ಮಣಿಪುರದಲ್ಲಿ ಗುರುವಾರವೂ ಹಿಂಸಾಚಾರ ಮುಂದುವರೆದಿದ್ದು, ಗುಂಪುಗಳು ಹಲವಾರು ಮನೆಗಳು, ಚರ್ಚ್ ಗಳು ಮತ್ತು ದೇವಾಲಯಗಳಿಗೆ ಬೆಂಕಿ ಹಚ್ಚಿವೆ ಎಂದು ಮಾಧ್ಯಮಗಳು ವರಿದಿ ಮಾಡಿವೆ.
ಅತಿ ದೊಡ್ಡ ಸಮುದಾಯವಾದ ಮೈಟೀಸ್ ಗಳನ್ನು ಎಸ್.ಟಿ ವರ್ಗಕ್ಕೆ ಸೇರಿಸುವ ಬೇಡಿಕೆಯನ್ನು ವಿರೋಧಿಸಿ ಬುಧವಾರ ರಾಜ್ಯದ ಎಲ್ಲಾ ಹತ್ತು ಗುಡ್ಡಗಾಡು ಜಿಲ್ಲೆಯಲ್ಲಿ ಬುಡಕಟ್ಟು ಐಕ್ಯತಾ ಮೆರವಣಿಗೆ ನಡೆಸಿದ ನಂತರ ಅದು ತೀವ್ರ ಸ್ವರೂಪ ಪಡೆದುಕೊಂಡಿತ್ತು.
ಪರಿಸ್ಥಿತಿ ನಿಯಂತ್ರಿಸಲು ಸೇನೆ ಮತ್ತು ಅರೆಸೇನಾ ಪಡೆಗಳು ಬೀಡುಬಿಟ್ಟಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರಿಗೆ ಕರೆ ಮಾಡಿ ಪರಿಸ್ಥಿತಿ ಅವಲೋಕಿಸಿದ್ದಾರೆ.
ಕಳೆದ 24 ಗಂಟೆಗಳಲ್ಲಿ ಇಂಫಾಲ್, ಚುರಾಚಂದ್ ಪುರ, ಬಿಷ್ಣುಪುರ, ಕಾಂಗ್ ವೋಕ್ಚಿ ಮತ್ತು ಮೋರೆಯಿಂದ ಕೆಲವು ಘರ್ಷಣೆಗಳು, ವಿಧ್ವಂಸಕತೆ ಮತ್ತು ಬೆಂಕಿ ಹಚ್ಚುವ ಘಟನೆಗಳು ವರದಿಯಾಗಿವೆ. ಸ್ಥಳೀಯ ನಿವಾಸಿಗಳ ಆಸ್ತಿ ಹಾನಿಯಾಗಿದ್ದು ಅಮೂಲ್ಯ ಜೀವಗಳು ನಷ್ಟವಾಗಿವೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಸಮಾಜದ ಎರಡು ವರ್ಗಗಳ ನಡುವಿನ ತಪ್ಪು ತಿಳುವಳಿಕೆಯಿಂದ ಈ ಘಟನೆಗಳು ನಡೆದಿವೆ. ಪರಿಸ್ಥಿತಿ ನಿಯಂತ್ರಿಸಲು ರಾಜ್ಯ ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದು ಸೂಕ್ಷ್ಮ ಪ್ರದೇಶಗಳಿಗೆ ಹೆಚ್ಚುವರಿ ಕೇಂದ್ರ ಅರೆಸೇನಾ ಪಡೆಗಳನ್ನು ನಿಯೋಜಿಲು ಕೋರಲಾಗಿದೆ ಎಂದು ತಿಳಿಸಿದರು.
ಗಲಭೆಯ ಹಿನ್ನೆಲೆಯಲ್ಲಿ ಇಂಟರ್ ನೆಟ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.


