ಬೇರೆಲ್ಲ ಅತ್ಯಾಚಾರ ಪ್ರಕರಣಗಳಂತೆ ಕೋರಮಂಗಲದ ಸಾಮೂಹಿಕ ಅತ್ಯಾಚಾರ ಪ್ರಕರಣವೂ ಮರೆಯಾಗಲು ಅವಕಾಶ ನೀಡದೇ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮಧ್ಯ ಪ್ರವೇಶಿಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ನಾಯಕಿ ಸುಷ್ಮಾ ವೀರ್ ಆಗ್ರಹಿಸಿದ್ದಾರೆ
ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರಿನ ಕೋರಮಂಗಲದಲ್ಲಿ ಯುವತಿಯ ಮೇಲೆ ಸುಮಾರು ಎರಡೂವರೆ ಗಂಟೆಗಳ ಕಾಲ ನಿರಂತರವಾಗಿ ಅತ್ಯಾಚಾರ ನಡೆದಿರುವುದು ಅತ್ಯಂತ ಆತಂಕಕಾರಿ ಬೆಳವಣಿಗೆ. ಕೋರಮಂಗಲ ದಂತಹ ಸುಸಂಸ್ಕೃತ ಪ್ರದೇಶದಲ್ಲೇ ಇಂತಹ ವಿಕೃತ ಘಟನೆ ನಡೆದಿದೆ ಎಂದು ಹೇಳಿದರು.
ಕೃತ್ಯ ನಡೆದ ನಂತರ ಆರೋಪಿಗಳನ್ನು ಬಂಧಿಸಿ ಸುಮ್ಮನಾಗುವ ಪೊಲೀಸರು, ಇಂತಹ ಘಟನೆಗಳು ನಡೆಯದಂತೆ ಯಾವುದೇ ಮುನ್ನೆಚ್ಚರಿಕೆ ವಹಿಸುತ್ತಿಲ್ಲ. ಅತ್ಯಾಚಾರದಂತಹ ಗಂಭೀರ ಅಪರಾಧಗಳು ನಡೆದಾಗಲೂ ಸರ್ಕಾರ ಹಾಗೂ ಗೃಹ ಇಲಾಖೆ ಕಣ್ಣೊರೆಸುವ ತಂತ್ರ ಅನುಸರಿಸುವುದು ದುರದೃಷ್ಟಕರ ಎಂದು ತಿಳಿಸಿದರು.
ಒಬ್ಬ ಹೆಣ್ಣಿನ ಮೇಲೆ ದೈಹಿಕವಾಗಿ ಅತ್ಯಾಚಾರವಾದರೆ, ಆಕೆಯ ಇಡೀ ಕುಟುಂಬ ಮಾನಸಿಕ ಅತ್ಯಾಚಾರಕ್ಕೆ ಒಳಗಾಗುತ್ತದೆ. ಆ ಕುಟುಂಬಕ್ಕೆ ಈ ಘಟನೆಯು ಶಾಶ್ವತವಾಗಿ ಕಳಂಕವಾಗಿ ಉಳಿದುಬಿಡುತ್ತದೆ. ಆದ್ದರಿಂದ ಅತ್ಯಾಚಾರ ಪ್ರಕರಣಗಳನ್ನು ನಿರ್ಲಕ್ಷ್ಯದಿಂದ ನೋಡುವುದು ಯಾವುದೇ ಕಾರಣಕ್ಕೂ ಸರಿಯಲ್ಲ ಎಂದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸಿ, ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆದೇಶ ನೀಡಬೇಕು. ಮಹಿಳಾ ಸಬಲೀಕರಣವೆಂಬ ಮಹತ್ವದ ವಿಚಾರವು ಕೇವಲ ಕಣ್ಣೊರೆಸುವ ರವಿಕೆ ಆಗಬಾರದು. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯಲು ಅಗತ್ಯ ಸುರಕ್ಷತಾ ಕ್ರಮಗಳು ಜಾರಿಗೆ ಬರಬೇಕು. ಆಮ್ ಆದ್ಮಿ ಪಾರ್ಟಿಯೊಂದೇ ಈಗಿನ ವ್ಯವಸ್ಥೆಗೆ ಸೂಕ್ತ ಬದಲಾವಣೆ ತರಬಲ್ಲದು” ಎಂದು ಹೇಳಿದರು.


