ಮಹತ್ವಾಕಾಂಕ್ಷೆಯ ಪಂಚರತ್ನ ಯೋಜನೆಗಳ ಜಾರಿ, ನೆನೆಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳ ಕ್ಷಿಪ್ರಗತಿಯ ಅನುಷ್ಠಾನ ಸೇರಿದಂತೆ ಹಲವಾರು ಪ್ರಮುಖ ಘೋಷಣೆಗಳನ್ನು ಮಾಡಿರುವ ಜೆಡಿಎಸ್ ಪಕ್ಷವು, ಜನತೆಗೆ ಸಾಮಾಜಿಕ ಭದ್ರತೆ ನೀಡುವ ಹಿನ್ನೆಲೆಯಲ್ಲಿ ಅನೇಕ ಜನಾನುರಾಗಿ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ
ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಪ್ರಸಕ್ತ ಕರ್ನಾಟಕ ವಿಧಾನಸಭೆ ಚುನಾವಣೆಯ ಜೆಡಿಎಸ್ ಪ್ರಣಾಳಿಕೆ ಜನತಾ ಪ್ರಣಾಳಿಕೆಯನ್ನು ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪ್ರಣಾಳಿಕೆ ರಚನೆ ಸಮಿತಿ ಅಧ್ಯಕ್ಷ ಬಿಎಂ ಫಾರೂಕ್ ಹಾಗೂ ಸಮಿತಿ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ ಅವರು ಪಕ್ಷದ ಕಚೇರಿ ಜೆಪಿ ಭವನದಲ್ಲಿ ಬಿಡುಗಡೆ ಮಾಡಿದರು.
ವರ್ಷಕ್ಕೆ 5 ಸಿಲಿಂಡರ್ ಉಚಿತ, ಸ್ತ್ರೀಶಕ್ತಿ ಸಾಲ ಮನ್ನಾ, ಕನ್ನಡಕ್ಕೆ ಅಗ್ರ ಮನ್ನಣೆ, ಖಾಸಗಿ ಕ್ಷೇತ್ರದಲ್ಲಿ ಕನ್ನಡಿಗರ ಉದ್ಯೋಗಕ್ಕೆ ಮೀಸಲು, ವಕೀಲರ ರಕ್ಷಣೆಗೆ ಕಾಯಿದೆ, ರಾಜ್ಯದಲ್ಲಿ ನಿಮ್ಹಾನ್ಸ್ ಮಾದರಿ ಆಸ್ಪತ್ರೆ, ಬೋನ್ ಮ್ಯಾರೊ ಸೇರಿ ದುಬಾರಿ ಕಾಯಿಲೆಗಳಿಗೆ 25 ಲಕ್ಷ ರೂ.ವರೆಗೆ ಪರಿಹಾರ, ನ್ಯಾ.ಸಾಚರ್ ವರದಿ ಜಾರಿಗೆ ಕ್ರಮ, ಪೊಲೀಸರ ವೇತನ ತಾರತಮ್ಯ ನಿವಾರಣೆ, ವಿಕಲಚೇತನರ ಪಿಂಚಣಿ 2500, ಹಿರಿಯ ಪಿಂಚಣಿ 5000 ರೂ.ಗಳಿಗೆ ಏರಿಕೆ ಸೇರಿದಂತೆ ಹಲವಾರು ಪ್ರಮುಖ ಘೋಷಣೆಗಳನ್ನು ಪಕ್ಷ ಮಾಡಿದೆ ಎಂದರು.
ಅಲ್ಲದೆ, ಪಂಚರತ್ನ ಯೋಜನೆಗಳಾದ ಎಲ್ಲರಿಗೂ ಸಮಾನ ಆರೋಗ್ಯ ಸೌಲಭ್ಯ ಆರೋಗ್ಯ ಸಂಪತ್ತು, ಸಮಾನ ಶಿಕ್ಷಣ ಕೊಡುವ ಶಿಕ್ಷಣವೇ ಆಧುನಿಕ ಶಕ್ತಿ, ಕೃಷಿಗೆ ಆಧುನಿಕ ಕಾಯಕಲ್ಪ ನೀಡುವ ರೈತ ಚೈತನ್ಯ, ಉಚಿತ ಮನೆ ನೀಡುವ ವಸತಿ ಆಸರೆ, ಯುವಕರು ಹಾಗೂ ಮಹಿಳೆಯರ ಸಾಮಾಜಿಕ ಭದ್ರತೆ, ಆರ್ಥಿಕ ಸಬಲೀಕರಣಕ್ಕೆ ರೂಪಿಸಲಾಗಿರುವ ಯುವನವ ಮಾರ್ಗ – ಮಹಿಳಾ ಸಬಲೀಕರಣ ಯೋಜನೆಗಳನ್ನು ಜಾರಿ ಮಾಡುವುದಾಗಿ ಪಕ್ಷ ಘೋಷಣೆ ಮಾಡಿದೆ ಎಂದು ಹೇಳಿದರು.
ಜನತಾ ಪರ್ವದ ಅಡಿಯಲ್ಲಿ ರೂಪಿಸಿ, ರಾಜ್ಯದ ಉದ್ದಗಲಕ್ಕೂ ಕೈಗೊಂಡ ಜನತಾ ಜಲಧಾರೆ, ಪಂಚರತ್ನ ರಥಯಾತ್ರೆ ಇತ್ಯಾದಿ ಕಾರ್ಯಕ್ರಮಗಳ ಮೂಲಕ ಸಂಗ್ರಹ ಮಾಡಲಾದ ಜನರ ಅಪೇಕ್ಷೆ ಹಾಗೂ ಸಲಹೆಗಳ ಆಧಾರದಲ್ಲಿ ಜನತಾ ಪ್ರಣಾಳಿಕೆ ರಚನೆ ಮಾಡಲಾಗಿದೆ ಎಂದು ಪಕ್ಷ ಹೇಳಿದೆ.
ಸ್ತ್ರೀಶಕ್ತಿ ಸ್ವಸಹಾಯ ಸಂಘಗಳ ಸಾಲಮನ್ನಾ, ಗರ್ಭಿಣಿ ತಾಯಂದಿರ ಅಗತ್ಯತೆ ಪೂರೈಕೆಗೆ 6 ತಿಂಗಳ ಕಾಲ 6,000 ರೂ. ಭತ್ಯೆ, ವಿಧವಾ ವೇತನ 900 ರೂ.ನಿಂದ 2,500 ರೂ.ಗಳಿಗೆ ಹೆಚ್ಚಳ, ಅಂಗನವಾಡಿ ಕಾರ್ಯಕರ್ತೆಯರಿಗೆ, ಸಹಾಯಕರಿಗೆ ಮತ್ತು ಮಿನಿ ಅಂಗನವಾಡಿ ಕಾರ್ಯಕರ್ತೆಯರಿಗೆ 5000 ರೂ.ವರೆಗೆ ಹೆಚ್ಚಿನ ವೇತನ, ಕನಿಷ್ಟ 15 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಕಾರ್ಯಕರ್ತೆಯರಿಗೆ ಪಿಂಚಣಿ ಕೊಡಲಾಗುವುದು ಎಂದು ಘೋಷಣೆ ಮಾಡಲಾಗಿದೆ ಎಂದರು.
ಕೇಂದ್ರ ಸರಕಾರದ ನಾಗರಿಕ ಸೇವೆಗಳಾದ ರೈಲ್ವೆ, ಬ್ಯಾಂಕಿಂಗ್, ರಾಜ್ಯದಲ್ಲಿರುವ ಕೇಂದ್ರ ಸಾರ್ವಜನಿಕ ಉದ್ಯಮಗಳು, ಕೇಂದ್ರ ಭದ್ರತಾಪಡೆ ಇನ್ನಿತರೆ ನೇಮಕದಲ್ಲಿ ಕನ್ನಡದಲ್ಲೇ ಪರೀಕ್ಷೆ ನಡೆಸಿ ಕನ್ನಡಿಗರಿಗೆ ಆದ್ಯತೆ ನೀಡಲು ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗುವುದು ಹಾಗೂ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಿಗೆ ಅಗತ್ಯ ಕಾಯಿದೆ ಜಾರಿ ಮಾಡಲಾಗುವುದು ಎಂದು ಜನತಾ ಪ್ರಣಾಳಿಕೆಯಲ್ಲಿ ತಿಳಿಸಲಾಗಿದೆ.
ಪ್ರೌಢಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 6.8 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್, ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುವ ಮತ್ತು ಆರ್ಥಿಕವಾಗಿ ಹಿಂದುಳಿದಿರುವ, 18 ವರ್ಷ ತುಂಬಿರುವ 60,000 ಸಾವಿರ ವಿದ್ಯಾರ್ಥಿನಿಯರಿಗೆ ವಿದ್ಯುತ್ ಚಾಲಿತ ಮೊಪೆಡ್ ನೀಡಲಾಗುವುದು ಹಾಗೂ ಶಾಲೆ ಕಾಲೇಜಿಗೆ ತೆರಳುವ ಎಲ್ಲ ಮಕ್ಕಳಿಗೆ ಅಗತ್ಯ ಸಾರಿಗೆ ವ್ಯವಸ್ಥೆ ಮಾಡಲಾಗುವುದು ಎಂದರು.
ಹಿರಿಯ ನಾಗರಿಗರಿಗೆ ನೆರವು:
ಹಿರಿಯ ನಾಗರಿಕರು ಸಂಕಷ್ಟಕ್ಕೆ ಸಿಲುಕಬಾರದು ಎನ್ನುವ ಉದ್ದೇಶದಿಂದ ಹಿರಿಯರ ಮಾಶಾಸನವನ್ನು 1200 ರೂ.ನಿಂದ 5000 ರೂ.ಗಳಿಗೆ ಏರಿಕೆ ಮಾಡಲಾಗುವುದು.
ಧಾರ್ಮಿಕ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಕ್ರಮ, ಯುವಜನ ಸಬಲೀಕರಣಕ್ಕೆ ಒತ್ತು, ವಿಕಲ ಚೇತನರಿಗೆ ಸಹಾಯಹಸ್ತ, ಪೊಲೀಸರಿಗೆ ಸಿಹಿಸುದ್ದಿ, ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಏಳಿಗೆ, ವೃತ್ತಿನಿರತ ವಕೀಲರಿಗೆ ರಕ್ಷಣೆ, ಸೆಕ್ಯೂರಿಟಿ ಗಾರ್ಡ್ ಮತ್ತು ಆಟೋ ಚಾಲಕರಿಗೆ ನೆರವು, ಮೀಸಲಾಗಿ ಗೊಂದಲ ನಿವಾರಣೆ, ಹಳೆಯ ಪಿಂಚಣಿ ಯೋಜನೆ ಜಾರಿ, ಕೈಗಾರಿಕಾಭಿವೃದ್ಧಿ, ಜಲಸಂಪನ್ಮೂಲ ಸದ್ಬಳಕೆ ಮಾಡಲಾಗುವುದು.
ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳ 8864 ಕೆರೆಗಳಿಗೆ ನೀರು ತುಂಬಿಸುವ ಎತ್ತಿನಹೊಳೆ ಯೋಜನೆಯನ್ನು 4 ವರ್ಷಗಳಲ್ಲಿ ಕಾರ್ಯಗತ ಮಾಡಲಾಗುವುದು.


