ತೆಲಂಗಾಣ ರಾಜ್ಯದ ವಾರಂಗಲ್ನ ಕಾಕತೀಯ ಮೆಡಿಕಲ್ ಕಾಲೇಜಿನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದ ದಲಿತ ಸಮುದಾಯದ ಡಾ.ಪ್ರೀತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ 26 ವರ್ಷ ವಯಸ್ಸಾಗಿತ್ತು.
ತನ್ನ ಸೀನಿಯರ್ ಆಗಿದ್ದ ಸೈಫ್ ಎನ್ನುವ ವ್ಯಕ್ತಿಯಿಂದ ಜಾತಿ ಕಾರಣಕ್ಕೆ ನಿರಂತರ ಕಿರುಕುಳಕ್ಕೆ ಒಳಗಾಗಿದ್ದ ಡಾ. ಪ್ರೀತಿ ತನ್ನ ಮೇಲಾಗುತ್ತಿದ್ದ ದೌರ್ಜನ್ಯದ ವಿರುದ್ಧ ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದರು.
ಆದರೆ ಆಡಳಿತ ಮಂಡಳಿ ಸರಿಯಾದ ರೀತಿಯಲ್ಲಿ ಸ್ಪಂದಿಸಿಲ್ಲ. ಇದರಿಂದ ಮನನೊಂದು ಅಸಹಾಯಕತೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿ ಕೊನೆಯುಸಿರೆಳೆದಿದ್ದಾರೆ.
ದಲಿತ ವಿದ್ಯಾರ್ಥಿನಿಯ ಮತ್ತೊಂದು ಸಾಂಸ್ಥಿಕ ಹತ್ಯೆ
ಡಾ.ಪ್ರೀತಿ ಅವರದ್ದು ಇದೊಂದು ಸಾಂಸ್ಥಿಕ ಹತ್ಯೆ. ಈ ಹೆಸರು ರೋಹಿತ್ ವೇಮುಲ, ಪಾಯಲ್ ತಡ್ವಿ ಮೊನ್ನೆ ದರ್ಶನ್ ಸೋಲಂಕಿ ಸಾಲಿಗೆ ಸೇರಿದಂತೆ ಆಗಿದೆ. ಈ ನೆಲ ದಲಿತರ ರಕ್ತಕ್ಕಾಗಿ ಒಣಗಿದೆ ಅನಿಸುತ್ತದೆ ಎಂದು ಶುಭ ರಂಗಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೈಫ್ ಎಂಬಾತ ತನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಡಾ.ಪ್ರೀತಿ ತನ್ನ ತಂದೆಗೆ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪ್ರೀತಿಯ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ರಾಧಾ ರಮಣ್ ದಾಸ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.
ಡಾ.ಪ್ರೀತಿ ಆತ್ಮಹತ್ಯೆ ಸುದ್ದಿ ಫೇಸ್ಬುಕ್, ಟ್ವಿಟ್ಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸೈಫ್ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.


