ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ಸ್ವಾಗತಿಸಲು ಹಾರ, ತುರಾಯಿ, ಶಾಲು, ಶಲ್ಯ ಕೊಡುವುದು ಬೇಡ ಎಂದು ಹೇಳಿದ ಬೆನ್ನಲ್ಲೇ ಸಚಿವ ಡಾ.ಜಿ.ಪರಮೇಶ್ವರ್ ಅದೇ ಹಾದಿಯನ್ನೇ ತುಳಿದರು. ಈಗ ಸಚಿವ ಪ್ರಿಯಾಂಕ್ ಖರ್ಗೆ ಸರದಿಯಾಗಿದೆ. ಹಾರ ತುರಾಯಿ ನೀಡುವುದನ್ನು ನಯವಾಗಿಯೇ ತಿರಸ್ಕರಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ತಾವು (ಅಭಿಮಾನಿಗಳು) ತೋರುತ್ತಿರುವ ಪ್ರೀತಿ, ಅಭಿಮಾನಕ್ಕೆ ಬೆಲೆಕಟ್ಟಲು ಸಾಧ್ಯವೇ ಇಲ್ಲಾ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈಗ ಪ್ರತಿನಿತ್ಯ ಸಾವಿರಾರು ಜನರು ಮನೆಗೇ ಬಂದು ಶುಭ ಹಾರೈಸುತ್ತಿದ್ದೀರಿ. ಈ ಪ್ರಮಾಣದ ಪ್ರೀತಿ ಹಾಗೂ ಅಭಿಮಾನಕ್ಕೆ ನಾನು ಹಾಗೂ ನನ್ನ ಕುಟುಂಬ ಸದಾ ಚಿರಋಣಿ. ನಿಮ್ಮ ಆಶೀರ್ವಾದ ಹಾಗೂ ಹಾರೈಕೆಗಳು ಜನಪರ ಕೆಲಸ ಮಾಡುತ್ತಲೇ ಇರಲು ನಮಗೆ ಸದಾ ಪ್ರೇರಣೆಯಾಗಿರಲಿದೆ ಎಂದು ತಿಳಿಸಿದ್ದಾರೆ.
ನಿಮ್ಮ ಅಭಿಮಾನ ವ್ಯಕ್ತಪಡಿಸುವ ಸಂದರ್ಭದಲ್ಲಿ ತಾವು ಹಾರ, ಪುಷ್ಪಗುಚ್ಛ, ಶಾಲು-ಶಲ್ಯಗಳ ಮೇಲೆ ಅನಗತ್ಯವಾಗಿ ಹಣ ವ್ಯಯಿಸುತ್ತಿರುವಿರಿ. ಇನ್ಮುಂದೆ ನಾನು ಇವ್ಯಾವುದನ್ನೂ ಸ್ವೀಕರಿಸದೇ ಇರಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ.
ಬುದ್ಧ-ಬಸವ-ಅಂಬೇಡ್ಕರ್-ಗುರು ನಾರಾಯಣ-ಸಂತ ಸೇವಲಾಲರಂತಹ ಮಹನೀಯರೆಲ್ಲಾ ಜ್ಞಾನಾರ್ಜನೆ ಜೀವನದ ಗುರಿಯಾಗಬೇಕು ಎಂದು ಪ್ರತಿಪಾದಿಸಿದ್ದರು. ನಮೆಲ್ಲರ ಪ್ರಯತ್ನ ಅದರೆಡೆಯೇ ಇರಲಿ. ಹೂಗುಚ್ಚದ ಬದಲಿಗೆ ಪುಸ್ತಕ ನಿಮ್ಮ ಆಯ್ಕೆಯಾಗಲಿ ಎಂದು ಸಲಹೆ ನೀಡಿದ್ದಾರೆ.


