ನಮ್ಮದು ಒಂದು ವರ್ಗದ, ಒಂದು ಸಮುದಾಯದ ಪಕ್ಷವಲ್ಲ. ಎಲ್ಲರನ್ನೂ ಒಗ್ಗೂಡಿಸಿಕೊಂಡು ಬಿಜೆಪಿ ಧ್ವಜದ ಅಡಿಯಲ್ಲಿ ಸಾಗಬೇಕು. ಕರ್ನಾಟಕದಲ್ಲಿ ಬಿಜೆಪಿ ವಿಚಾರಧಾರೆ ಶಕ್ತಿಶಾಲಿಯಾಗಬೇಕು. ಸರ್ವ ಧರ್ಮಗಳನ್ನು ಒಗ್ಗೂಡಿಸಿಕೊಂಡು ಸಾಗಬೇಕಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಹೇಳಿದ್ದಾರೆ.
ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಎಲ್ಲಾ ಸಮುದಾಯಗಳ ಸಮಾವೇಶಗಳು ಬಿಜೆಪಿ ಧ್ವಜದ ಅಡಿಯಲ್ಲಿ ನಡೆಯಬೇಕು. ಇದರ ಜೊತೆಗೆ ಶಕ್ತಿ ಕೇಂದ್ರಗಳು ಮತ್ತು ಬೂತ್ ಮಟ್ಟದ ಕಾರ್ಯಕರ್ತರು ಚುರುಕಾಗಿ ಕೆಲಸ ಮಾಡಬೇಕು. ಪಕ್ಷವನ್ನು ಅಧಿಕಾರಕ್ಕೆ ತರಲು ಶಪಥ ಮಾಡಬೇಕು ಎಂದು ತಿಳಿಸಿದ್ದಾರೆ.
ದಲಿತ ಸಮುದಾಯದ ಬಗ್ಗೆ ವಿಶೇಷ ಗಮನಹರಿಸಿ ಆ ಸಮುದಾಯವನ್ನು ಬಿಜೆಪಿ ಜೊತೆ ಕೊಂಡೊಯ್ಯುವ ಕೆಲಸ ಮಾಡಬೇಕು. ಶಕ್ತಿ ಕೇಂದ್ರದಲ್ಲಿ ಉಪಹಾರ ಸಭೆ ನಡೆಯಬೇಕು. ಆಗ ಮಾತ್ರ ಜಾತಿವಾದ ಇಲ್ಲದಂತೆ ಆಗುತ್ತದೆ ಎಂದರು.
ಕಾಂಗ್ರೆಸ್ ಪಕ್ಷದವರಿಗೆ ತಿಳುವಳಿಕೆ ಬಹಳ ಕಡಿಮೆ. ಬರೀ ಟೀಕೆ ಮಾಡುವುದರಲ್ಲೇ ಕಾಲಹರಣ ಮಾಡುತ್ತಾರೆ. ಕಾಂಗ್ರೆಸ್ ಪಕ್ಷ ಭ್ರಷ್ಟಾಚಾರ, ಕಮಿಷನ್ ಮತ್ತು ಜಾತಿವಾದದಿಂದ ಬಳಲುತ್ತಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮಹಿಳೆಯರು ಸೂರ್ಯೋದಯಕ್ಕೂ ಮುನ್ನ ಹಾಗೂ ಸೂರ್ಯಾಸ್ತಮವಾದ ಮೇಲೆ ನಿತ್ಯ ಕರ್ಮಕ್ಕಾಗಿ ಮನೆಯಿಂದ ಹೊರಗೆ ಹೋಗಬೇಕಾಗಿತ್ತು. ಆದರೆ ನಮ್ಮ ಸರ್ಕಾರ ಬಂದ ಮೇಲೆ ಸ್ವಚ್ಛ ಭಾರತ್ ಯೋಜನೆಯಡಿ ಹಳ್ಳಿಹಳ್ಳಿ ಮನೆಗಳಲ್ಲು ಶೌಚಾಲಯ ನಿರ್ಮಾಣಗೊಂಡಿವೆ. ಇದರಿಂದ ಮಹಿಳೆಯರು ಅನುಭವಿಸುತ್ತಿದ್ದ ಸಮಸ್ಯೆ ತಪ್ಪಿತು ಎಂದರು.


