ಇಬ್ಬರು ಮಹಿಳಾ ಅಧಿಕಾರಿಗಳ ನಡುವೆ ನಡೆಯುತ್ತಿರುವ ಜಟಾಪಟಿ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಕೂಡಲೇ ಮುಖ್ಯ ಕಾರ್ಯದರ್ಶಿ ಇಬ್ಬರು ಅಧಿಕಾರಿಗಳ ಮೇಲೆ ಚಾಟಿ ಬೀಸಿ ಸಮಸ್ಯೆ ಬಗೆಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯ ಕಾರ್ಯದರ್ಶಿ ಕೂಡಲೇ ಇಬ್ಬರನ್ನು ಕರೆದು ಎಚ್ಚರಿಕೆ ನೀಡಬೇಕು. ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ. ಸರ್ಕಾರ ಇದೆಯಾ? ಇಲ್ಲವಾ? ಎನ್ನುವ ಅನುಮಾನ ಉಂಟಾಗಿದೆ ಎಂದು ಹೇಳಿದರು.
ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಐಎಎಸ್, ಐಪಿಎಸ್ ಅಧಿಕಾರಿಗಳನ್ನು ದೇವಮಾನವರು ಎಂದು ಕರೆದಿರುವ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ ಅವರು, ಇದರಿಂದ ಜನತೆಗೆ ಯಾವ ಸಂದೇಶ ಕೊಡುತ್ತಿದ್ದಾರೆ ಅವರು ಎಂದು ತರಾಟೆಗೆ ತೆಗೆದುಕೊಂಡರು.
ರಾಜ್ಯದಲ್ಲಿ ನಡೆಯುತ್ತಿರುವ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಸರ್ಕಾರ ಇಲ್ಲದ ಶೂನ್ಯ ಸ್ಥಿತಿ ಇದೆ ಎನ್ನುವ ಭಾವನೆ ಬರುತ್ತಿದೆ. ಅಧಿಕಾರಿಗಳು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ನಾನು ಕೂಡ ಸರ್ಕಾರವನ್ನು ನಡೆಸಿದ್ದೇನೆ. ಆಗೆಲ್ಲ ಹೀಗೆ ಆಗಲು ಬಿಟ್ಟಿರಲಿಲ್ಲ ಎಂದರು.
ಅಧಿಕಾರಿಗಳಿಗೆ ಒಂದಿಷ್ಟು ಮಾರ್ಗಸೂಚಿಗಳು, ನಿಯಮಾವಳಿಗಳು ಇವೆ. ಅವರು ಜನತೆಗೆ ಉತ್ತರದಾಯಿ ಆಗಿರಬೇಕು. ಅವರು ಸೋಷಿಯಲ್ ಮೀಡಿಯಾದಲ್ಲಿ ಹಾದಿ-ಬೀದಿ ರಂಪ ಮಾಡಿಕೊಳ್ಳುವ ಬದಲು ಮುಖ್ಯ ಕಾರ್ಯದರ್ಶಿ ಬಳಿ ಹೋಗಿ ಸಮಸ್ಯೆ ಪರಿಹಾರ ಮಾಡಿಕೊಳ್ಳಬಹುದಿತ್ತು. ಇದೊಂದೇ ಅಲ್ಲ, ಅನೇಕ ಪ್ರಕರಣಗಳು ನಡೆದಿವೆ. ಅಧಿಕಾರಿಗಳಿಗೆ ಸರ್ಕಾರದ ಮೇಲೆ ಗೌರವ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗೃಹ ಸಚಿವರು ಸರ್ಕಾರಿ ಅಧಿಕಾರಿಗಳನ್ನು ದೇವ ಮಾನವರು ಅಂತಾರೆ. ಹಾಗೆಂದರೆ ಏನರ್ಥ? ಅವರೇನು ಇಂದ್ರಲೋಕದಿಂದ ಇಳಿದು ಬಂದವರಾ? ಇದೆಲ್ಲಾ ವಿಚಾರಗಳು ನನಗೆ ಗೊತ್ತಿದೆ. ಸಾರಾ ಮಹೇಶ್ ಅವರ ಮೇಲೆ ಒಬ್ಬ ಮಹಿಳಾ ಅಧಿಕಾರಿ ಆರೋಪ ಮಾಡಿದ್ದು ಗೊತ್ತಿದೆ, ಆ ಅಧಿಕಾರಿ ಎಲ್ಲಿ ಹೋದರೂ ವಿವಾದವೇ. ಯಾಕೆ ಬೇಕು ಇಂಥ ವಿವಾದಗಳು? ನನಗೆ ಗೊತ್ತಿರುವ ಕೆಲ ಮಾಹಿತಿಗಳನ್ನು ಹೊರಗೆ ಇಟ್ಟರೆ ಸರಕಾರಕ್ಕೆ ತಲೆ ಎತ್ತಿ ನಿಲ್ಲಲು ಆಗುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರ ನೀಡಿದರು.
ಡಬಲ್ ಎಂಜಿನ್ ಸರ್ಕಾರದಲ್ಲಿ ಇದೆಲ್ಲ ಎಗ್ಗಿಲ್ಲದೆ ನಡೆಯುತ್ತಿದೆ. ಒಂದೆಡೆ ರಾಜ್ಯದಿಂದ ಕೈಗಾರಿಕೆಗಳು ಬೇರೆ ರಾಜ್ಯದ ಪಾಲಾಗುತ್ತಿವೆ. ಇಲ್ಲಿ ನೋಡಿದರೆ ಅಧಿಕಾರಿಗಳು ಕಿತ್ತಾಡಿಕೊಳ್ಳುತ್ತಿದ್ದಾರೆ. ಎಲೆಕ್ಟ್ರಿಕ್ ಬಸ್ ಯೋಜನೆ ಎಲ್ಲಿಗೆ ಹೋಯ್ತು? ತಮಿಳುನಾಡಿಗೆ ಹೋಗಿದೆ ಅದು. ಸರ್ಕಾರಕ್ಕೆ ಅಧಿಕಾರಿಗಳ ಮೇಲೆ ನಿಯಂತ್ರಣ ಇಲ್ಲ ಎಂದು ಕಿಡಿ ಕಾರಿದರು.


