Wednesday, March 18, 2026
Google search engine
Homeಜಿಲ್ಲೆಎಚ್ ಡಿ ದೇವೇಗೌಡರ ಸೋಲಿಗೆ ಬೆಳ್ಳಿ ಲೋಕೇಶ್ ಕಾರಣ - ಮಾಜಿ ಉಪಮೇಯರ್ ನಾಗರಾಜ್ ಆರೋಪ

ಎಚ್ ಡಿ ದೇವೇಗೌಡರ ಸೋಲಿಗೆ ಬೆಳ್ಳಿ ಲೋಕೇಶ್ ಕಾರಣ – ಮಾಜಿ ಉಪಮೇಯರ್ ನಾಗರಾಜ್ ಆರೋಪ

ಪಕ್ಷದಿಂದ ಹೊರಹೋಗಿರುವ ಬೆಳ್ಳಿ ಲೋಕೇಶ್ ಮತ್ತು ಕೃಷ್ಣಪ್ಪ ಅವರು ಜೆಡಿಎಸ್ ವಿರುದ್ಧ ಹಗುರವಾಗಿ ಮಾತನಾಡುವುದನ್ನು ಬಿಡಬೇಕು ಎಂದು ಮಾಜಿ ಉಪಮೇಯರ್ ಟಿ.ಆರ್.ನಾಗರಾಜ್ ತಾಕೀತು ಮಾಡಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರು ಸೋಲಲು ಬೆಳ್ಳಿ ಲೋಕೇಶ್ ಕಾರಣ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ನೀವಿಬ್ಬರು ಬಣ್ಣದ ಮಾತುಗಳನ್ನು ಆಡಿ ನಾಯಕರನ್ನು ನಂಬಿಸಿದ್ದು ಸಾಕು. ಈಗ ಬಿಜೆಪಿಯಲ್ಲಿ ಸಂಘಟನೆ ಮಾಡಿ, ಅದು ಬಿಟ್ಟು ಸುಮ್ಮನೆ ಹಗುರವಾಗಿ ಮಾತನಾಡುವುದು ಬೇಡ ಎಂದು ಹೇಳಿದರು.

ನಿಮಗೆ ರಾಜಕೀಯ ಭವಿಷ್ಯ ಕೊಟ್ಟಿದ್ದು ಜಾತ್ಯತೀತ ಜನತಾ ದಳ. ಹಲವು ಸ್ಥಾನಮಾನಗಳನ್ನು ಕೊಟ್ಟು ಗೌರವಿಸಿದೆ. ಆದರೆ ನಮ್ಮ ನಾಯಕರು ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ಟೀಕಿಸುವುದು ಸಲ್ಲದು, ಮತ್ತೊಮ್ಮೆ ನಮ್ಮ ನಾಯಕರ ವಿರುದ್ಧ ಮಾತನಾಡಿದರೆ, ನಿಮ್ಮ ನಿಜವಾದ ಬಣ್ಣ ಬಯಲುಗೊಳಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಕಳೆದ ಲೋಕಸಭಾ ಚುನಾವಣೆಯ ಸಮಯದಲ್ಲಿ ನೀವು ಮಾಜಿ ಪ್ರಧಾನಿ ದೇವೇಗೌಡರಿಗೆ ಮೋಸ, ವಂಚನೆ ಮಾಡಿದ್ದೀರಿ. ಇದು ಪಕ್ಷದ ಎಲ್ಲರಿಗೂ ಗೊತ್ತಿದೆ. ಹಾಗಾಗಿ ಈ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ ಎಂದರು.

ಬೆಳ್ಳಿ ಲೋಕೇಶ್ ಮತ್ತು ಕೃಷ್ಣಪ್ಪ ಅವರು ನಮ್ಮ ಪಕ್ಷದಲ್ಲಿದ್ದಾಗ ಮಾಜಿ ಶಾಸಕ ಸುರೇಶ್ ಗೌಡರ ವಿರುದ್ದ ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಈಗ ಅವರನ್ನೇ ಅಪ್ಪಿಕೊಂಡು ಮುದ್ದಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ನಿಮಗೆ ಟಿಕೆಟ್ ದೊರೆಯದೇ ಇರಲು ಪಕ್ಷಕ್ಕೆ ನಿಮ್ಮ ಕೊಡುಗೆ ಇಲ್ಲದೇ ಇರುವುದೇ ಕಾರಣ. ನೀವು 145ನೇ ಬೂತ್ ಏಜೆಂಟ್ ಗಳಿಗೆ ಮಾಡಿರುವ ಅನ್ಯಾಯವೇ ದೇವೇಗೌಡರು ಸೋಲಲು ನೇರ ಕಾರಣ. ದೇವೇಗೌಡರಿಗೆ ಬೆಳ್ಳಿ ಲೋಕೇಶ್ ಮೋಸ ಮಾಡಿದ್ದು ತಡವಾಗಿ ತಿಳಿದ ಕಾರಣ ಅವರಿಗೆ ಮುಜುಗರವಾಗಿ ಅವರು ಪಕ್ಷ ಬಿಡಲು ಕಾರಣವಾಯಿತು ಎಂದು ಹೇಳಿದರು.

ಮಾಧ್ಯಮಗೋಷ್ಟಿಯಲ್ಲಿ ಧರಣೇಂದ್ರ ಕುಮಾರ್ ರಾಜು, ಶ್ರೀನಿವಾಸ್, ಮಂಜುನಾಥ್, ವಿಜಿ ಗೌಡ, ಲೀಲಾವತಿ, ಇಸ್ಮಾಯಿಲ್, ಕೆಂಪರಾಜು, ಪ್ರಸನ್ನ ಪಚ್ಚಿ ಸೇರಿದಂತೆ ಇತರರು ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular