ಸಮಾಜದಲ್ಲಿ ಪುರುಷರು ಮತ್ತು ಮಹಿಳೆಯರ ಮಧ್ಯೆ ಅಸಮಾನತೆ ಇದ್ದರೆ ಶೋಷಣೆಗೆ ಅವಕಾಶವಾಗುತ್ತದೆ. ಹೀಗಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಪುರುಷರಿಗಿರುವಷ್ಟೇ ಹಕ್ಕುಗಳನ್ನು ಮಹಿಳೆಯರಿಗೂ ಸಂವಿಧಾನದ ಮೂಲಕ ನೀಡಿದ್ದಾರೆ. ಸಂವಿಧಾನ ಜಾರಿ ಬರುವ ಮೊದಲು ಈ ಸಮಾನತೆಯ ಹಕ್ಕುಗಳು ಇರಲಿಲ್ಲ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ಕೋಲಾರದ ವೇಮಗಲ್ ನಲ್ಲಿ ಆಯೋಜಿಸಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿಗಾಡಿನಲ್ಲಿ ಸಂಸಾರದ ಜವಾಬ್ದಾರಿ ಹೊತ್ತಿರುವ ಹೆಣ್ಣು ಮಕ್ಕಳು ಬೆಲೆಯೇರಿಕೆಯಿಂದ ಕಂಗಾಲಾಗಿದ್ದಾರೆ. ಬಿಜೆಪಿ ಸರ್ಕಾರ ಸಾಮಾನ್ಯ ಜನರ ಮೇಲೆ ಹೆಚ್ಚು ತೆರಿಗೆ ವಿಧಿಸುವ ಪ್ರವೃತ್ತಿ ಬೆಳೆಸಿಕೊಂಡಿದೆ ಎಂದು ದೂರಿದರು.
ಹಾಲು, ಮೊಸರು, ಮಜ್ಜಿಗೆ, ಮಕ್ಕಳು ಬಳಕೆ ಮಾಡುವ ಪೆನ್ನು, ಪೆನ್ಸಿಲ್, ನೋಟ್ ಬುಕ್ ಗಳ ಮೇಲೆ 5 ರಿಂದ 18ರಷ್ಟು ತೆರಿಗೆ ಹಾಕಿ ಜನರ ಸುಲಿಗೆ ಮಾಡುತ್ತಿದ್ದಾರೆ. ತೆರಿಗೆ ಕಟ್ಟುವ ಶಕ್ತಿಯಿರುವ ಜನರಿಂದ ತೆರಿಗೆ ವಸೂಲಿ ಮಾಡಬೇಕು, ಇದು ನ್ಯಾಯ ಕೂಡ. ಆದರೆ ಶ್ರೀಮಂತರ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಬಡವರಿಂದ ತೆರಿಗೆ ಹೆಚ್ಚು ವಸೂಲಿ ಮಾಡುವುದು ಈ ದೇಶಕ್ಕೆ ಮಾರಕವಾದುದ್ದು ಎಂದು ಹೇಳಿದರು.
ಒಮ್ಮೆ ಉಗ್ರಪ್ಪನವರು ಯಡಿಯೂರಪ್ಪ ಅವರನ್ನು ಸಾಲ ಮನ್ನಾ ಮಾಡುವಂತೆ ಒತ್ತಾಯ ಮಾಡಿದ್ದಕ್ಕೆ, ಯಡಿಯೂರಪ್ಪ ಅವರು ನಮ್ಮ ಸರ್ಕಾರದ ಬಳಿ ನೋಟ್ ಪ್ರಿಂಟ್ ಮಾಡುವ ಮೆಷಿನ್ ಇಟ್ಟುಕೊಂಡಿಲ್ಲ ಎಂದು ದರ್ಪದ ಉತ್ತರ ನೀಡಿದ್ದರು. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ ರೈತರ 72,000 ಕೋಟಿ ರೂ. ಸಾಲ ಮನ್ನಾ ಮಾಡಿದ್ದರು. ನಾನು ಮುಖ್ಯಮಂತ್ರಿಯಾಗಿರುವಾಗ 22 ಲಕ್ಷ 27 ಸಾವಿರ ರೈತರ 50,000 ರೂ. ವರೆಗಿನ ಒಟ್ಟು 8,165 ಕೋಟಿ ರೂಪಾಯಿ ಸಾಲಮನ್ನಾ ಮಾಡಿದ್ದೆ ಎಂದರು.

ಕೃಷಿ, ಗುಡಿ ಕೈಗಾರಿಕೆ ಮೇಲೆ ಅವಂಬಿತವಾಗಿರುವ ಮಹಿಳೆಯರು, ಸ್ವಸಹಾಯ ಸಂಘಗಳ ಸದಸ್ಯರಿಗೆ 50,000 ರೂ. ವರೆಗೆ ಬಡ್ಡಿ ರಹಿತವಾಗಿ ಸಾಲ ನೀಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಿತ್ತು. ಈಗ ನನ್ನಲ್ಲಿ ಒಂದಷ್ಟು ಮನವಿಗಳನ್ನು ನೀಡಿದ್ದಾರೆ. ರೂ.50,000 ವರೆಗೆ ನೀಡುತ್ತಿರುವ ಬಡ್ಡಿ ರಹಿತ ಸಾಲವನ್ನು ಒಂದು ಲಕ್ಷವರೆಗೆ ಹೆಚ್ಚಿಸಬೇಕು ಎಂಬ ಒತ್ತಾಯವಿದೆ, ಸಮ್ಮ ಸರ್ಕಾರ ಬಂದ ನಂತರ ಇದನ್ನು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಬೆಲೆಯೇರಿಕೆಯಿಂದ ಮಹಿಳೆಯರು ಮತ್ತು ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಹೀಗಾಗಿ ನಾವು ಅಧಿಕಾರಕ್ಕೆ ಬಂದ ಮೇಲೆ ಪ್ರತೀ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡುತ್ತೇವೆ ಹಾಗೂ ಪ್ರತೀ ಮನೆಯ ಯಜಮಾನಿಗೆ ಕುಟುಂಬ ನಿರ್ವಹಣೆಗಾಗಿ ತಿಂಗಳಿಗೆ 2000 ರೂ. ನಂತೆ ವರ್ಷಕ್ಕೆ 24,000 ರೂ. ನೀಡುತ್ತೇವೆ ಎಂದು ಹೇಳಿದರು.


