Friday, September 20, 2024
Google search engine
Homeಜಿಲ್ಲೆನುಡಿದಂತೆ ನಡೆದ, ಬದುಕಿದ ಚಿಂತಕ ಕೆ.ದೊರೈರಾಜ್ - ದಿನೇಶ್ ಅಮೀನ್ ಮಟ್ಟು

ನುಡಿದಂತೆ ನಡೆದ, ಬದುಕಿದ ಚಿಂತಕ ಕೆ.ದೊರೈರಾಜ್ – ದಿನೇಶ್ ಅಮೀನ್ ಮಟ್ಟು

ತುಮಕೂರಿನ ಸಾಕ್ಷಿಪ್ರಜ್ಞೆಯಾದ ಕೆ. ದೊರೈರಾಜ್ 75 ವರ್ಷಗಳ ಕಾಲವೂ ಆತ್ಮಸಾಕ್ಷಿಯನ್ನು ಕಾಪಾಡಿಕೊಂಡು ಬಂದಿದ್ದು ಇದು ಸಣ್ಣ ವಿಷಯವೇನಲ್ಲ. ದೊರೈರಾಜ್ ಹೆಸರು ಕೇಳಿದರೆ ಮೊದಲು ಸನ್ಮಾನಿಸಬೇಕಾದುದು ಅವರ ತಂದೆ ತಾಯಿಗಳಿಗೆ. 75 ವರ್ಷದ ಹಿಂದೆ ತನ್ನ ಮಗ ರಾಜನಾಗಿರಬೇಕು, ದೊರೆಯಾಗಿರಬೇಕು ಎಂದು ಯೋಚಿಸಿರಬೇಕಾದರೆ ಅವರಲ್ಲಿ ಅಂತಹ ಸ್ವಾಭಿಮಾನದ ಕಿಚ್ಚು ಇತ್ತು ಎಂದೆನಿಸುತ್ತದೆ. ಅದು ದೊರೈರಾಜ್ ಅವರಲ್ಲಿ ಬಂದಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮ್ಮಿನಮಟ್ಟು ಹೇಳಿದರು.

ತುಮಕೂರು ನಗರದ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಸಮತಾ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಜನಪರ ಚಿಂತಕ ಕೆ.ದೊರೈರಾಜ್ ಮತ್ತು ಇತ್ತೀಚೆಗೆ ನಿವೃತ್ತಿ ಹೊಂದಿದ ನವಿದ್ ಅಹಮದ್ ಖಾನ್ ಅವರಿಗೆ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಬಡತನ, ಶೋಷಣೆಯನ್ನು ಅನುಭವಿಸಿ ಬಂದವರು ದೊರೈರಾಜ್, ಈ ಅನುಭವಗಳನ್ನು ಇಟ್ಟುಕೊಂಡು ಕತೆ, ಕಾದಂಬರಿ ಬರೆಯುವುದು ಬಹಳ ಸುಲಭ. ಆದರೆ ಅದರಂತೆ ಬದುಕುವುದು ಕಷ್ಟ. ಆದರೂ ಸಹ ದೊರೈರಾಜ್ ನುಡಿದಂತೆ ಬದುಕಿದರು ಮತ್ತು ಬದುಕುತ್ತಿದ್ದಾರೆ ಕೂಡ ಎಂದರು.

ಕಷ್ಟದ ಬದುಕನ್ನು ಕಂಡವರು ಬಹಳವಾಗಿ ದಲಿತ ಲೇಖಕರು ಮತ್ತು ಕವಿಗಳು ಬಹಳ ಜೋರು ದನಿಯಲ್ಲಿ ಮಾತನಾಡುತ್ತಾರೆ. ಅವರ ಮಾತುಗಳಲ್ಲಿ ಆಕ್ರೋಶ ಇರುತ್ತದೆ. ಇದು ಸಹಜವಾದುದು ಕೂಡ. ಸಿದ್ದಲಿಂಗಯ್ಯನವರ ಕವನಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ಆದರೆ ದೊರೈರಾಜ್ ಅವರದು ಬಹಳ ಮೆಲು ಮಾತು. ನಡೆಗೂ ನುಡಿಗೂ ವ್ಯತ್ಯಾಸ ಇಲ್ಲದಿದ್ದರೆ ಜನರು ಅಂತಹವರನ್ನು ಗೌರವಿಸುತ್ತಾರೆ. ಹಾಗೆಯೇ ದೊರೈರಾಜ್ ಅವರ ಮಾತುಗಳನ್ನು ಸಮಾಜ ಆಲಿಸುತ್ತದೆ ಎಂದು ಕೇಳುತ್ತದೆ. ಯಾಕೆಂದರೆ ಅವರು ನುಡಿದಂತೆ ನಡೆಯುತ್ತಿದ್ದಾರೆ ಎನ್ನುವ ಕಾರಣಕ್ಕೆ ಎಂದು ಹೇಳಿದರು.

ಮೆಲುದನಿಯಲ್ಲಿ ಮಾತನಾಡಿದರು ಎಂದರೆ ಅದು ಅವರ ದೌರ್ಬಲ್ಯವಲ್ಲ. ಮಕ್ಕಳನ್ನು ಹಾಗೆ ಗದರಿರುವುದಕ್ಕೆ ಸಾಧ್ಯವಿಲ್ಲ. ಅಷ್ಟು ಮಾತ್ರಕ್ಕೆ ಅವರು ಸಾಧುಪ್ರಾಣಿ ಮತ್ತು ಬಹಳ ದುರ್ಬಲರಾಗಿದ್ದಾರೆ ಎಂಬ ಅರ್ಥವಲ್ಲ. ಸಾಮಾಜಿಕ ವಿಷಯ ಬಂದಾಗ, ಅದು ಕೋಮುವಾದ ಇರಬಹುದು. ಬಡವರ ಮೇಲಿನ ದೌರ್ಜನ್ಯ ಇರಬಹದು, ಯಾವುದೇ ಬಗೆಯ ಅನ್ಯಾಯ ಇರಬಹುದು. ಅಂತಹ ಸಂದರ್ಭದಲ್ಲಿ ಮೆಲು ಮಾತಿನಲ್ಲಿ ಒಂದು ಕಠಿಣ ನಿರ್ಧಾರ ತೆಗೆದುಕೊಳ್ಳುವುದಿದೆಯಲ್ಲ ಅದು ಮಹತ್ವದ್ದು ಎಂದು ಹೇಳಿದರು.

ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಮಾತನಾಡಿ ದಲಿತ ಸಂಘರ್ಷ ಸಮಿತಿ ಸಂಸ್ಥಾಪಕ ಬಿ.ಕೃಷ್ಣಪ್ಪ ಅವರು ನನ್ನ ಬಳಿ ಬರುವಾಗ ಎಂಟು-ಹತ್ತು ಕಡತಗಳನ್ನು ಹಿಡಿದು ಬರುತ್ತಿದ್ದರು. ಆ ಪೈಲುಗಳು ಅಟ್ರಾಸಿಟಿ ಪ್ರಕರಣ, ಮೀಸಲಾತಿ ಪ್ರಕರಣಗಳಾಗಿರುತ್ತಿದ್ದವು. ಸಾವಿರಾರು ಕೇಸುಗಳನ್ನು ಹಾಕಿಸಿದ್ದಾರೆ ಎಂದು ತಿಳಿಸಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಜನಪರ ಚಿಂತಕ ಕೆ.ದೊರೈರಾಜ್, ಮನುಷ್ಯನ ಪ್ರೀತಿ ವಿಸ್ತರಿಸುತ್ತಾ ಹೋಗಬೇಕು. ಅಭಿನಂದನೆಯAತಹ ಕೆಲಸಗಳಲ್ಲಿ ಕಳೆದು ಹೋಗಬಾರದು. ಎಲ್ಲಾ ವಿಚಾರವಾದಗಳ ಮಧ್ಯೆ ಎಲ್ಲರನ್ನೂ ಬೆಸೆಯುವುದು ಪ್ರೀತಿ. ಇದು ಬಹಳ ಮುಖ್ಯ. ಪ್ರೀತಿ ಇರುವುದರಿಂದಲೇ ನಾವೆಲ್ಲ ಒಂದು ಕಡೆ ಸೇರಲು ಸಾಧ್ಯವಾಯಿತು. ನವಿದ್ ಖಾನ್ ಅವರಲ್ಲಿ ಸಲಹುವ ಗುಣ ಇತ್ತು ಎಂದರು.

ಉಸಿರುಗಟ್ಟಿಸುವ ಪರಿಸ್ಥಿತಿಯಿಂದ ಬಿಡುಗಡೆಯಾಗಬೇಕು. ಅದಕ್ಕಾಗಿ ಎಲ್ಲರೂ ಒಂದಾಗಿ ಹೋರಾಟ ಮಾಡಿದ ಫಲವಾಗಿ ಒಂದು ಬದಲಾವಣೆಯನ್ನು ಕಂಡಿದ್ದೇವೆ. ಕೋಮುವಾದದ ಬಗ್ಗೆ ನನ್ನನ್ನು ಸಾಕಷ್ಟು ಕಾಡುತ್ತಿದೆ. ಕೋಮುವಾದವನ್ನು ಪ್ರತಿಪಾದನೆ ಮಾಡುವಂತಹ ವ್ಯಕ್ತಿಗಳಿದ್ದಾರೆ. ಪಕ್ಷಗಳೂ ಕೂಡ ಇವೆ. ಇಲ್ಲಿ ಕೋಮುವಾದ ಪ್ರತಿಪಾದಿಸುವ ಪಕ್ಷ ಸೋತಿದೆ ಎಂದು ಭಾವಿಸಬೇಕಾಗಿಲ್ಲ. ಅದು ಜೀವಂತವಾಗಿದೆ ಎಂದರ್ಥ. ಮತ್ತೆ ನಾವು ತುಳಿದಷ್ಟು ಹೆಚ್ಚು ಬಲಿಷ್ಠವಾಗುತ್ತ ಹೋಗುತ್ತದೆ. ಕೋಮುವಾದ ಸರಿಯಿಲ್ಲ ಎನ್ನುವ ತಿಳುವಳಿಕೆ ಕೊಡುವುದರ ಮೂಲಕ ಜನರಿಗೆ ತಿಳುವಳಿಕೆ ಮೂಡಿಸುವ ಮೂಲಕ ಕೋಮುವಾದವನ್ನು ಕಳೆಯಲು ಮುಂದಾಗಬೇಕು ಎಂದು ಹೇಳಿದರು.

ವೇದಿಕೆಯಲ್ಲಿ ನವೀದ್ ಅಹಮದ್ ಖಾನ್, ಸಮತಾ ಬಳಗದ ಹೆಚ್.ವಿ.ಮಂಜುನಾಥ್, ವೈದ್ಯ ಡಾ. ಹೆಚ್.ವಿ.ರಂಗಸ್ವಾಮಿ, ಪ್ರಾಧ್ಯಾಪಕ ಹಾಗೂ ವಿಮರ್ಶಕ ಬೂದಾಳ್ ನಟರಾಜ್, ನಟ ಹನುಮಂತೇಗೌಡ ಮಾತನಾಡಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular