ಮೀಸಲಾತಿ ವಿಷಯವನ್ನು ಚುನಾವಣೆಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಿರುವ ರಾಜ್ಯ ಬಿಜೆಪಿ ಸರ್ಕಾರದ ಧೋರಣೆ ಖಂಡಿಸಿ ಮೈಸೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು ಚುನಾವಣೆ ಸಮೀಪಿಸುತ್ತಿರುವಂತೆ ಒಳಮೀಸಲಾತಿ ಮತ್ತು ಮೀಸಲಾತಿಯನ್ನು ಕಲ್ಪಿಸಿದೆ. ಇದನ್ನು ಇದೀಗ ರಾಜಕೀಯಕ್ಕೆ ಸರ್ಕಾರ ಬಳಸಿಕೊಳ್ಳುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದರು.
ಪರಿಶಿಷ್ಟ ಸಮುದಾಯಕ್ಕೆ ಮೀಸಲಾತಿ ಹೆಚ್ಚಳ ಮಾಡಿರುವುದು ಬಿಜೆಪಿಗೆ ತಿರುಗುತಬಾಣ ಆಗುತ್ತಿದೆ. ಸಂವಿಧಾನದ ಮಾನ್ಯತೆ ಇಲ್ಲದ ರೀತಿ ಮೀಸಲಾತಿ ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಮೀಸಲಾತಿ ಹೆಚ್ಚಳವೇ ಅವೈಜ್ಞಾನಿಕ ಎಂದು ವಾಗ್ದಾಳಿ ನಡೆಸಿದರು.

ಹಿಂದೆಯು ಹಲವು ಬಾರಿ ಮೀಸಲಾತಿ ಹೆಚ್ಚಳವಾಗಿದೆ. ಅದೆಲ್ಲಾ ಸಂವಿಧಾನಾತ್ಮಕವಾಗಿ ನಡೆದಿತ್ತು. ಆದರೆ ಈಗ ಚುನಾವಣೆಗಾಗಿ ಬಿಜೆಪಿ ಗಿಮಿಕ್ ಮಾಡಿದೆ ಎಂದು ದೂರಿದರು.
ತನ್ವೀರ್ ಸೇಠ್ ಮಾತನಾಡಿ, 2ಬಿ ಕೆಟಗರಿಯಲ್ಲಿ ಮುಸ್ಲಿಂ ಸಮುದಾಯದ ಮೀಸಲಾತಿ ರದ್ದು ಮಾಡಿ ಲಿಂಗಾಯತರಿಗೆ ನೀಡಲಾಗಿದೆ. ಚುನಾವಣೆಗಾಗಿ ಒಂದು ಜನಾಂಗ ಮತ್ತೊಂದು ಜನಾಂಗದ ನಡುವೆ ಗೊಂದಲ ಸೃಷ್ಟಿ ಮಾಡಿದ್ದಾರೆ. ಇದನ್ನು ಕಾನೂನುಬದ್ಧವಾಗಿ ಮಾಡಿಲ್ಲ. ಈ ದೇಶದ ಸಂವಿಧಾನ ಉಳಿಸಬೇಕು ಎಂಬುದು ಕಾಂಗ್ರೆಸ್ ಆಶಯ. ಅದಕ್ಕಾಗಿ ಈ ಧರಣಿ ಮಾಡುತ್ತಿದ್ದೇವೆ ಎಂದು ಹೇಳಿದರು.
ಪ್ರತಿಭಟನಾ ಧರಣಿಯಲ್ಲಿ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಚಿವರಾದ ಜಮೀರ್ ಅಹಮದ್ ಖಾನ್, ಡಾ. ಎಚ್.ಸಿ. ಮಹಾದೇವಪ್ಪ, ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ತನ್ವೀರ್ ಸೇಠ್, ಡಾ. ತಿಮ್ಮಯ್ಯ ಮತ್ತಿತರರು ಭಾಗವಹಿಸಿದ್ದರು.


