ಬೊಮ್ಮಾಯಿ ಸರ್ಕಾರ ತನ್ನ ಮೀಸಲಾತಿ ಹೆಚ್ಚಳ ಆದೇಶ ಸಮರ್ಥಿಸಿಕೊಳ್ಳಲು ಸುಪ್ರೀಂ ಕೋರ್ಟ್ ನಲ್ಲಿ ಅಫಿಡವಿಟ್ ಸಲ್ಲಿಸಲು ವಿಫಲವಾಗಿದೆ. ಆ ಮೂಲಕ ಮೀಸಲಾತಿ ವಿಚಾರದಲ್ಲಿ ಲಿಂಗಾಯತ, ಒಕ್ಕಲಿಗ, ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ ಸಮುದಾಯಗಳಿಗೆ ದ್ರೋಹ ಬಗೆದಿದೆ, ಅಪಮಾನ ಮಾಡಿದೆ ಎಂದು ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೊಮ್ಮಾಯಿ ಸರ್ಕಾರ 2002 ರಲ್ಲಿ ಜಾರಿಗೆ ತಂದಿದ್ದ ಮೀಸಲಾತಿಯನ್ನು ಮರು ಜಾರಿ ಮಾಡುವುದಾಗಿ ಕೋರ್ಟ್ ನಲ್ಲಿ ತಿಳಿಸಿದೆ. ಆಮೂಲಕ ಒಕ್ಕಲಿಗರು 3A ಹಾಗೂ ಲಿಂಗಾಯತರು 3B ವರ್ಗೀಕರಣದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ.
ಬೊಮ್ಮಾಯಿ ಸರ್ಕಾರದ ಆದೇಶದಂತೆ ಹೆಚ್ಚುವರಿ 2% ಮೀಸಲಾತಿ ಸಿಗುವುದಿಲ್ಲ. ಬೊಮ್ಮಾಯಿ ಸರ್ಕಾರ ಏ.25, 2023ರಂದು ಸುಪ್ರೀಂ ಕೋರ್ಟ್ ನಲ್ಲಿ ಸಾಲಿಸಿಟರ್ ಜನರಲ್ ಮೂಲಕ, ಮಾರ್ಚ್ 27, 2023ರಂದು ತಾನು ಹೊರಡಿಸಿದ್ದ ಮೀಸಲಾತಿ ಹೆಚ್ಚಳ ಆದೇಶಕ್ಕೆ ತಾನೇ ತಡೆ ಹಿಡಿದಿದ್ದು, ಕ್ಷಮಿಸಲಾರದ ಪಾಪ ಎಸಗಿದೆ ಎಂದು ದೂರಿದ್ದಾರೆ.
ಆಮೂಲಕ ಕಾಂಗ್ರೆಸ್ ಪಕ್ಷ ಹೇಳಿದ್ದ ಮಾತು ನಿಜವಾಗಿದೆ. ಬೊಮ್ಮಾಯಿ ಹಾಗೂ ಮೋದಿ ನೇತೃತ್ವದ ಬಿಜೆಪಿ ಡಬಲ್ ಇಂಜಿನ್ ಸರ್ಕಾರಗಳು ಈ ಸಮುದಾಯಗಳಿಗೆ ಡಬಲ್ ದ್ರೋಹ ಬಗೆದಿವೆ ಎಂದು ಟೀಕಿಸಿದ್ದಾರೆ.
ದ್ರೋಹ ಬಗೆವ ಬಿಜೆಪಿ ಸರ್ಕಾರದ ಮೂಲ ಉದ್ದೇಶ, ಚುನಾವಣೆ ಸಮಯದಲ್ಲಿ ಮೀಸಲಾತಿ ಹೆಚ್ಚಳ ಹೆಸರಿನಲ್ಲಿ ಈ ಸಮುದಾಯಗಳಿಗೆ ಲಾಲಿಪಾಪ್ ಕೊಟ್ಟು ಯಾಮಾರಿಸುವ ಪ್ರಯತ್ನ ನಡೆದಿದೆ. ಅಂತಿಮವಾಗಿ ಈ ಮೀಸಲಾತಿ ಹೆಚ್ಚಳ ವಿಚಾರ ಕಾನೂನು ಕಟಕಟೆಯಲ್ಲಿ ನಿಂತು ಯಾರಿಗೂ ಮೀಸಲಾತಿ ಸಿಗಬಾರದು, ಮೀಸಲಾತಿ ಹೆಸರಿನಲ್ಲಿ ಮತ ಬ್ಯಾಂಕ್ ರಾಜಕಾರಣ ಮಾಡುವ ಷಡ್ಯಂತ್ರ ರೂಪಿಸಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.


