ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕು ಸಿದ್ದರಬೆಟ್ಟದ ಸಮೀಪದಲ್ಲಿರುವ ಬೆಟ್ಟಗಳಿಗೆ ಕಿಡಿಗೇಡಿಗಳು ಹಚ್ಚಿದ ಬೆಂಕಿಯ ಕೆನ್ನಾಲಿಗೆಗೆ ಸಾಹಿತಿ ಸಿದ್ದಗಂಗಯ್ಯ ಹೊಲತಾಳು ಅವರ 5 ಎಕರೆಯಲ್ಲಿ ಬೆಳೆದಿದ್ದ ಗಿಡಮರಗಳು ಆಹುತಿಯಾಗಿವೆ. ತೆಂಗು, ಮಾವು, ಶ್ರೀಗಂಧ, ನಿಂಬೆ ಸೇರಿ 300 ಕ್ಕೂ ಹೆಚ್ಚು ಮರಗಳು ಕರಕಲಾಗಿದೆ.
ನಾನೊಬ್ಬ ‘ಕಾಡಂಚಿನ ರೈತ’ ನೆಂದು ಪರಿಚಯಿಸಿಕೊಳ್ಳುವ ನಮ್ಮೆಲ್ಲರ ಪ್ರೀತಿಯ ಮೇಸ್ಟ್ರು ‘ಸಿದ್ಧಗಂಗಯ್ಯ ಹೊಲತಾಳು’ ಅವರ ‘ಕುರಂಕೋಟೆ’ ಬುಡದಲ್ಲಿರುವ ‘ಹೊಲತಾಳು’ ಎಂಬ ಗ್ರಾಮದಲ್ಲಿರುವ ತೋಟಕ್ಕೆ ಹೋಗುವುದೆಂದರೆ ಎಂಥದ್ದೂ ಖುಷಿ.
ತಮ್ಮ 5 ಎಕರೆ ಜಾಗದಲ್ಲಿ ಮಾವು, ಬಾಳೆ, ತೆಂಗು, ಶ್ರೀಗಂಧ ಹೀಗೆ ಸಾವಿರಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಇವರ ತೋಟದ ಸನಿಹದಲ್ಲೇ ಇರುವ ‘ತಲಪರಿಕೆ’ಗಳು. ತೋಟದ ಹಿಂಬದಿಯಲ್ಲಿ ಕಣ್ಣು ಹಾಯಿಸಿದ್ದಷ್ಟು ಎತ್ತರಕ್ಕೆ ನಿಂತಿರುವ ಬೆಟ್ಟಗಳು.

ಸ್ವತಃ ಮೇಷ್ಟ್ರೇ ತಮ್ಮ ಅಧ್ಯಾಪಕ ವೃತ್ತಿಯಿಂದ ನಿವೃತ್ತಿ ಬಳಿಕ ತೋಟವನ್ನು ಅಸ್ಥೆಯಿಂದ ಜೋಪಾನ ಮಾಡಿದ್ದರು.ನನ್ನ ಅನೇಕ ಸ್ನೇಹಿತರನ್ನು ಇವರ ತೋಟಕ್ಕೆ ಕರೆದುಕೊಂಡು ಹೋಗಿದ್ದೇನೆ. ನಾನು ಕೂಡ ಇವರ ತೋಟಕ್ಕೆ ಹಲವಾರು ಬಾರಿ ಹೋಗಿದ್ದೇನೆ.
ತೋಟದಲ್ಲೇ ವಿಚಾರ ಸಂಕಿರಣ ಸೇರಿದಂತೆ ನಾಟಕ, ಸಂಗೀತಕ್ಕಾಗಿ ಪುಟ್ಟ ಕಟ್ಟಡವನ್ನು ನಿರ್ಮಿಸಿದ್ದಾರೆ. ಇಲ್ಲೇ ಇರುವ ಪ್ರೊಫೆಸರ್ ಅಡ್ಡ’ದಲ್ಲಿ ಕುಳಿತು ಅವರ ತರೆಸಿಕೊಟ್ಟ ಹಳ್ಳಿ ಊಟವನ್ನು ಸವೆದಿದ್ದೇವೆ. ಇವರ ತೋಟದಲ್ಲಿ ಇಡೀ ರಾತ್ರಿ ಮೈಲಾರಲಿಂಗನ ಪದವನ್ನು ಓದಿದ್ದೇವೆ.
ನಾನೇ ಬಿತ್ತಿದ್ದ ಬಿತ್ತನೆ ಬೀಜಗಳು ಗಿಡವಾಗಿದ್ದವು. ತಮ್ಮ ತೋಟವನ್ನೇ ಕೇಂದ್ರವಾಗಿಟ್ಟುಕೊಂಡು ‘ಸುವರ್ಣಮುಖಿ’ ಸೇರಿದಂತೆ ಮೂರು ಕೃತಿಗಳನ್ನು ರಚಿಸಿದ್ದಾರೆ. ಒಂದು ಕಡೆ ‘ಸಿದ್ದರಬೆಟ್ಟ’, ಇನ್ನೊಂದು ಕಡೆ ‘ದೊಡ್ಡಕಾಯಪ್ಪ’ ದೇವಸ್ಥಾನ ಅದರ ಸಮೀಪವೆ ಇವರ ತೋಟ. ಯಾರೋ ಬೆಟ್ಟಕ್ಕೆ ಬೆಂಕಿ ಹಾಕಿದ್ದಾರೆ.
ಬೆಂಕಿಯ ಜ್ವಾಲೆ ವ್ಯಾಪಿಸಿ ಇವರ ತೋಟವನ್ನು ಆಹುತಿ ತೆಗೆದುಕೊಂಡಿದೆ. ತೆಂಗು, ಮಾವು, ಶ್ರೀಗಂಧ, ನಿಂಬೆ ಸೇರಿ 300 ಕ್ಕೂ ಹೆಚ್ಚು ಮರಗಳು ಕರಕಲಾಗಿದೆ. ಸ್ವತಃ ‘ಸಿದ್ಧಗಂಗಯ್ಯ ಹೊಲತಾಳು’ ಅವರಂತೂ ಬೆಟ್ಟಕ್ಕೆ ಬೆಂಕಿ ಹಾಕಿದರೆ ಏನೆಲ್ಲ ತೊಂದರೆಯಾಗುತ್ತದೆ ಎಂದು ಕರಪತ್ರ ಹಂಚಿ ಜಾಗೃತಿ ಮೂಡಿಸುತ್ತಿದ್ದರು. ಆದರೆ ಯಾರದ್ದೋ ಬೇಜವಾಬ್ದಾರಿಯಿಂದ ಇವರ ತೋಟ ನಾಶವಾಗಿದೆ.
(ಹಿರಿಯ ಪತ್ರಕರ್ತ ಉಗಮ ಶ್ರೀನಿವಾಸ್ ಅವರ ಫೇಸ್ಬುಕ್ ವಾಲ್ ನಿಂದ ತೆಗೆದುಕೊಳ್ಳಲಾಗಿದೆ)


