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಗಾಯಾಳು ರಮೇಶ್ ಸಹೋದರ ಗೋವಿಂದಪ್ಪ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿ ಗಿರೀಶ್ ಒಂಟಿಯಾಗಿ ನಡೆದು ಹೋಗುವವರ ಮೇಲೆ ದಾಳಿ ಮಾಡುವುದು, ಬೆದರಿಕೆ ಒಡ್ಡಿ ಹಣ ವಸೂಲಿ ಮಾಡುವುದು ಮತ್ತು ಮೊಬೈಲ್ ಕಿತ್ತುಕೊಂಡು ಹೋಗುವುದನ್ನು ವೃತ್ತಿ ಮಾಡಿಕೊಂಡಿದ್ದು ಈತನ ವಿರುದ್ಧ ದೂರು ನೀಡಲು ಜನ ಹೆದರಿಕೊಳ್ಳುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.


